ಲಕ್ನೋ: ಭರವಸೆಯ ಆಟಗಾರ ತನುಷ್ ಕೋಟ್ಯಾನ್ ಅವರ ಶತಕ ಇರಾನಿ ಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ದಿನದ ಹೈಲೈಟ್. ರೆಸ್ಟ್ ಆಫ್ ಇಂಡಿಯಾ ಹಾಗೂ ಮುಂಬೈ ತಂಡಗಳ ನಡುವಿನ ಪಂದ್ಯ ಡ್ರಾ ಆಗಿದ್ದು, ಮೊದಲ ಇನಿಂಗ್ಸ್ ಆಧಾರದ ಮೇಲೆ ಮುಂಬೈ ಜಯ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ ಧಮಾಕೆದಾರ್ ಪ್ರದರ್ಶನದ ಫಲವಾಗಿ ಸರ್ಫರಾಜ್ ಖಾನ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಶನಿವಾರ ಇರಾನಿ ಕಪ್ ಟೂರ್ನಿಯ ಐದನೇ ದಿನದಾಟದಲ್ಲಿ ಆರು ವಿಕೆಟ್ಗಳಿಂದ 153 ರನ್ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಮುಂಬೈ 8 ವಿಕೆಟ್ಗೆ 329 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.

ಇರಾನಿ ಕಪ್ ಕ್ರಿಕೆಟ್ ಟೂರ್ನಿಯ ಮೊದಲ ಇನಿಂಗ್ಸ್ನಲ್ಲಿ ಅಮೋಘ ಶತಕ ಬಾರಿಸಿದ್ದ ಸರ್ಫರಾಜ್ ಖಾನ್, ಎರಡನೇ ಇನಿಂಗ್ಸ್ನಲ್ಲಿ 17 ರನ್ಗಳಿಗೆ ಔಟ್ ಆದರು.
8 ವಿಕೆಟ್ ಕಳೆದುಕೊಂಡು 171 ರನ್ ಸೇರಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ ತನುಷ್ ಕೋಟ್ಯಾನ್ ಹಾಗೂ ಮೋಹಿತ್ ಅವಸ್ತಿ ಜೋಡಿ ಆಧಾರವಾಯಿತು. ಈ ಜೋಡಿಯನ್ನು ಬೇರ್ಪಡಿಸಲು ರೆಸ್ಟ್ ಆಫ್ ಇಂಡಿಯಾ ತಂಡ ಮಾಡಿಕೊಂಡ ಎಲ್ಲ ಪ್ಲ್ಯಾನ್ ಉಲ್ಟಾ ಆಯಿತು. ಈ ಜೊಡಿ ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಲ್ಲದೆ ಬೌಲರ್ಗಳ ಯೋಜನೆಯನ್ನು ಬುಡಮೇಲು ಮಾಡಿ ಅಬ್ಬರಿಸಿತು. ಮೋಹಿತ್ ಅವಸ್ತಿ 93 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 51 ರನ್ ಬಾರಿಸಿ ತಂಡಕ್ಕೆ ಆಧಾರವಾದರು. 9ನೇ ವಿಕೆಟ್ಗೆ ತನುಷ್ ಕೋಟ್ಯಾನ್ ಹಾಗೂ ಮೋಹಿತ್ ಜೊತೆಗೂಡಿ ಸುಮಾರು 32 ಓವರ್ ವಿಕೆಟ್ ಬೀಳದಂತೆ ನೋಡಿಕೊಂಡು, 158 ರನ್ ಕಲೆ ಹಾಕಿದರು.
ಮಧ್ಯಮ ಕ್ರಮಾಂಕದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ತನುಷ್ ಕೋಟ್ಯಾನ್ ಅಬ್ಬರಿಸಿದರು. ಇವರ ಆರ್ಭಟಕ್ಕೆ ಬ್ರೇಕ್ ಹಾಕುವ ಆಸೆ ಫಲಿಸಲಿಲ್ಲ. ಇವರು 150 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 114 ರನ್ ಸಿಡಿಸಿ ತಂಡದ ಮೊತ್ತ ಹಿಗ್ಗಿಸಿದರು.
ಸಾರಾಂಶ್ ಜೈನ್ ರೆಸ್ಟ್ ಆಫ್ ಇಂಡಿಯಾ ತಂಡದ ಪರ ಅಬ್ಬರದ ಬೌಲಿಂಗ್ ನಡೆಸಿದರು. ಇವರು 121 ರನ್ ನೀಡಿ ಆರು ವಿಕೆಟ್ ಪಡೆದರು. ಇನ್ನು ಮಾನವ್ ಸುತಾರ್ ಎರಡು ವಿಕೆಟ್ ಕಬಳಿಸಿದರು.