
ಟಿ20 ವಿಶ್ವಕಪ್ನಲ್ಲಿ ಮೊದಲ ಪಂದ್ಯಗಳನ್ನು ಪಾಕಿಸ್ತಾನದ ವಿರುದ್ಧ ಸೋತಿರುವ ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು ತನ್ನ ಮುಂದಿನ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದೆ. ಮುಂದಿನ ಭಾನುವಾರ ಈ ಪಂದ್ಯ ನಡೆಯಲಿದೆ. ಆದರೆ ನ್ಯೂಜಿಲೆಂಡ್ ತಂಡದ ಪ್ರಧಾನ ಆಟಗಾರ ಮಾರ್ಟಿಲ್ ಗಪ್ಟಿಲ್ ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದು ಕಿವೀಸ್ ಪಡೆಗೆ ಆಘಾತ ಉಂಟು ಮಾಡಿತ್ತು. ಆದರೆ ಇದೀಗ ಈ ವಿಚಾರವಾಗಿ ಕಿವೀಸ್ ಪಾಲಿಗೆ ಆಶಾದಾಯಕ ಬೆಳವಣಿಗೆ ನಡೆದಿದೆ.
ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಭಾರತ ವಿರುದ್ಧದ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಭಾರತ ವಿರುದ್ಧದ ಪಂದ್ಯಕ್ಕೆ ಮಾರ್ಟಿನ್ ಗಪ್ಟಿಲ್ ಆಡಲು ಸಮರ್ಥರಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಗುರುವಾರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.
ಕಳೆದ ಮಂಗಳವಾರ ನಡೆದ ಪಂದ್ಯದಲ್ಲಿ ಕಿವೀಸ್ ಪಡೆಯ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಹ್ಯಾರಿಸ್ ರವೂಫ್ ಎಸೆತದಲ್ಲಿ ಕಾಲಿನ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಈ ಪಂದ್ಯದಲ್ಲಿ ಗಪ್ಟಿಲ್ 17 ರನ್ಗಳಿಸಿ ವಿಕೆಟ್ ಕಳೆದುಕೊಂಡಿದ್ದರು. ಕಿವೀಸ್ ಪಡೆ ಈ ಪಂದ್ಯವನ್ನು 5 ವಿಕೆಟ್ಗಳ ಅಂತರದಿಂದ ಕಳೆದುಕೊಂಡಿತ್ತು. ಈ ಗಾಯದ ಕಾರಣದಿಂದಾಗಿ ನ್ಯೂಜಿಲೆಂಡ್ ತಂಡದ ಈ ಅನುಭವಿ ಆಟಗಾರ ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ ಎನ್ನಲಾಗಿತ್ತು.
"ಮಾರ್ಟಿನ್ ಗಪ್ಟಿಲ್ ಅವರ ಎಡ ಗಾಲಿನ ಹೆಬ್ಬೆರಳಿಗೆ ಬಲವಾದ ಏಟು ಬಿದ್ದಿದ್ದು ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಆದರೆ ಮುಂದಿನ ಭಾನುವಾರ ರಾತ್ರಿ ಭಾರತದ ವಿರುದ್ಧ ನಡೆಯುವ ಪಂದ್ಯಕ್ಕೆ ಮಾರ್ಟಿನ್ ಗಪ್ಟಿಲ್ ಲಭ್ಯವಿರಲಿದ್ದಾರೆ. ಶುಕ್ರವಾರ ನಡೆಯುವ ಅಭ್ಯಾಸದ ಸಂದರ್ಭದಲ್ಲಿ ಅವರನ್ನು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ" ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದ ವಿರುದ್ಧದ ಪಂದ್ಯಕ್ಕಾಗಿ ನ್ಯೂಜಿಲೆಂಡ್ ತಂಡ ಶುಕ್ರವಾರ ಹಾಗೂ ಶನಿವಾರ ಅಭ್ಯಾಸವನ್ನು ನಡೆಸಲಿದೆ. ಭಾರತ ಹಾಗೂ ಪಾಕಿಸ್ತಾನ ಎರಡು ತಮಡಗಳು ಕೂಡ ತಮ್ಮ ಮೊದಲ ಪಂದ್ಯವನ್ನು ಸೋತಿರುವ ಕಾರಣದಿಂದಾಗಿ ಮುಂದಿನ ಭಾನುವಾರ ನಡೆಯಲಿರುವ ಪಂದ್ಯದ ಫಲಿತಾಂಶ ಎರಡು ತಂಡಗಳಿಗೂ ಬಹಳ ಪ್ರಮುಖವಾಗಲಿದೆ.
ಇನ್ನು ಮಾರ್ಟಿನ್ ಗಪ್ಟಿಲ್ ಗಾಯದ ವಿಚಾರವಾಗಿ ಕಿವೀಸ್ ಪಡೆಯ ಕೋಚ್ ಗ್ಯಾರಿ ಸ್ಟೀಡ್ ಕೂಡ ಪ್ರತಿಕ್ರಿಯಿಸಿದ್ದಾರೆ. "ಮುಂದಿನ ಒಂದು ದಿನದಲ್ಲಿ ಅವರ ಚೇತರಿಕೆ ಯಾವ ರೀತಿ ಆಗಲಿದೆ ಎಂಬುದನ್ನು ನಾವು ಗಮನಿಸಲಿದ್ದೇವೆ. ಪಂದ್ಯ ಮುಗಿಯುವಷ್ಟರಲ್ಲಿ ಅವರು ಸಾಕಷ್ಟು ನೋವಿಗೆ ಒಳಗಾಗಿದ್ದರು. ಮುಂದಿನ 24 ಗಂಟೆ ಅಥವಾ 48 ಗಂಟೆಯಲ್ಲಿ ಹೇಗೆ ಮುಂದಿವರಿಯಲಿದೆ ಎಂಬುದನನ್ಉ ನಾವು ಗಮನಿಸಲಿದ್ದೇವೆ" ಎಂದು ಗ್ಯಾರಿ ಸ್ಟೀಡ್ ತೀಳಿಸಿದ್ದಾರೆ.
ಇನ್ನು ಮಾರ್ಟಿನ್ ಗಪ್ಟಿಲ್ ಗಾಯಗೊಂಡಿರುವುದು ನ್ಯೂಜಿಲೆಂಡ್ ತಂಡಕ್ಕೆ ಎದುರಾದ ಎರಡನೇ ಆಘಾತವಾಗಿದೆ. ಅದಕ್ಕೂ ಮುನ್ನ ಕಿವೀಸ್ ವೇಗಿ ಲ್ಯೂಕಿ ಫರ್ಗ್ಯೂಸನ್ ಸ್ನಾಯು ಸೆಳೆತಕ್ಕೆ ಒಳಗಾಗಿ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.