ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಟೀಮ್ ಇಂಡಿಯಾ ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ, ಪ್ರಶ್ನೆಗಳು ಎದ್ದಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದೆ. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಸತತ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಈ ಒಂದು ಸೋಲು ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಹತ್ತು ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ. ಅಲ್ಲದೆ ಸೆಮಿಫೈನಲ್ಗೆ ಟೀಮ್ ಇಂಡಿಯಾ ತಲುಪುವುದು ಹೇಗೆ ಎಂಬ ಲೆಕ್ಕಾಚಾರಗಳನ್ನು ಆರಂಭಿಸಿದೆ.
ಭಾನುವಾರ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಈ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೇವಿಡ್ ಮಿಲ್ಲರ್ ಅರ್ಧಶತಕ ಬಾರಿಸಿ ಮಿಂಚಿದರು. ಇವರ ಭರ್ಜರಿ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ 188 ರನ್ಗಳ ಗುರಿಯನ್ನು ಭಾರತಕ್ಕೆ ನೀಡಿತು. ಆದರೆ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, 76 ರನ್ಗಳ ಸೋಲು ಕಾಣುವಂತೆ ಆಯಿತು.

ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದರೂ ಸಹ ಸೂಪರ್ 8 ಹಂತದಲ್ಲಿ ಮುಗ್ಗರಿಸಿತು. ಈ ಮೂಲಕ ಭಾರತ ತನ್ನ ಸೆಮಿಫೈನಲ್ ಹಾದಿಯನ್ನು ಕಷ್ಟವಾಗಿಸಿಕೊಂಡಿದೆ. ಭಾರತ ತನ್ನ ಸೂಪರ್ 8 ಹಂತದ ಮುಂದಿನ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಫೆಬ್ರವರಿ 26 ರಂದು ಚೆನ್ನೈನಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಭಾರತ ದೊಡ್ಡ ಅಂತರದ ಗೆಲುವು ದಾಖಲಿಸುವುದು ಬಹಳ ಮುಖ್ಯವಾಗಿದೆ. ಈ ಪಂದ್ಯ ಮುಗಿದ ಬಳಿಕ ಭಾರತ ಮಾರ್ಚ್ 1 ರಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಆಡಲಿದೆ. ಸೆಮಿಫೈನಲ್ನಲ್ಲಿ ಭಾರತ ತನ್ನ ಸ್ಥಾನ ಪಡೆಯಲು ಭಾರತ ಈ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ.
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಅಲ್ಲದೆ 76 ರನ್ಗಳಿಂದ ಸೋಲು ಕಂಡಿದೆ. ಹೀಗಾಗಿ ಟೀಮ್ ಇಂಡಿಯಾದ ನೆಟ್ ರನ್ ರೇಟ್ -3,800 ಕ್ಕೆ ಇಳಿದಿದೆ. ಇದು ಅತ್ಯಂತ ಕಳಪೆ ರನ್ ರೇಟ್ ಆಗಿದೆ. ದಕ್ಷಿಣ ಆಫ್ರಿಕಾ ಸೂಪರ್ 8 ಹಂತದ ತನ್ನ ಎಲ್ಲ ಪಂದ್ಯಗಳನ್ನು ಗೆದ್ದರೆ ಅಗ್ರ ಸ್ಥಾನದೊಂದಿಗೆ ಮುಂದಿನ ಹಂತ ಪ್ರವೇಶಿಸುತ್ತದೆ. ಇನ್ನು ಭಾರತ ಸಹ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ಮಾತ್ರ ಸೆಮಿಫೈನಲ್ ಹಂತವನ್ನು ಪ್ರವೇಶಿಸುತ್ತದೆ.

ಭಾರತ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದಲ್ಲಿ 4 ಅಂಕವನ್ನು ಕಲೆ ಹಾಕುತ್ತದೆ. ಇನ್ನು ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ತಂಡಗಳು ಸಹ ಇಷ್ಟೇ ಪಂದ್ಯಗಳನ್ನು ಗೆದ್ದರೆ ಆಗ ಸೆಮಿಫೈನಲ್ ಲೆಕ್ಕಾಚಾರ ರನ್ ರೇಟ್ ಆಧಾರದ ಮೇಲೆ ನಿಲ್ಲುತ್ತದೆ. ಭಾರತ ದಕ್ಷಿಣ ಆಫ್ರಿಕಾ ವಿರುದ್ದದ ತನ್ನ ರನ್ ರೇಟ್ ಸುಧಾರಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲಿನ ಕಹಿಯನ್ನು ಸರಿಪಡಿಸಿಕೊಳ್ಳಲು ದೊಡ್ಡ ಅಂತರದ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಭಾರತ ತನ್ನ ಘನತೆಗೆ ತಕ್ಕ ಪ್ರದರ್ಶನವನ್ನು ನೀಡಿದರೆ ಮಾತ್ರ ಉಪಾಂತ್ಯ ಪ್ರವೇಶಿಸುವ ಕನಸು ನನಸಾಗುತ್ತದೆ. ಇಲ್ಲದೇ ಇದ್ದರೆ ಸೂಪರ್ 8 ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್ ಹೇಳಬೇಕಾಗುತ್ತದೆ.