2026 ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ ತನ್ನ ಅಭಿಯಾನವನ್ನು ಮುಗಿಸಿದೆ. ಶ್ರೀಲಂಕಾ ಹಾಗೂ ಭಾರತ ಜಂಟಿಯಾಗಿ 10ನೇ ಆವೃತ್ತಿಯ ಟಿ20 ವಿಶ್ವಕಪ್ ಆಯೋಜಿಸಿದ್ದವು. ಈ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಲಂಕಾ ಸ್ಥಿರ ಪ್ರದರ್ಶನ ನೀಡಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿತ್ತು. ಆದರೆ ಸೂಪರ್ 8 ಹಂತದ ಪಂದ್ಯದಲ್ಲಿ ಶ್ರೀಲಂಕಾ ಒಂದೇ ಒಂದು ಪಂದ್ಯವನ್ನು ಗೆಲ್ಲದೇ ನಿರಾಸೆಯನ್ನು ಅನುಭವಿಸಿತು. ಶನಿವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಲಂಕಾ 5 ರನ್ಗಳಿಂದ ಸೋಲು ಕಂಡಿತ್ತು.
ಆತಿಥೇಯ ಶ್ರೀಲಂಕಾ ಸೂಪರ್ 8 ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು. ಈ ನೀರಸ ಪ್ರದರ್ಶನದಿಂದಾಗಿ ಶ್ರೀಲಂಕಾ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ವಿಫಲವಾಗಿದೆ. ಲಂಕಾ ತಂಡ ಸೂಪರ್ 8 ಹಂತದಿಂದ ನಿರ್ಗಮಿಸಿದ ಬಳಿಕ ಕೋಚ್ ಸನತ್ ಜಯಸೂರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೆ ಕಾರಣವನ್ನು ಸಹ ಅವರು ನೀಡಿದ್ದಾರೆ.

ಶನಿವಾರ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ 5 ರನ್ಗಳಿಂದ ಪಾಕಿಸ್ತಾನ ವಿರುದ್ಧ ಸೋಲು ಕಂಡಿತು. ಈ ಸೋಲಿನ ಬಳಿಕ ಮಾತನಾಡಿದ ಕೋಚ್ ಸನತ್ ಜಯಸೂರ್ಯ ವರದಿಗಾರರೊಂದಿಗೆ ಮಾತನಾಡಿರುವ ಅವರು, ನನ್ನ ಒಪ್ಪಂದ ಜೂನ್ನಲ್ಲಿ ಮುಕ್ತಾಯವಾಗಲಿದೆ. ಆದರೆ ನನ್ನ ಒಪ್ಪಂದ ಮುಗಿಯುವ ಮೊದಲೇ ನಾನು ನನ್ನ ಸ್ಥಾನಕ್ಕೆ ರಾಜೀನಾಮೇ ನೀಡಲಿದ್ದೇನೆ. ಈ ಬಗ್ಗೆ ನಾನು ಶ್ರೀಲಂಕಾ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚಿಸುವೆ. ಈ ಟೂರ್ನಿಯಲ್ಲಿ ಉತ್ತಮವಾಗಿ ಆಡಬೇಕಿತ್ತು. ಆದರೆ ಸ್ಥಿರ ಪ್ರದರ್ಶನ ನೀಡದಲಿಲ್ಲ ಎಂದು ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ. ವನಿಂದು ಹಸರಂಗ, ಮತೀಶ ಪತಿರಾನ ಮತ್ತು ಕುಸಲ್ ಮೆಂಡಿಸ್ ಗಾಯದ ಸಮಸ್ಯೆಯು ತಂಡಕ್ಕೆ ಹಿನ್ನಡೆಯಾಯಿತು ಎಂದು ಕೋಚ್ ತಿಳಿಸಿದ್ದಾರೆ.
ಶ್ರೀಲಂಕಾ ತಂಡ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 20 ರನ್ ಗೆದ್ದಿದ್ದ ಲಂಕಾ, ಓಮನ್ ವಿರುದ್ಧ 105 ರನ್ ಜಯ ಸಾಧಿಸಿತ್ತು. ಇನ್ನು ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಲಂಕಾ 8 ವಿಕೆಟ್ ಗೆಲುವು ಸಾಧಿಸಿತ್ತು. ಆದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 6 ವಿಕೆಟ್ ಸೋಲು ಕಂಡಿತ್ತು. ಇನ್ನು ಸೂಪರ್ 8 ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 51 ರನ್ ಸೋಲು, ನ್ಯೂಜಿಲೆಂಡ್ ವಿರುದ್ಧ 61 ರನ್ ಸೋಲು ಮತ್ತು ಪಾಕ್ ವಿರುದ್ಧ 5 ರನ್ ಸೋಲು ತಂಡಕ್ಕೆ ಪೆಟ್ಟು ನೀಡಿತ್ತು. ಅಲ್ಲದೆ ತಂಡ ಸೂಪರ್ 8 ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್ ಹೇಳುವಂತೆ ಮಾಡಿತು.