
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ನಂತರ ಅತ್ಯಂತ ಸಂಕಷ್ಟದಲ್ಲಿದೆ. ಟೀಮ್ ಇಂಡಿಯಾ ಸೆಮಿಫೈನಲ್ ಹಂತಕ್ಕೇರುವ ಸಾಧ್ಯತೆ ಕ್ಷೀಣಿಸಿದೆ. ಭಾರತೀಯ ತಂಡದ ಈ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋರ್ ದುಬೈ ಪಿಚ್ ಬಗ್ಗೆ ಟೀಕಿಸಿ ಪ್ರತಿಕ್ರಿಯಿಸಿದ್ದಾರೆ.
ಭಾರತ ತನ್ನ ಎರಡು ಪಂದ್ಯಗಳನ್ನು ಕೂಡ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಿದೆ. ಈ ಕ್ರೀಡಾಂಗಣದ ಪಿಚ್ ಬಗ್ಗೆ ವಿಕ್ರಮ್ ರಾಥೋರ್ ಕಟು ಟೀಕೆಯನ್ನು ಮಾಡಿದ್ದಾರೆ. ಕೆಳ ಹಾಗೂ ನಿಧಾನಗತಿಯ ಪಿಚ್ ಇದಾಗಿದ್ದು ಇಂಥಾ ಮೇಲ್ಮೈನಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸುವುದು ಸುಲಭವಿಲ್ಲ ಎಂದಿದ್ದಾರೆ ವಿಕ್ರಮ್ ರಾಥೋರ್.
"ಇಂಥಾ ಪಿಚ್ನಲ್ಲಿ ಆರಂಭದಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಿಲ್ಲ. ಮೊದಲಿಗೆ ಬ್ಯಾಟಿಂಗ್ ನಡೆಸಿದ ಯಾವ ತಂಡವಾದರೂ ಇಲ್ಲಿ ಸಂಕಷ್ಟವನ್ನು ಎದುರಿಸಿದೆ. ನಾವು ದೊಡ್ಡ ಹೊಡೆತಗಳನ್ನು ಬಾರಿಸುವಾಗ ಎಡವಿದೆವು ನಿಜ. ಆದರೆ ಇಲ್ಲಿನ ಪಿಚ್ನಲ್ಲಿ ಅದು ಬಹಳ ಕಷ್ಟವಿತ್ತು" ಎಂದಿದ್ದಾರೆ ವಿಕ್ರಮ್ ರಾಥೋರ್. ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧಧ ಪಂದ್ಯದಲ್ಲಿ ಭಾರತ 6-15 ಓವರ್ಗಳ ಅಂತರದಲ್ಲಿ ಕನಿಷ್ಠ ಒಂದು ಬೌಂಡರಿಯನ್ನು ಬಾರಿಸಲು ಕೂಡ ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಭಾರತ ಸ್ಟ್ರೈಕ್ ಬದಲಾವಣೆ ಮಾಡುವುದರಲ್ಲಿಯೂ ಎಡವಿತು ಎಂದು ರಾಥೋರ್ ವಿವರಿಸಿದ್ದಾರೆ.
"ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಸ್ಟ್ರೈಕ್ ಬದಲಾವಣೆ ಮಾಡದಿರುವುದು ಸಮಸ್ಯೆಯಾಯಿತು. ಇಂತಾ ಮೇಲ್ಮೈನಲ್ಲಿ ಸ್ಟ್ರೆಕ್ ಬದಲಾವನೆ ಮಾಡುವುದು ಸವಾಲಿನ ಸಂಗತಿಯಾಗಿದೆ. ನಾನು ಇಲ್ಲಿ ನಾವಿ ಮಾತ್ರವೇ ಪರದಾಡಿದ್ದೇವೆ ಎನ್ನುತ್ತಿಲ್ಲ. ಮೊದಲಿಗೆ ಬ್ಯಾಟಿಂಗ್ ಮಾಡಿದ ಎಲ್ಲಾ ತಂಡಗಳು ಕೂಡ ಈ ಪರಿಸ್ಥಿತಿಯನ್ನು ಎದುರಿಸಿದೆ" ಎಂದು ರಾಥೋರ್ ಹೇಳಿಕೆ ನೀಡಿದ್ದಾರೆ.
"ಆದರೆ ವಿಶ್ವ ಚಾಂಪಿಯನ್ನರಾಗಿ ನೀವು ಎದುರಾಳಿಗಳ ವಿರುದ್ಧ ಗೆಲುವು ಸಾಧಿಸಲು ಬೇಕಾದ ಯೋಜನೆಯನ್ನು ಹೊಂದಿರಬೇಕಾಗುತ್ತದೆ. ಆದರೆ ನಾವು ಈ ವಿಚಾರವಾಗಿ ಹಿನ್ನಡೆ ಅನುಭವಿಸಿದೆವು" ಎಂದು ವಿಕ್ರಮ್ ರಾಥೋರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತನ್ನ ಮೂರನೇ ಪಂದ್ಯವನ್ನು ಬುಧವಾರ ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ ಮಾತ್ರವೇ ಸೆಮಿಫೈನಲ್ ಹಂತಕ್ಕೇರುವ ಸ್ಪರ್ಧೆಯಲ್ಲಿ ಮುಂದುವರಿಯುವ ಅವಕಾಶವಿದೆ. ಮತ್ತೊಂದೆಡೆ ಅಫ್ಘಾನಿಸ್ತಾನ ತಂಡ ಅಂತಿಮ ಎರಡು ಪಂದ್ಯಗಳನ್ನು ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ಧ ಆಡಲಿದೆ.