
ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ನಲ್ಲಿ ಸೆಮಿಫೈನಲ್ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಸೆಣೆಸಾಡಲಿದ್ದು ಈ ಪಂದ್ಯದ ಮೇಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ದೃಷ್ಟಿ ನೆಟ್ಟಿದೆ. ಈ ಸಂದರ್ಭದಲ್ಲಿ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾಗೆ ಸಲಹೆ ನೀಡಿದ್ದಾರೆ.
ಟೀಮ್ ಇಂಡಿಯಾ ಬಗ್ಗೆ ಮಿಥಾಲಿ ರಾಜ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. "ಭಾರತ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದುಈ ಮೂಲಕ ಫೈನಲ್ಗೆ ಪ್ರವೇಶಿಸುವ ವಿಶ್ವಾಸದಲ್ಲಿದೆ. ಆದರೆ ಭಾರತ ತಂಡ ಇನ್ನು ಕೂಡ ಕೆಲ ವಿಚಾರಗಳಲ್ಲಿ ಪ್ರಗತಿ ಸಾಧಿಸುವ ಅವಕಾಶವನ್ನು ಹೊಂದಿದೆ. ಇವುಗಳನ್ನು ಸರಿಪಡಿಸಿದರೆ ಭಾರತ ಗೆಲ್ಲುವ ಅವಕಾಶ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ ಮಿಥಾಲಿ ರಾಜ್.
"ಭಾರತ ತಂಡ ಇನ್ನೂ ತನ್ನ ನೈಜ ಪ್ರದರ್ಶನವನ್ನು ನಿಡಬೇಕಾಗಿದೆ. ಪ್ರತಿ ಪಂದ್ಯದ ದಿನದಲ್ಲಿ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಬೆಕಾಗಿದೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ ಅರ್ಶ್ದೀಪ್ ಪವರ್ಪ್ಲೇನಲ್ಲಿ ವಿಕೆಟ್ಗಳನ್ನು ಪಡೆಯುವ ಮೂಲಕ ಈ ಹಂತದಲ್ಲಿ ಭಾರತದ ಕೈಮೇಲಾಗುವಂತೆ ಮಾಡಿದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ಭಾರತಕ್ಕೆ ಪವರ್ಪ್ಲೇನಲ್ಲಿ ಕಠಿಣ ಸವಾಲೊಡ್ಡಿತ್ತು" ಎಂದಿದ್ದಾರೆ ಮಿಥಾಲಿ ರಾಜ್.
ಇನ್ನು ಮುಂದುವರಿದು ಮಾತನಾಡಿದ ಮಿಥಾಲಿ ರಾಜ್ ಟೀಮ್ ಇಂಡಿಯಾ ಪರವಾಗಿ ಆರಂಭಿಕರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ. "ಇಬ್ಬರು ಆರಂಭಿಕ ಆಟಗಾರರು ಕೂಡ ಒಟ್ಟಾಗಿ ತಮ್ಮ ಪ್ರದರ್ಶನ ನೀಡಬೇಕಾಗಿದೆ. ಆರಂಬಿಕರಿಂದ ಇನ್ನು ಕೂಡ ಸಮರ್ಥ ಆರಂಭಿಕ ಜೊತೆಯಾಟ ದೊರೆತಿಲ್ಲ. ನಾವು ಪವರ್ಪ್ಲೇಬಲ್ಲಿಯೇ ವಿಕೆಟ್ಗಳನ್ನು ಕಳೆದುಕೊಳ್ಳುತ್ತಿದ್ದೇವೆ" ಎಂದಿದ್ದಾರೆ ಮಿಥಾಲಿ ರಾಜ್.
ಇನ್ನು ಜಿಂಬಾಬ್ವೆ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಪ್ರದರ್ಶನದಿಂದಾಗಿ ದೊಡ್ಡ ಮೊತ್ತದ ಗುರಿ ನೀಡಲು ಯಶಸ್ವಿಯಾಯಿತು. ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೂಡ ಅರ್ಧ ಶತಕ ಸಿಡಿಸಿ ಮಿಂಚಿದರೆ ನಂತರ ಸೂರ್ಯಕುಮಾರ್ ಯಾದವ್ ಜಿಂಬಾಬ್ವೆ ಬೌಲರ್ಗಳಿಗೆ ಆಘಾತ ನೀಡಿದರು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 25 ರನ್ಗಳಿಸಿ ವಿಕೆಟ್ ಕಳೆದುಕೊಂಡರು. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ 186 ರನ್ಗಳಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಂಪೂರ್ಣವಾಗಿ ವಿಫಲವಾಯಿತು. ಸಿಕಂದರ್ ರಾಜಾ ಹಾಗೂ ರಿಯಾನ್ ಬರ್ಲ್ ಮಾತ್ರವೇ ಕೆಲ ಹೊತ್ತು ಹೋರಾಟ ನಡೆಸಿದ ಪರಿಣಾಮವಾಗಿ ಜಿಂಬಾಬ್ವೆ 115 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಈ ಮೂಲಕ ಈ ಪಂದ್ಯದಲ್ಲಿ 71 ರನ್ಗಳ ಬೃಹತ್ ಅಂತರದಿಂದ ಭಾರತ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾ ಪರವಾಗಿ ಆರ್ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರೆ ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಸಂಪಾದಿಸಿದರು. ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.