ಪ್ರಸ್ತುತ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇದಾದ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದೆ. ಅಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಅದಕ್ಕೂ ಮುನ್ನ ಭಾರತ ಎ ತಂಡವನ್ನು ಆಸ್ಟ್ರೇಲಿಯಾ ಎದುರಿಸಲಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು 15 ಸದಸ್ಯರ ಭಾರತ ಎ ತಂಡವನ್ನು ಪ್ರಕಟಿಸಿದೆ. ಭಾರತ ಎ ತಂಡವನ್ನು ಋತುರಾಜ್ ಗಾಯಕ್ವಾಡ್ ನಾಯಕರಾಗಿ ಮುನ್ನಡೆಸಲಿದ್ದಾರೆ. ಅಭಿಮನ್ಯು ಈಶ್ವರನ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ ಭಾರತ ತಂಡದಿಂದ ಸುದೀರ್ಘ ಕಾಲ ಹೊರಗುಳಿದಿದ್ದ ಸ್ಟಾರ್ ವಿಕೆಟ್ ಕೀಪರ್- ಬ್ಯಾಟರ್ ಇಶಾನ್ ಕಿಶನ್ ವಾಪಾಸಾಗಿದ್ದಾರೆ. ಬಿಸಿಸಿಐಯ ಆಯ್ಕೆ ಸಮಿತಿ ಸೋಮವಾರ ರಾತ್ರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದೆ.

ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವೆ ಕ್ರಮವಾಗಿ ಮ್ಯಾಕೆ ಮತ್ತು ಮೆಲ್ಬೋರ್ನ್ನಲ್ಲಿ ಎರಡು ಪ್ರಥಮ ದರ್ಜೆ ಪಂದ್ಯಗಳು ನಡೆಯಲಿದೆ. ಉಭಯ ತಂಡಗಳ ನಡುವೆ ಮೊದಲ ಪಂದ್ಯ ಅಕ್ಟೋಬರ್ 31 ರಿಂದ ಶುರುವಾದರೆ, ಎರಡನೇ ಪಂದ್ಯ ನವೆಂಬರ್ 7ರಿಂದ ಆರಂಭವಾಗಲಿದೆ. ಇದಾದ ನಂತರ ಋತುರಾಜ್ ಗಾಯಕ್ವಾಡ್ ತಂಡ ರೋಹಿತ್ ಶರ್ಮಾ ನಾಯಕತ್ವದ ಹಿರಿಯರ ಭಾರತ ತಂಡವನ್ನು ಎದುರಿಸಲಿದೆ. ಇಬ್ಬರ ನಡುವೆ ಒಂದು ಅಭ್ಯಾಸ ಪಂದ್ಯ ನಡೆಯಲಿದೆ.
ರೋಹಿತ್ ಶರ್ಮಾ ಮತ್ತು ಋತುರಾಜ್ ಗಾಯಕ್ವಾಡ್ ತಂಡಗಳು ಪರ್ತ್ನ ಡಬ್ಲ್ಯೂಎಸಿಎ ಸ್ಟೇಡಿಯಂನಲ್ಲಿ ನವೆಂಬರ್ 15 ರಿಂದ 17 ರವರೆಗೆ 3 ದಿನಗಳ ಟೆಸ್ಟ್ ಪಂದ್ಯವನ್ನು ಆಡಲಿವೆ. ಬಳಿಕ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ 22 ರಂದು ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇಶಾನ್ ಕಿಶನ್, ಮುಖೇಶ್ ಕುಮಾರ್, ನವದೀಪ್ ಸೈನಿ ಮತ್ತು ದೇವದತ್ ಪಡಿಕ್ಕಲ್ ಅವರು ಈಗಾಗಲೇ ಭಾರತ ಪರ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ಆಟಗಾರರು. ದೇಶೀಯ ಟೂರ್ನಿಗಳಲ್ಲಿ ಶತಕದ ಮೇಲೆ ಶತಕ ಹೊಡೆದು ಕಿಶನ್ ಭಾರತ ಟೆಸ್ಟ್ ಕ್ರಿಕೆಟ್ಗೆ ಮರಳುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಮತ್ತೊಂದೆಡೆ, ಒಂದು ವರ್ಷದಿಂದ ಮಧ್ಯಮ ಕ್ರಮಾಂಕದಲ್ಲಿ ತಂಡದ ಪ್ರಮುಖ ಭಾಗವಾಗಿರುವ ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿಲ್ಲ. ರಣಜಿ ಟ್ರೋಫಿಯಲ್ಲೂ ಶತಕ ಬಾರಿಸಿದರೂ ಅವರಿಗೆ ಅವಕಾಶ ಸಿಕ್ಕಿಲ್ಲ.
ಋತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ದೇವದತ್ ಪಡಿಕ್ಕಲ್, ರಿಕಿ ಭುಯಿ, ಬಾಬಾ ಇಂದರ್ಜಿತ್, ಇಶಾನ್ ಕಿಶನ್ (ವಿಕೆಟ್ಕೀಪರ್), ಅಭಿಷೇಕ್ ಪೊರೆಲ್ (ವಿಕೆಟ್ಕೀಪರ್), ಮುಖೇಶ್ ಕುಮಾರ್, ಖಲೀಲ್ ಅಹ್ಮದ್ , ನವದೀಪ್ ಸೈನಿ, ಮಾನವ್ ಸುತಾರ್, ತನುಷ್ ಕೋಟ್ಯಾನ್.