ಗುರುವಾರ, ಜುಲೈ 4ರಂದು 2024ರ ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡವನ್ನು ಹೊತ್ತ ವಿಶೇಷ ವಿಮಾನವು ನವದೆಹಲಿಯಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಿಶೇಷ 'ವಾಟರ್ ಸೆಲ್ಯೂಟ್' ಸ್ವೀಕರಿಸಿತು.
ಟಿ20 ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡದ ಸಾಧನೆಯ ಗೌರವಾರ್ಥವಾಗಿ ವಿಮಾನ ನಿಲ್ದಾಣದ ಸಿಬ್ಬಂದಿ ವಿಶೇಷ ಗೌರವವನ್ನು ಏರ್ಪಡಿಸಿದ್ದರು.

ಇದೀಗ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ನೇತೃತ್ವದ ಟೀಮ್ ಇಂಡಿಯಾ ತಮ್ಮ ವಿಶೇಷ ಓಪನ್-ಟಾಪ್ ಬಸ್ ಏರಿದ ನಂತರ ಮರೀನ್ ಡ್ರೈವ್ನಿಂದ ವಾಂಖೆಡೆ ಸ್ಟೇಡಿಯಂನತ್ತ ತೆರಳುತ್ತಿದ್ದಾರೆ.
ಗುರುವಾರ ಮಧ್ಯಾಹ್ನದಿಂದ ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತು ಮರೈನ್ ಡ್ರೈವ್ನ ಹೊರಗೆ ಜಮಾಯಿಸಿರುವ ತಮ್ಮ ಅಭಿಮಾನಿಗಳೊಂದಿಗೆ ಭಾರತ ತಂಡವು ಸಂಭ್ರಮಿಸುತ್ತಿದೆ.
ಟೀಮ್ ಇಂಡಿಯಾ ಸಾಗುತ್ತಿರುವ ದಾರಿಯುದ್ದಕ್ಕೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತ್ರಿವರ್ಣಧ್ವಜ ಮತ್ತು ಭಾರತ ಕ್ರಿಕೆಟ್ ತಂಡದ ಜೆರ್ಸಿ ಧರಿಸಿ ಜಯಘೋಷ ಮೊಳಗಿಸುತ್ತಿದ್ದಾರೆ. ಇನ್ನು ಅಭಿಮಾನಿಗಳ ಸಂಭ್ರಮಕ್ಕೆ ಭಾರತ ತಂಡದ ಆಟಗಾರರು ಕೂಡ ವಾಹನದ ಮೇಲೆ ನಿಂತು ಸಾಥ್ ನೀಡುತ್ತಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ 2024ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 17 ವರ್ಷಗಳ ನಂತರ ತಮ್ಮ ಮೊದಲ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ತವರಿಗೆ ಮರಳಿಸಿತು.
ವಾಟರ್ ಸೆಲ್ಯೂಟ್ ಅನ್ನು ಸಾಮಾನ್ಯವಾಗಿ ವಿಮಾನಕ್ಕೆ ಮತ್ತು ಅದರ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಗೌರವದ ಪ್ರದರ್ಶನವಾಗಿ ಮಾಡಲಾಗುತ್ತದೆ. ಆದರೆ, ಟೀಮ್ ಇಂಡಿಯಾದ ವಿಶ್ವಕಪ್ ವಿಜೇತಕ್ಕೆ ಗೌರವಾರ್ಥವಾಗಿ ಜಲವಂದನೆ ಮಾಡಲಾಯಿತು.

ರೋಹಿತ್ ಶರ್ಮಾ ಮತ್ತು ಸಹ ಆಟಗಾರರು ಮುಂಬೈನಲ್ಲಿ ತಮ್ಮ ಟಿ20 ವಿಶ್ವಕಪ್ ವಿಜಯೋತ್ಸವದ ಮೆರವಣಿಗೆಯನ್ನು ಆರಂಭಿಸಿದ್ದಾರೆ.
ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಇತರ ಸಹ ಆಟಗಾರರೊಂದಿಗೆ ಬಸ್ನ ಛಾವಣಿಯ ಮೇಲೆ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಹಿಡಿದಿದ್ದರು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಆಟಗಾರರೊಂದಿಗೆ ಬಸ್ ಏರಿದ್ದಾರೆ. ವಿಕ್ಟರಿ ಪರೇಡ್ನ ಬಸ್ ನಿಧಾನವಾಗಿ ಮತ್ತು ಭಾರೀ ಅಭಿಮಾನಿಗಳ ಸಮುದ್ರದಲ್ಲಿ ಚಲಿಸುತ್ತಿದೆ.

ಮುಂಬೈನಲ್ಲಿ ಭಾರತ ತಂಡದ ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಇದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಅಭಿನಂದನಾ ಸಮಾರಂಭದೊಂದಿಗೆ ಕೊನೆಗೊಳ್ಳುತ್ತದೆ.
ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಅತಿಥ್ಯ ವಹಿಸಿದ ಐಸಿಸಿ ಪಂದ್ಯಾವಳಿ ಮೂಲಕ ಭಾರತ ತಂಡದ ಅನುಭವಗಳ ಕುರಿತು "ಸ್ಮರಣೀಯ' ಸಂಭಾಷಣೆಗಳಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.