
ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನಾಡಲು ಬ್ರಿಸ್ಬೇನ್ಗೆ ಬಂದಿಳಿದ ಟೀಮ್ ಇಂಡಿಯಾಗೆ ನಿಜಕ್ಕೂ ಆಘಾತ ಕಾದಿತ್ತು. ಕಟ್ಟುನಿಟ್ಟಿನ ಕ್ವಾರಂಟೈನ್ ಹೆಸರಿನಲ್ಲಿ ಟೀಮ್ ಇಂಡಿಯಾವನ್ನು ಖೈದಿಗಳಂತೆ ಪ್ರತ್ಯೇಕವಾಗಿರಿಸಲಾಗಿದೆ ಎಂಬ ಆರೋಪದ ಬಳಿಕ ಬಿಸಿಸಿಐ ಮಧ್ಯಪ್ರವೇಶ ಮಾಡಿದ್ದು ಭಾರತೀಯ ಕ್ರಿಕೆಟಿಗರು ನಿಟ್ಟುಸಿರು ಬಿಡುವಂತಾಗಿದೆ.
ಭಾರತೀಯ ಕ್ರಿಕೆಟಿಗರು ಬ್ರಿಸ್ಬೇನ್ ತಲುಪಿದ ಎರಡನೇ ದಿನ ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್ಗೆ ಹೋಗಲು ಅನುಮತಿಯನ್ನು ನೀಡಲಾಗಿದೆ. ಹಾಗೂ ಬುಧವಾರದಿಂದ ಭಾರತೀಯ ತಂಡಕ್ಕೆ ಹೌಸ್ಕೀಪಿಂಗ್ ಸೌಲಭ್ಯ ಕೂಡ ಲಭ್ಯವಾಗುತ್ತಿದ್ದು ಆಟಗಾರರು ಸ್ವಲ್ಪ ನಿರಾಳರಾಗಿದ್ದಾರೆ.
ಕಠಿಣ ಕ್ವಾರಂಟೂನ್ ವಿಚಾರದ ಬಗೆಗಿನ ವಿವಾದದ ಬಳಿಕ ಬ್ರಿಸ್ಬೇನ್ಗೆ ತೆರಳಲು ಒಪ್ಪಿಕೊಂಡ ಟೀಮ್ ಇಂಡಿಯಾಗೆ ಬ್ರಿಸ್ಬೇನ್ನ ಆತಿಥ್ಯ ಅಚ್ಚರಿ ಮೂಡಿಸಿತ್ತು. ಭಾರತೀಯ ತಂಡಕ್ಕೆ ಮಾತುಕೊಟ್ಟಿರುವುದಕ್ಕೆ ವಿರುದ್ಧವಾಗಿಯೇ ಎಲ್ಲಾ ವ್ಯವಸ್ಥೆಗಳಾಗಿದ್ದವು. ಹೋಟೆಲ್ ಇಡೀ ಖಾಲಿಯಿದ್ದರೂ ಅಲ್ಲಿನ ಯಾವುದೇ ವ್ಯವಸ್ಥೆಗಳನ್ನು ಬಳಸಿಕೊಳ್ಳಲು ಅನುಮತಿಯಿಲ್ಲದ ಬಗ್ಗೆ ಆಟಗಾರರು ಬೇಸರವನ್ನು ವ್ಯಕ್ತಪಡಿಸಿದ್ದರು.
ವರದಿಗಳ ಪ್ರಕಾರ ಕ್ವಾರಂಟೈನ್ ನಿಯಮಗಳನ್ನು ಮುಂದಿಟ್ಟುಕೊಂಡು ಭಾರತೀಯ ಆಟಗಾರರಿಗೆ ಹೌಸ್ಕೀಪಿಂಗ್ ಸಿಬ್ಬಂದಿಗಳನ್ನು ಕೂಡ ನೀಡಿರಲಿಲ್ಲ. ಹೀಗಾಗಿ ಶೌಚಾಲಯ ಸ್ವಚ್ಛತೆಯಿಂದ ಹೊಡಿದು ಎಲ್ಲವನ್ನೂ ಆಟಗಾರರ ಮಾಡಿಕೊಳ್ಳಬೇಕಿದೆ. ನೀಡಿರುವ ಮಹಡಿ ಹೊರತು ಪಡಿಸಿ ಹೋಟೆಲ್ ಖಾಲಿಯಿದ್ದರೂ ಎಲ್ಲೂ ತೆರಳುವಂತಿಲ್ಲ. ಹೀಗಾಗಿ ಖೈದಿಗಳಂತೆ ಬಂಧಿಯಾಗಿದ್ದೇವೆ ಎಂದು ಆಟಗಾರರು ಹೇಳಿಕೊಂಡಿರುವುದು ವರದಿಯಾಗಿತ್ತು.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಸೆಕ್ರೆಟರಿ ಜಯ್ ಶಾ ಸಹಿತ ಬಿಸಿಸಿಐ ಅಧಿಕಾರಿಗಳು ನಿರಂತರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ