ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟಿ20 ಸ್ಪರ್ಧೆಯಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ನಡೆದ ಮೊದಲ ಸೂಪರ್ 8 ಹಂತದ ಪಂದ್ಯದಲ್ಲಿ ಭಾರೀ ಸೋಲು ಕಂಡಿದೆ. ಈ ಸೋಲಿನ ಮೂಲಕ ಟೀಮ್ ಇಂಡಿಯಾ ಹಲವು ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುವಂತೆ ಆಗಿದೆ. ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಸತತ 12ನೇ ಗೆಲುವಿನ ಜಯದ ಓಟಕ್ಕೆ ಬ್ರೇಕ್ ಬಿದ್ದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 7 ವಿಕೆಟ್ಗೆ 187 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾ 111 ರನ್ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. ಈ ಸೋಲಿನ ಮುಖಾಂತರ ಟೀಮ್ ಇಂಡಿಯಾ ಸೂಪರ್ 8 ಹಂತದ ಮುಂದಿನ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಹಾಗಿದ್ದರೆ ಟೀಮ್ ಇಂಡಿಯಾ ಸೋಲಿಗೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾದ ಟಾಪ್ ಆರ್ಡರ್ ಬ್ಯಾಟರ್ಗಳ ವಿರುದ್ಧ ಭರ್ಜರಿ ಗೇಮ್ ಪ್ಲ್ಯಾನ್ ಮಾಡಿಕೊಂಡಿತ್ತು. ಅದರಂತೆ ಆರಂಭದಲ್ಲಿ ಯಶಸ್ಸು ಸಹ ಕಂಡಿತು. 3.6 ಓವರ್ಗಳಲ್ಲಿ ಟೀಮ್ ಇಂಡಿಯಾ 20 ರನ್ ನೀಡಿ ಮೂರು ವಿಕೆಟ್ ಕಬಳಿಸಿತು. ಇಲ್ಲಿಂದ ಭಾರತದ ಬೌಲರ್ಗಳು ತಮ್ಮ ಹಿಡಿತವನ್ನು ಬಿಗಿಗೊಳಿಸುವಲ್ಲಿ ಪರದಾಡಿದರು.
ಮಿಡ್ಲ್ ಓವರ್ಗಳಲ್ಲಿ ರನ್ ನೀಡಿ ಟೀಮ್ ಇಂಡಿಯಾದ ಬೌಲರ್ಸ್ ಕೈ ಸುಟ್ಟುಕೊಂಡಿದ್ದಾರೆ. ಆಲ್ರೌಂಡರ್ಗಳಾದ ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳನ್ನು ಕಟ್ಟಿ ಹಾಕುವಲ್ಲಿ ಎಡವಿದರು. ಈ ಪಂದ್ಯದಲ್ಲಿ ಈ ಮೂವರು ಬೌಲರ್ಗಳು ರನ್ಗಳ ಬಿಟ್ಟುಕೊಟ್ಟು ನಿರಾಸೆ ಅನುಭವಿಸಿದರು.
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡುವಾಗ ಮಿಡ್ಲ್ ಓವರ್ಗಳಲ್ಲಿ ಬರೋಬ್ಬರಿ 111 ರನ್ ಸೇರಿಸಿತು. ಇದು ಟೀಮ್ ಇಂಡಿಯಾವನ್ನು ಗೆಲುವಿನಿಂದ ತುಂಬ ದೂರ ಕರೆದುಕೊಂಡು ಹೋಗಲು ಕಾರಣವಾಯಿತು.

ಟೀಮ್ ಇಂಡಿಯಾ ಆರಂಭದಿಂದಲೂ ಹೊಡಿ ಬಡಿ ಆಟಕ್ಕೆ ಒತ್ತು ನೀಡಿತ್ತು. ಪರಿಣಾಮ ಯಾವುದೇ ಒಬ್ಬ ಆಟಗಾರ ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಕ್ಷಮತೆಯನ್ನು ತೋರಲೇ ಇಲ್ಲ. ಟೀಮ್ ಇಂಡಿಯಾದ ಆರಂಭಿಕ ಸತತ ನಾಲ್ಕನೇ ಪಂದ್ಯದಲ್ಲೂ ವೈಫಲ್ಯ ಅನುಭವಿಸುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಅಲ್ಲದೆ ಈ ಟೂರ್ನಿಯುದ್ದಕ್ಕೂ ತಿಲಕ್ ವರ್ಮಾ ಒಂದೇ ಒಂದು ದೊಡ್ಡ ಇನಿಂಗ್ಸ್ ಕಟ್ಟದೆ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಶಾನ್ ಕಿಶನ್ ಸಹ ರನ್ ಬರ ಎದುರಿಸಿದ್ದು ಟೀಮ್ ಇಂಡಿಯಾದ ಕ್ಯಾಂಪ್ನಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಮಾಡಿವೆ. ಅಲ್ಲದೆ ಪವರ್ ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಟೀಮ್ ಇಂಡಿಯಾ ದೊಡ್ಡ ಮೊತ್ತದ ಬೆನ್ನು ಹತ್ತಿದಾಗ ಜೊತೆಯಾಟಗಳು ಬಾರದಿರುವುದು ತಂಡವನ್ನು ಸಂಕಷ್ಟಕ್ಕೆ ದೂಡಿದವು. ಟೀಮ್ ಇಂಡಿಯಾದ ಪರ ಶಿವಂ ದುಬೆ ಅವರನ್ನು ಹೊರತು ಪಡಿಸಿದ ಉಳಿದ ಎಲ್ಲ ಸ್ಟಾರ್ ಬ್ಯಾಟರ್ಗಳು 20 ರನ್ಗಳ ಒಳಗೆ ಆಟ ಮುಗಿಸಿದರು. ಈ ಎಲ್ಲ ಅಂಶಗಳು ಟೀಮ್ ಇಂಡಿಯಾ ಸೋಲಿಗೆ ಕಾರಣವಾಗಿದೆ.
ಟೀಮ್ ಇಂಡಿಯಾ ಸೂಪರ್ 8 ಹಂತದ ಮುಂದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಸೆಮಿಫೈನಲ್ ಕನಸು ನನಸಾಗುತ್ತದೆ.