ಈ ವಿಶ್ವಕಪ್ ಕಲಿಸಿದ ಪಾಠ ಇದು: ಭಾರತ, ಪಾಕಿಸ್ತಾನ ವಿಶ್ವಕಪ್ ಗೆಲ್ಲದಿರಲು ದೊಡ್ಡ ಕಾರಣ ಹೇಳಿದ ಕೈಫ್

ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದರೂ ಸೆಮಿಫೈನಲ್ನಲ್ಲಿ ಸೋತು ಟೂರ್ನಿಯಿಂದ ಹೊರಬಿತ್ತು. ಇನ್ನು ಪಾಕಿಸ್ತಾನ ತಂಡ ಕೂಡ ಸಾಕಷ್ಟು ಭರವಸೆ ಮೂಡಿಸುವ ಪ್ರದರ್ಶನ ನೀಡಿದ ಬಳಿಕ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ವಿಶ್ವಕಪ್ನ ಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿಕೆ ನೀಡಿದ್ದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೋಲು ಅನುಭವಿಸಲು ಕಾರಣವಾದ ಪ್ರಮುಖ ಅಂಶವನ್ನು ಹೇಳಿದ್ದಾರೆ.
ಇನ್ನು ಪಾಕಿಸ್ತಾನ ಹಾಗೂ ಭಾರತ ತಂಡಗಳು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಒಂದೇ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿದೆ. ಇಂಗ್ಲೆಂಡ್ ತಂಡ ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳಿಗೂ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿತ್ತು. ಭಾರತವನ್ನು ಸೆಮಿಫೈನಲ್ನಲ್ಲಿ ಮಣಿಸಿದ ಇಂಗ್ಲೆಂಡ್ ತಂಡ ಪಾಕಿಸ್ತಾನ ತಂಡವನ್ನು ಫೈನಲ್ ಹಂತದಲ್ಲಿ ಮಣಿಸಿತ್ತು. ಈ ಮೂಲಕ ವಿಶ್ವಕಪ್ ಗೆದ್ದು ಬೀಗಿದೆ ಇಂಗ್ಲೆಂಡ್.
ಈ ವಿಶ್ವಕಪ್ನಲ್ಲಿನ ಈ ಫಲಿತಾಂಶದಿಂದಾಗಿ ದೊಡ್ಡ ಪಾಠ ಎಲ್ಲಾ ತಂಡಗಳಿಗೂ ಇದೆ ಎಂಬ ಅಂಶವನ್ನು ಮೊಹಮ್ಮದ್ ಕೈಫ್ ಹೇಳಿಕೊಂಡಿದ್ದಾರೆ. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಸೋಲಿನಿಂದ ಕಲಿತುಕೊಳ್ಳಬೇಕಿರುವುದು ಏನು ಎಂಬುದನ್ನು ಉಲ್ಲೇಖಿಸಿದ್ದಾರೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್.

ಮೂರು ತಂಡಗಳ ವೈರುಧ್ಯಗಳನ್ನು ಹೇಳಿದ ಕೈಫ್
ಈ ಬಾರಿಯ ಟಿ20 ವಿಶ್ವಕಪ್ನ ಅಗ್ರ ಮೂರು ತಂಡಗಳಾದ ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಭಾರತ ತಂಡಗಳ ನಡುವಿನ ಭಿನ್ನತೆಯನ್ನು ಮೊಹಮ್ಮದ್ ಕೈಫ್ ಉಲ್ಲೇಖಿಸಿದ್ದಾರೆ. ಪಾಕಿಸ್ತಾನ ತಂಡ ಅದ್ಭುತವಾದ ಬೌಲಿಂಗ್ ವಿಭಾಗವನ್ನು ಹೊಂದಿದೆ. ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಬೌಲಿಂಗ್ ಹಾಗೂ ಫೀಲ್ಡಿಂಗ್ ಈ ಮೂರು ವಿಭಾಗದಲ್ಲಿಯೂ ಬಲಿಷ್ಠವಾಗಿದೆ ಎಂದಿದ್ದಾರೆ ಮೊಹಮ್ಮದ್ ಕೈಫ್.

ಈ ಪಾಠವನ್ನು ಕಲಿಯಬೇಕಿದೆ ಎಂದ ಕೈಫ್
ಮುಂದುವರಿದು ಮಾತನಾಡಿದ ಮೊಹಮ್ಮದ್ ಕೈಫ್ "ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಕಲಿತುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ ಪಾಕಿಸ್ತಾನ ಕೇವಲ ಬೌಲಿಂಗ್ನಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ. ಭಾರತ ತಂಡ ಕೇವಲ ಬ್ಯಾಟಿಂಗ್ನಿಂದ ಗೆಲುವು ಸಾಧ್ಯವಿಲ್ಲ. ಆದರೆ ಇಂಗ್ಲೆಂಡ್ ತಂಡ ಬ್ಯಾಟರ್ಗಳು, ಸ್ಪಿನ್ನರ್ಗಳು, ವೇಗಿಗಳು, ಫಿಲ್ಡರ್ಗಳು ಹಾಗೂ ಅದೃಷ್ಟವನ್ನು ಹೊಂದಿತ್ತು" ಎಂದಿದ್ದಾರೆ ಮೊಹಮ್ಮದ್ ಕೈಫ್.

2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಇಂಗ್ಲೆಂಡ್
ಇನ್ನು ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. ಪಾಕಿಸ್ತಾನ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಐದು ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಎಲ್ಲಾ ಮೂರು ವಿಭಾಗದಲ್ಲಿಯೂ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿದ್ದು ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯದಲ್ಲಿ ಕೇವಲ 12 ರನ್ಗಳನ್ನು ನೀಡಿ 3 ವಿಕೆಟ್ ಪಡೆದ ಯುವ ಆಟಗಾರ ಸ್ಯಾಮ್ ಕರನ್ ಪಂದ್ಯಶ್ರೇಷ್ಠ ಹಾಗೂ ಟೂರ್ನಿಯ ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾದಲ್ಲಿ ಆಗಲಿದೆಯಾ ಬದಲಾವಣೆ
ಇನ್ನು ಈ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಕಾರಣ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ. ಅದರಲ್ಲೂ ಈ ಫಲಿತಾಂಶದಿಂದಾಗಿ ಸಾಕಷ್ಟು ಬದಲಾವಣೆಗಳನ್ನು ಕೂಡ ನಿರೀಕ್ಷಿಸಲಾಗುತ್ತಿದೆ. ಕೆಲ ಹಿರಿಯ ಆಟಗಾರರು ಚುಟುಕು ಮಾದರಿಯಿಂದ ಹೊರಗುಳಿಯಲಿ ಎಂಬ ಅಭಿಪ್ರಾಯಗಳು ಜೋರಾಗಿ ವ್ಯಕ್ತವಾಗಿದೆ. ಬಿಸಿಸಿಐ ಮೇಲೆ ಈ ವಿಚಾರವಾಗಿ ಸಾಕಷ್ಟು ಒತ್ತಡಗಳು ಬರುತ್ತಿದ್ದು ಮುಂದಿನ ದಿನಗಳಲ್ಲಿ ಯಾವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications