ಬಿಸಿಸಿಐ ಆಯ್ಕೆಯನ್ನು ಶ್ಲಾಘಿಸಿದ ವಿರೇಂದ್ರ ಸೆಹ್ವಾಗ್
ಈ ಬಾರಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡಕ್ಕೆ ಎಂಎಸ್ ಧೋನಿ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿರುವ ಬಿಸಿಸಿಐ ಆಯ್ಕೆ ಕುರಿತು ವಿರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರೇ ತುಂಬಿರುವ ತಂಡಕ್ಕೆ ಎಂಎಸ್ ಧೋನಿಯಂತಹ ಅನುಭವಿ ಕ್ರಿಕೆಟಿಗ ಮೆಂಟರ್ ಆಗಿ ನೇಮಕವಾಗಿರುವುದು ಉತ್ತಮವಾದ ಆಯ್ಕೆ ಎಂದು ವಿರೇಂದ್ರ ಸೆಹ್ವಾಗ್ ಶ್ಲಾಘಿಸಿದ್ದಾರೆ.
ಮಾರ್ಗದರ್ಶಕನಾಗಿ ಎಂಎಸ್ ಧೋನಿ ಆಯ್ಕೆ ಪರ್ಫೆಕ್ಟ್
ಎಂ ಎಸ್ ಧೋನಿಗೆ ಯಾವ ಆಟಗಾರನನ್ನು ಯಾವ ಸಮಯದಲ್ಲಿ ಕಣಕ್ಕಿಳಿಸಬೇಕು, ಯಾವ ಆಟಗಾರನನ್ನು ಯಾವ ಸ್ಥಳದಲ್ಲಿ ಫೀಲ್ಡ್ ಮಾಡಲು ಬಿಡಬೇಕು ಮತ್ತು ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಯಾವ ರೀತಿಯ ಬೌಲಿಂಗ್ ಮಾಡಿಸಬೇಕು ಎಂಬುದರ ಕುರಿತು ಸಂಪೂರ್ಣ ಜ್ಞಾನವಿದೆ. ಅಷ್ಟೇ ಅಲ್ಲದೆ ಆಟಗಾರರು ಯಾವುದೇ ಸಂಕೋಚವಿಲ್ಲದೆ ಎಂಎಸ್ ಧೋನಿ ಅವರನ್ನು ಭೇಟಿಯಾಗಿ ಮುಕ್ತವಾಗಿ ಮಾತನಾಡುವ ಅವಕಾಶವನ್ನು ಧೋನಿ ಆಟಗಾರರಿಗೆ ನೀಡಲಿದ್ದಾರೆ. ಹೀಗೆ ಮಾಡುವುದರಿಂದ ಆಟಗಾರರು ತಮಗಿರುವ ಗೊಂದಲಗಳ ಕುರಿತು ತಮ್ಮ ಮಾರ್ಗದರ್ಶಕನ ಜೊತೆ ಮುಕ್ತವಾಗಿ ಮಾತುಕತೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬಹುದು. ಹೀಗಾಗಿ ಎಂಎಸ್ ಧೋನಿ ಮೆಂಟರ್ ಆಗಿ ಆಯ್ಕೆಯಾಗಿರುವುದು ನಿಖರವಾದ ಆಯ್ಕೆಯಾಗಿದೆ ಎಂದು ವಿರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡ ಹೀಗಿದೆ
ಇದೇ ಅಕ್ಟೋಬರ್ ತಿಂಗಳಿನಿಂದ ಯುಎಇಯಲ್ಲಿ ಆರಂಭವಾಗಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ , ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ.