ಟಿ20 ವಿಶ್ವಕಪ್: ಬೂಮ್ರಾ, ಜಡೇಜಾ ಅಲ್ಲ: ಭಾರತದ ಪ್ರಮುಖ ಬೌಲಿಂಗ್ ಅಸ್ತ್ರ ಈತನೇ ಎಂದ ರೈನಾ!

ಐಪಿಎಲ್ ನಂತರ ಇದೀಗ ಟಿ20 ವಿಶ್ವಕಪ್ನ ರೋಚಕ ಪಂದ್ಯಗಳು ಅಭಿಮಾನಿಗಳಿಗೆ ರಸದೌತಣ ನೀಡಲು ಸಜ್ಜಾಗಿದೆ. ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಕೂಡ ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ, ಆಟಗಾರರ ಫಾರ್ಮ್ ಬಗ್ಗೆ ಬೇರೆ ಬೇರೆ ರೀತಿಯ ಲೆಕ್ಕಾಚಾರಗಳನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರವಾಗಿ ಬೌಲಿಂಗ್ನಲ್ಲಿ ಮಿಂಚಬಲ್ಲ ಆಟಗಾರ ಯಾರು ಎಂಬುದನ್ನು ಸುರೇಶ್ ರೈನಾ ಊಹಿಸಿದ್ದಾರೆ.
ಐಸಿಸಿ ವೆಬ್ಸೈಟ್ಗೆ ಬರೆದಿರುವ ಅಂಕಣದಲ್ಲಿ ಸುರೇಶ್ ರೈನಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ, ಆರ್ ಅಶ್ವಿನ್ ಅವರಂತಾ ಅನುಭವಿ ಆಟಗಾರರಿದ್ದರೂ ಯುವ ಬೌಲರ್ ಓರ್ವ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತದ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದು ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.
ಹಾಗಾದರೆ ಈ ಯುವ ಬೌಲರ್ ಯಾರು? ಸುರೇಶ್ ರೈನಾ ಯಾವ ಕಾರಣಕ್ಕಾಗಿ ಈ ಮಾತುಗಳನ್ನಾಡಿದ್ದಾರೆ? ಮುಂದೆ ಓದಿ..

ಸವಾಲಾಗಲಿದೆ ಯುಎಇ ಪಿಚ್
ಸುರೇಶ್ ರೈನಾ ತಮ್ಮ ಅಂಕಣದಲ್ಲಿ ಐಪಿಎಲ್ನಲ್ಲಿ ಆಡಿ್ ಅನುಭವದಲ್ಲಿ ಯುಎಇ ಮೈದಾನಗಳ ಪಿಚ್ನ ಬಗ್ಗೆ ವಿವರಿಸಿದ್ದಾರೆ. ಯುಎಇನ ಪಿಚ್ಗಳು ಅತ್ಯಂತ ಸವಾಲಿನಿಂದ ಕೂಡಿದೆ. ಅದರಲ್ಲೂ ಮಿಸ್ಟ್ರಿ ಸ್ಪಿನ್ನರ್ಗಳ ಎದುರು ಈ ಪಿಚ್ ಬಹಳಷ್ಟು ಕಠಿವೆನಿಸಲಿದೆ ಎಂದಿದ್ದಾರೆ ಸುರೇಶ್ ರೈನಾ. ಇದೇ ಆಧಾರದಲ್ಲಿ ರೈನಾ ಟೀಮ್ ಇಂಡಿಯಾದ ಯುವ ಬೌಲರ್ ಈ ಪಿಚ್ನಲ್ಲಿ ಭಾರತ ತಂಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗಬಲ್ಲರು ಎಂಬ ಅಭಿಪ್ರಾಯಪಟ್ಟಿದ್ದಾರೆ.

ವರುಣ್ ಚಕ್ರವರ್ತಿ ಬಗ್ಗೆ ರೈನಾ ವಿಶ್ವಾಸ
ಸುರೇಶ್ ರೈನಾ ಹೇಳಿದ ಆ ಬೌಲರ್ ಬೇರೆ ಯಾರೂ ಅಲ್ಲ. ತಮಿಳುನಾಡು ಮೂಲದ ವರುಣ್ ಚಕ್ರವರ್ತಿ. ಈ ಬಾರಿಯ ಐಪಿಎಲ್ನಲ್ಲಿಯೂ ವರುಣ್ ಚಕ್ರವರ್ತಿ ಅದ್ಣುತ ಬೌಲಿಂಗ್ ದಾಳಿಯ ಮೂಲಕ ಎದುರಾಳಿ ದಾಂಡಿಗರಿಗೆ ಕಠಿಣ ಸವಾಲಾಗಿದ್ದರು. ಈ ಪ್ರದರ್ಶನ ಟಿ20 ವಿಶ್ವಕಪ್ನಲ್ಲಿಯೂ ಬರುವ ವಿಶ್ವಾಸವನ್ನು ವ್ಯಕ್ತೊಡಿಸಿದ್ದಾರೆ ರೈನಾ. ಅಲ್ಲದೆ ಯುಎಇನ ಪಿಚ್ ವರುಣ್ ಚಕ್ರವರ್ತಿ ಶೈಲಿಗೆ ಹೆಚ್ಚಿನ ಅನುಕೂಲಕರವಾಗಿದ್ದು ಅದರ ಸಂಪೂರ್ಣ ಲಾಭವನ್ನು ವರುಣ್ ಪಡೆದುಕೊಳ್ಳಲಿದ್ದಾರೆ ಎಂದಿದ್ದಾರೆ ಸುರೇಶ್ ರೈನಾ. ಆದರೆ ವರುಣ್ ಚಕ್ರವರ್ತಿ ಕೇವಲ ಮೂರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಅನುಭವ ಮಾತ್ರವೇ ಹೊಂದಿದ್ದಾರೆ. ಹೀಗಾಗಿ ಅವರಲ್ಲಿನ ಅನುಭವದ ಕೊರತೆಯ ಬಗ್ಗೆ ನನಗೆ ಕಳವಳವಿದೆ ಎಂದಿದ್ದಾರೆ ಸುರೇಶ್ ರೈನಾ.

ಶಾರ್ದೂಲ್ ಸೇರ್ಪಡೆ ತಂಡದ ಬಲ ಹೆಚ್ಚಿಸಿದೆ
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸ್ಕ್ವಾಡ್ಗೆ ಶಾರ್ದೂಲ್ ಠಾಕೂರ್ಅವರನ್ನು ಸೇರ್ಪಡೆಗೊಳಿಸಿರುವುದು ತಂಡದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ. ಶಾರ್ದೂಲ್ ಠಾಕೂರ್ ಆರಂಭದಲ್ಲಿ ಟೀಮ್ ಇಂಡಿಯಾ ಪರವಾಗಿ ಮೀಸಲು ಆಟಗಾರನಾಗಿ ಮಾತ್ರವೇ ಆಯ್ಕೆಯಾಗಿದ್ದರು. ಆದರೆ ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸುವ ಬಗ್ಗೆ ಇನ್ನೂ ಸ್ಪಷ್ಟತೆಗಳು ಇಲ್ಲ. ಹೀಗಾಗಿ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಶಾರ್ದೂಲ್ ಠಾಕೂರ್ ಅವರನ್ನು ತಮಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಐಪಿಎಲ್ ಎರಡನೇ ಚರಣದಲ್ಲಿ ಶಾರ್ದೂಲ್ ನೀಡಿದ ಅಮೋಘ ಪ್ರದರ್ಶನ ಈ ಸೇರ್ಪಡೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಶಾರ್ದೂಲ್ ಠಾಕೂರ್ ಅವರು ತಂಡವನ್ನು ಸೇರಿಕೊಂಡಿರುವುದರಿಂದಾಗಿ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದಿದ್ದಾರೆ ಸುರೇಶ್ ರೈನಾ.

2 ಅಭ್ಯಾಸ ಪಂದ್ಯವನ್ನಾಡಲಿದೆ ಭಾರತ
ಭಾರತ ಟಿ20 ವಿಶ್ವಕಪ್ನಲ್ಲಿ ಅಧಿಕೃತವಾಗಿ ಅಭಿಯಾನವನ್ನು ಆರಂಭಿಸುವುದಕ್ಕೂ ಮುನ್ನ ಭಾರತ ಎರಡು ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ಮೊದಲ ಪಂದ್ಯ ಇಂಗ್ಲೆಂಡ್ ತಂಡದ ವಿರುದ್ಧ ನಡೆಯಲಿದ್ದರೆ ಎರಡನೇ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಮೊದಲ ಪಂದ್ಯ ಇಂದು ಅಂದರೆ ಅಕ್ಟೋಬರ್ 18 ಸೋಮವಾರ ಸಂಜೆ 7:30ಕ್ಕೆ ಇಂಗ್ಲೆಂಡ್ ತಂಡದ ವಿರುದ್ಧ ಅಭ್ಯಾಸ ಪಂದ್ಯ ನಡೆಯಲಿದೆ. ಮುಂದಿನ ಭಾನುವಾರ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಭಾರತದ ಟಿ20 ವಿಶ್ವಕಪ್ನ ಅಭಿಯಾನ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications