ತಾನು ಅಂದು ಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು ಎನ್ನುವ ಸ್ಥಿತಿ ಬಿಸಿಸಿಐನದ್ದು ಆಗಿದೆ. ಬಿಸಿಸಿಐ ಯುವ ತಂಡದೊಂದಿಗೆ ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸುವ ಪ್ಲ್ಯಾನ್ ಹಾಕಿಕೊಂಡಿದ್ದರೆ, ಈಗ ಟೀಮ್ ಇಂಡಿಯಾದ ಹಿರಿಯ ಆಟಗಾರರಿಬ್ಬರು ತಾವು ಸಹ ಟಿ20 ವಿಶ್ವಕಪ್ ಆಡುವುದಾಗಿ ಇಂಗಿತ ವ್ಯಕ್ತ ಪಡಿಸಿದ್ದಾರೆ.
ಈ ಹಿರಿಯ ಆಟಗಾರರು ಆಡುತ್ತಾರೆ ಎಂದಿದ್ದೇ ಬಿಸಿಸಿಐ ಚಿಂತೆಯನ್ನು ದುಪ್ಪಟ್ಟು ಮಾಡಿದೆ. ಟೀಮ್ ಇಂಡಿಯಾದ ಈ ಆಟಗಾರರು ಚುಟುಕು ಫಾರ್ಮೆಟ್ನಿಂದ ದೂರ ಸರೆಯುತ್ತಾರೆ. ಹೀಗಾಗಿ ನಾವು ಯುವ ತಂಡವನ್ನು ಕಟ್ಟಬಹುದು ಎಂಬ ಆಸೆಯನ್ನು ಬಿಸಿಸಿಐ ಹೊಂದಿತ್ತು. ಆದರೆ ಅದರ ಆಸೆ ಕಮರಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹ ಮತ್ತೊಮ್ಮೆ ಟಿ20 ವಿಶ್ವಕಪ್ ಆಡುವ ಆಸೆಯನ್ನು ಇಂಗಿತ ಪಡಿಸಿದ್ದಾರೆ.

ಅಸಲಿಗೆ ಈ ಹಿರಿಯ ಆಟಗಾರರು ಆಡುತ್ತಾರೆ ಎಂದರೆ ಅವರನ್ನು ಆಡಬೇಡಿ ಎನ್ನುವುದು ಬಿಸಿಸಿಐಗೆ ಒಪ್ಪುತ್ತಿಲ್ಲ. ಏಕೆಂದರೆ ಇವರಿಬ್ಬರು ಈಗಿನ ಕಾಲದ ಸೂಪರ್ ಸ್ಟಾರ್ ಆಟಗಾರರು.
ಟಿ20 ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾ ಈಗ ಕೇವಲ ಮೂರು ಟಿ20 ಪಂದ್ಯಗಳು ಉಳಿದಿವೆ. ಈ ತಿಂಗಳು ಅಫ್ಘಾನಿಸ್ತಾನ ವಿರುದ್ಧ ಈ ಮೂರು ಪಂದ್ಯಗಳು ನಡೆಯಲಿವೆ. ಇಲ್ಲಿ ಆಯ್ಕೆದಾರರು ವಿಶ್ವಕಪ್ಗಾಗಿ ಭಾರತ ತಂಡದ ಸರಿಯಾದ ಸಂಯೋಜನೆಯನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ.
ರೋಹಿತ್ ಹಾಗೂ ವಿರಾಟ್ ಕೂಡ ಟಿ20 ವಿಶ್ವಕಪ್ ಆಡುವ ಆಸೆ ವ್ಯಕ್ತಪಡಿಸಿರುವುದು ದೊಡ್ಡ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಂಡದ ಆಯ್ಕೆ ಬಿಸಿಸಿಐಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಬಿಸಿಸಿಐ ಮೂಲವನ್ನು ಉಲ್ಲೇಖಿಸಿರುವ ಪಿಟಿಐ ವರದಿಯಲ್ಲಿ, ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ತಂಡವನ್ನು ಪ್ರತಿನಿಧಿಸುವ ಆಸೆಯನ್ನು ಕೊಹ್ಲಿ ಮತ್ತು ರೋಹಿತ್ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಅಫ್ಘಾನಿಸ್ತಾನ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಘೋಷಿಸುವ ಮೊದಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗೆ ಇತರ ಇಬ್ಬರು ಆಯ್ಕೆದಾರರೊಂದಿಗೆ ಮಾತನಾಡಲಿದ್ದಾರೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಇದೆಲ್ಲದರ ನಡುವೆ ವಿರಾಟ್ ಮತ್ತು ರೋಹಿತ್ ಅಫ್ಘಾನಿಸ್ತಾನ ಸರಣಿಯ ಭಾಗವಹಿಸುವ ಬಗ್ಗೆ ಖಚಿತವಾಗಿಲ್ಲ. ಟೀಂ ಇಂಡಿಯಾ ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದ ಹಿರಿಯ ಆಟಗಾರರು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆಯುವುದು ಖಚಿತವಾಗಿದೆ.
ಟೀಂ ಇಂಡಿಯಾದ ಟಿ20 ವಿಶ್ವಕಪ್ ತಂಡಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಅಫ್ಘಾನಿಸ್ತಾನ ಸರಣಿಯು ಉತ್ತರಿಸುವುದಿಲ್ಲ ಎಂದು ಪಿಟಿಐ ವರದಿಯಲ್ಲಿ ಬಹಿರಂಗವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ ಸಮಯದಲ್ಲಿ 25-30 ಆಟಗಾರರ ಪ್ರದರ್ಶನದ ಮೇಲೆ ವಿಶೇಷ ಗಮನ ಹರಿಸಲಾಗುವುದು. ಮತ್ತು ಅವರಲ್ಲಿ ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲಾಗುತ್ತದೆ.

ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. 'ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅಫ್ಘಾನಿಸ್ತಾನ ಸರಣಿಯಿಂದ ಹೆಚ್ಚಿನ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದಿಲ್ಲ. ಐಪಿಎಲ್ ಮೊದಲ ತಿಂಗಳ ನಂತರವೇ ಎಲ್ಲವೂ ನಿರ್ಧಾರವಾಗಲಿದೆ ಎಂದಿದ್ದಾರೆ.