ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದಕ್ಕಾಗಿ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು ಐಸಿಸಿ ಟೂರ್ನಿಗೆ ಸೂಕ್ತ ಆಟಗಾರರನ್ನು ಗುರುತಿಸುವ ಸಲುವಾಗಿ ಸದ್ಯ ನಡೆಯುತ್ತಿರುವ 2024ರ ಐಪಿಎಲ್ ಪ್ರದರ್ಶನಗಳ ಮೇಲೆ ಕಣ್ಣಿಟ್ಟಿದ್ದಾರೆ.
ಹಲವು ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ದೃಢಪಟ್ಟಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ಮತ್ತು ರಿಷಭ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಕೆಲವು ಆಟಗಾರರ ಮೇಲೆ ಇನ್ನೂ ಅನುಮಾನಗಳು ಉಳಿದಿವೆ.

ನ್ಯೂಜಿಲೆಂಡ್ನ ಮಾಜಿ ವೇಗದ ಬೌಲರ್ ಸೈಮನ್ ಡೌಲ್ ಅವರು ರೋಹಿತ್ ಶರ್ಮಾ ಜೊತೆಗೆ ಭಾರತ ತಂಡವು ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಬಳಸಬೇಕು ಎಂದು ತಿಳಿಸಿದ್ದಾರೆ. ಏಕೆಂದರೆ ಈ ಕ್ರಮವು ಭಾರತಕ್ಕೆ ಹೆಚ್ಚು ವೇಗದ ಬೌಲರ್ಗಳನ್ನು ಆಡಲು ಅನುವು ಮಾಡಿಕೊಡುತ್ತದೆ, ಇದು ಬಲಿಷ್ಠ ಎದುರಾಳಿಗಳ ವಿರುದ್ಧ ಟೀಮ್ ಇಂಡಿಯಾಗೆ ಉತ್ತಮ ಆರಂಭವನ್ನು ನೀಡುತ್ತದೆ ಎಂದಿದ್ದಾರೆ.
"ನನ್ನ ಪ್ರಕಾರ 100 ಪ್ರತಿಶತ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಬೇಕು. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಾರದು. ಏಕೆಂದರೆ ಅವರು ಅಲ್ಲಿ ಬ್ಯಾಟಿಂಗ್ ಮಾಡಿದರೆ ರಿಂಕು ಸಿಂಗ್ ಹೊರಗುಳಿಯುತ್ತಾರೆ. ನನ್ನ ಆಯ್ಕೆಯ ಭಾರತದ ಆಡುವ 11ರ ಬಳಗದಲ್ಲಿ ರಿಂಕು ಸಿಂಗ್ ಆಡಬೇಕು," ಎಂದು ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ತಿಳಿಸಿದ್ದಾರೆ.

ಹೀಗಾಗಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಬೇಕಿದೆ. ಯಾರೊಂದಿಗೆ ಇನ್ನಿಂಗ್ಸ್ ತೆರೆಯಬೇಕು, ಅದು ಭಾರತ ತಂಡಕ್ಕೆ ಬಿಟ್ಟದ್ದು. ರೋಹಿತ್ ಶರ್ಮಾ ಅಥವಾ ಯಶಸ್ವಿ ಜೈಸ್ವಾಲ್ ಆಗಿರಲಿ, ಆದರೆ ವಿರಾಟ್ ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ಏಕೆಂದರೆ ಸದ್ಯ ಅದು ಕೊಹ್ಲಿಯ ಅತ್ಯುತ್ತಮ ಸ್ಥಾನವಾಗಿದೆ ಎಂದರು.
"ವಿರಾಟ್ ಕೊಹ್ಲಿ ವೇಗದ ಬೌಲರ್ಗಳಿಗೆ ಎಲ್ಲರಿಗಿಂತ ಉತ್ತಮವಾಗಿ ಹೊಡೆಯುತ್ತಾರೆ ಮತ್ತು ಬಾಲ್ ಅನ್ನು ಸುಂದರವಾಗಿ ಬಾರಿಸುತ್ತಾರೆ. ಸ್ಪಿನ್ ಬೌಲಿಂಗ್ ವಿರುದ್ಧ ಬರುವುದು ಕೊಹ್ಲಿಗೆ ಅತ್ಯುತ್ತಮ ಆಯ್ಕೆಯಲ್ಲ," ಎಂದು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ಕ್ರಿಕ್ಬಜ್ನಲ್ಲಿ ಅಭಿಪ್ರಾಯಪಟ್ಟರು.

ಯಶಸ್ವಿ ಜೈಸ್ವಾಲ್ ಉತ್ತಮ ಫಾರ್ಮ್ನಲ್ಲಿದ್ದರೂ, ಟಿ20 ವಿಶ್ವಕಪ್ಗಾಗಿ ಭಾರತ ತಂಡದ ಆಡುವ 11ರ ಬಳಗದಲ್ಲಿ ಅವರು ಸ್ಥಾನ ಪಡೆಯುವ ಸಾಧ್ಯತೆಯಿಲ್ಲ ಎಂದು ಸೈಮನ್ ಡೌಲ್ ಹೇಳಿದರು.
"ಇದು ನನಗೆ ಮೂರ್ಖತನವೆಂದು ತೋರುತ್ತದೆ. ಆದರೆ ಯಶಸ್ವಿ ಜೈಸ್ವಾಲ್ ಹೊರಗಿದ್ದರೆ, ಬದಲಾಗಿ ಸಂಜು ಸ್ಯಾಮ್ಸನ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು, ನಂತರ ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಂಕು ಸಿಂಗ್ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡಬೇಕು," ಎಂದು ಕಿವೀಸ್ ಮಾಜಿ ಬೌಲರ್ ಸೈಮನ್ ಡೌಲ್ ತಿಳಿಸಿದರು.
ಸೈಮನ್ ಡೌಲ್ ಸೂಚಿಸಿದ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶುಭ್ಮನ್ ಗಿಲ್ ರೂಪದಲ್ಲಿ ಒಂದೆರಡು ದೊಡ್ಡ ಅನುಪಸ್ಥಿತಿಗಳನ್ನು ಕಾಣಬಹುದು. ಇನ್ನು ತಮ್ಮ ಇತ್ತೀಚಿನ ಫಾರ್ಮ್ನಿಂದಾಗಿ ಇತರ ಕೆಲವು ಆಟಗಾರರು ತಂಡದಲ್ಲಿ ಸ್ಥಾನ ಪಡೆಯಬಹುದು. ರಿಂಕು ಸಿಂಗ್ ಕಳೆದ ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಭಾರತ ತಂಡಕ್ಕೆ ನಿರಂತರವಾಗಿರಬೇಕು ಎಂದು ಸೈಮನ್ ಡೌಲ್ ಅಭಿಪ್ರಾಯಪಟ್ಟಿದ್ದಾರೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡದಲ್ಲಿ ವಿಶೇಷವಾಗಿ ವೈಟ್ ಬಾಲ್ ಕ್ರಿಕೆಟ್ನಲ್ಲಿ ಆಧಾರಸ್ತಂಭವಾಗಿದ್ದಾರೆ. ಆದರೆ, ಹಾರ್ದಿಕ್ ಪಾಂಡ್ಯ ಮಾತ್ರ ಬ್ಯಾಟರ್ ಆಗಿ ಆಡುತ್ತಿದ್ದರೆ? ಆ ಸಂದರ್ಭದಲ್ಲಿ ಅವರು 2024ರ ಟಿ20 ವಿಶ್ವಕಪ್ ತಂಡವನ್ನು ಸೇರುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಕಳೆದ ಮೂರು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಏಕೈಕ ಓವರ್ ಬೌಲಿಂಗ್ ಮಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ನಾಯಕ ಬೌಲಿಂಗ್ ಮಾಡದಿರಲು ನಿರ್ಧರಿಸಿದರು. ನಂತರ ಆರ್ಸಿಬಿ ವಿರುದ್ಧ ಬೌಲ್ ಮಾಡಿದ ಅವರು ಒಂದು ಓವರ್ನಲ್ಲಿ 13 ರನ್ಗಳನ್ನು ಬಿಟ್ಟುಕೊಟ್ಟರು.
"ಹಾರ್ದಿಕ್ ಬೌಲಿಂಗ್ ಮಾಡದಿದ್ದರೆ, ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರಾ?," ಕ್ರಿಕ್ಬಝ್ನಲ್ಲಿ ಮಾತನಾಡುವಾಗ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಪ್ರಶ್ನಿಸಿದ್ದಾರೆ.
"ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ದರೆ ಭಾರತದ ಅಗ್ರ ಆರು ಬ್ಯಾಟರ್ಗಳಲ್ಲಿ ಅವರಿಗೆ ಸ್ಥಾನವಿಲ್ಲ. ಏಕೆಂದರೆ ಅವರು ಬೌಲಿಂಗ್ ಮಾಡದಿದ್ದರೆ ಮತ್ತು ಬೌಲಿಂಗ್ನಲ್ಲಿ ಉತ್ತಮವಾಗಿ ಮುಗಿಸದಿದ್ದರೆ, ಅವರು ಬ್ಯಾಟಿಂಗ್ ಮಾಡಬೇಕಾಗಿದೆ. ಆದರೆ ಈಗಾಗಲೇ ಬ್ಯಾಟಿಂಗ್ ವಿಭಾಗದಲ್ಲಿ ಎಲ್ಲಾ ಸ್ಥಾನಗಳು ಭರ್ತಿಯಾಗಿವೆ," ಎಂದರು.