ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಮೇಗಾ ಟೂರ್ನಿಗಾಗಿ ಎಲ್ಲ ತಂಡಗಳು ಭರದ ಸಿದ್ಧತೆ ನಡೆಸಿವೆ. ಹಾಲಿ ಚಾಂಪಿಯನ್ ಭಾರತ ಈ ಟೂರ್ನಿಯಲ್ಲಿ ಪ್ರವೇಶ ಪಡೆಯಲಿದೆ. ಎಲ್ಲ ತಂಡಗಳು ಕೊನೆಯ ಹಂತದ ಕಸರತ್ತು ನಡೆಸಿವೆ. ಶನಿವಾರದಿಂದ ಲೀಗ್ ಹಂತದ ಪಂದ್ಯಗಳು ಆರಂಭವಾಗಲಿವೆ. ಟಿ20 ವಿಶ್ವಕಪ್ಗೆ ಭಾರತ ತಂಡ ಮೈದಾನಕ್ಕೆ ಇಳಿಯುವ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.
ಟಿ20 ಕ್ರಿಕೆಟ್ನಲ್ಲಿ ಬಿಗುವಿನ ದಾಳಿ ನಡೆಸಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟಾರ್ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದ ಸಮಸ್ಯೆಯಿಂದ ಬಳುಲುತ್ತಿದ್ದು, ವಿಶ್ವಕಪ್ನಿಂದ ಹೊರ ನಡೆದಿದ್ದಾರೆ ಎಂದು ವರದಿಗಳು ಬರುತ್ತಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಹರ್ಷಿತ್ ರಾಣಾ ಗಾಯಕ್ಕೆ ತುತ್ತಾಗಿದ್ದರು. ಈ ವೇಳೆ ಅವರ ಗಾಯ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಇವರು ಕುಂಟುತ್ತಲೇ ಮೈದಾನದಿಂದ ಹೊರ ನಡೆಯಬೇಕಾಯಿತು. ಬಲಗೈ ವೇಗದ ಬೌಲರ್ ಅಭ್ಯಾಸ ಪಂದ್ಯದಲ್ಲಿ ಕೇವಲ ಒಂದೇ ಓವರ್ ಬೌಲ್ ಮಾಡಿದ್ದರು.

ಗಾಯಗೊಂಡ ಮರುದಿನ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಬಲ ಮೊಣಕಾಲಿನಲ್ಲಿ ನೀರು ತುಂಬಿಕೊಂಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿತ್ತು. ಸ್ಕ್ಯಾನಿಂಗ್ನಲ್ಲಿ ಬಲ ಮೊಣಕಾಲಿನ ಮೆನಿಸ್ಕಸ್ನಲ್ಲಿ ಗಾಯವಾದ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಫೆಬ್ರವರಿ 6 ರಂದು ವೈದ್ಯರ ಸಲಹೆಯನ್ನು ಸಹ ಪಡೆಯಲಾಯಿತು ಎಂದು ತಿಳಿದು ಬಂದಿದೆ.
ಅಮೆರಿಕ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಮಾತನಾಡಿದರು. ಇವರು ಈ ವೇಳೆ ಹರ್ಷಿತ್ ರಾಣಾ ಅವರ ಗಾಯದ ಬಗ್ಗೆ ಹೆಚ್ಚಿನ ಅಪ್ಡೇಟ್ ನೀಡಲಿಲ್ಲ. ಆದರೆ ಅವರು ಪಂದ್ಯ ಆಡುವಷ್ಟು ಉತ್ತಮವಾಗಿಲ್ಲ ಎಂದು ತಿಳಿಸಿದರು. ನಿಶ್ಚಿತವಾಗಿ ಹರ್ಷಿತ್ ರಾಣಾ ಅವರನ್ನು ತಂಡದಿಂದ ಹೊರಗಿಟ್ಟರೆ ಅದು ತಂಡಕ್ಕೆ ದೊಡ್ಡ ಪೆಟ್ಟು ಎಂದು ಸೂರ್ಯ ತಿಳಿಸಿದ್ದಾರೆ. ತಂಡದ ಸಮತೋಲನವನ್ನು ಕಾಪಾಡಿಕೊಳ್ಳಲು ಬೇಕಾದ ಸಂಯೋಜನೆಗಳನ್ನು ನಾವು ನೋಡುತ್ತಿದ್ದೇವೆ. ನಮ್ಮ ಬೆಂಚ್ ಸ್ಟ್ರೆಂಥ್ ಬಲಾಢ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹರ್ಷಿತ್ ರಾಣಾ ಒಂದು ವೇಳೆ ಟೂರ್ನಿಯಿಂದ ಹೊರ ನಡೆದರೆ ಈ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ವೇಳೆ ಟೀಮ್ ಇಂಡಿಯಾದ ಮಾರಕ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇವರು ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಇದೇ ಸ್ಥಾನದ ಮೇಲೆ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಸಹ ಕಣ್ಣು ನೆಟ್ಟಿದ್ದಾರೆ. ರಾಣಾ ಟೂರ್ನಿಯಿಂದ ಹೊರ ನಡೆದರೆ, ಈ ಇಬ್ಬರಲ್ಲಿ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಹರ್ಷಿತ್ ರಾಣಾ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದರಿಂದ ಬೇರೆಯವರು ಈ ಸ್ಥಾನವನ್ನು ಹೇಗೆ ತುಂಬುತ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.