15 ಆಟಗಾರರ ತಂಡವನ್ನು ಸಂಪೂರ್ಣವಾಗಿ ಆಯ್ಕೆ ಮಾಡಿದ್ದು ಆಯ್ಕೆಗಾರರೇ
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ 15 ಆಟಗಾರರ ತಂಡವನ್ನು ಆಯ್ಕೆಗಾರರು ಆಯ್ಕೆ ಮಾಡಿದ್ದರು. ಈ ತಂಡ ಪ್ರಕಟವಾದಾಗ ಶಿಖರ್ ಧವನ್ ಮತ್ತು ಯುಜುವೇಂದ್ರ ಚಾಹಲ್ ರೀತಿಯ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಟೀಮ್ ಇಂಡಿಯಾ ಆಯ್ಕೆಗಾರರು, ನಾಯಕ ವಿರಾಟ್ ಕೊಹ್ಲಿ ಮತ್ತು ತರಬೇತುದಾರನಾದ ರವಿಶಾಸ್ತ್ರಿ ವಿರುದ್ಧ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಕಿಡಿಕಾರಿದ್ದರು. ಈ ಕುರಿತಾಗಿ ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದ ಎಲ್ಲಾ ಆಟಗಾರರನ್ನು ಸಂಪೂರ್ಣವಾಗಿ ಆಯ್ಕೆ ಮಾಡಿದ್ದು ಆಯ್ಕೆಗಾರರೇ ಎಂದು ಹೇಳಿಕೆ ನೀಡಿದ್ದಾರೆ.
ಈ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿರಲಿಲ್ಲ
ಇನ್ನೂ ಮುಂದುವರೆದು ಮಾತನಾಡಿರುವ ರವಿಶಾಸ್ತ್ರಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡುವಾಗ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತರಬೇತುದಾರನಾಗಿರುವ ತಾನೂ ಕೂಡ ಭಾಗಿಯಾಗಿರಲಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಗೂ ಮತ್ತು ತಮಗೂ ಈ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುವ ಅವಕಾಶ ಇರಲಿಲ್ಲ ಎಂಬುದನ್ನು ರವಿಶಾಸ್ತ್ರಿ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.
ಆಯ್ಕೆಗಾರರು ಆಯ್ಕೆ ಮಾಡಿದ ಆಟಗಾರರನ್ನು ಕಣಕ್ಕಿಳಿಸುವುದಷ್ಟೇ ನನ್ನ ಕೆಲಸ
ಇನ್ನೂ ಮುಂದುವರಿದು ಮಾತನಾಡಿರುವ ರವಿಶಾಸ್ತ್ರಿ 15 ಆಟಗಾರರ ತಂಡವನ್ನು ಆಯ್ಕೆಗಾರರು ಆಯ್ಕೆ ಮಾಡಿ ಕಳುಹಿಸಿದರು. ಹೀಗೆ ಆಯ್ಕೆ ಮಾಡಲಾದ ಆಟಗಾರರನ್ನು ಬಳಸಿಕೊಂಡು 11 ಆಟಗಾರರ ತಂಡವನ್ನು ರಚಿಸಿ ಕಣಕ್ಕಿಳಿಸುವುದು ನನ್ನ ಕೆಲಸವಾಗಿತ್ತು ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಗಳನ್ನು ನೀಡುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಿದ್ದರ ಪ್ರಕ್ರಿಯೆಯಲ್ಲಿ ತಂಡದ ತರಬೇತುದಾರ ಹಾಗೂ ನಾಯಕ ಇಬ್ಬರದ್ದೂ ಯಾವುದೇ ರೀತಿಯ ಪಾಲಿರಲಿಲ್ಲ ಎಂಬುದನ್ನು ರವಿ ಶಾಸ್ತ್ರಿ ಬಿಚ್ಚಿಟ್ಟಿದ್ದಾರೆ.