2024ರ ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಹೊತ್ತ ಏರ್ ಇಂಡಿಯಾ ಚಾರ್ಟರ್ಡ್ ವಿಮಾನವು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 4ರ ಗುರುವಾರ ಬೆಳಿಗ್ಗೆ 6:05ರ ಸುಮಾರಿಗೆ ಬಂದಿಳಿದಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವನ್ನು ನೋಡಲು ಭಾರೀ ಸಂಖ್ಯೆಯ ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದಾರೆ. ಅಭಿಮಾನಿಗಳಿಗೆ ಕೈಬೀಸಿ ಹೊರನಡೆಯುತ್ತಿರುವ ಟೀಮ್ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ನೇರವಾಗಿ ಖಾಸಗಿ ಹೋಟೆಲ್ಗೆ ತೆರಳಲಿದೆ.

ಆ ನಂತರ ಬೆಳಿಗ್ಗೆ 11 ಗಂಟೆಗೆ ಪ್ರಧಾನಿಯವರ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಭಾರತೀಯ ಕ್ರಿಕೆಟ್ ಪಡೆಗೆ ಉಪಹಾರ ಕೂಟ ಏರ್ಪಡಿಸಲಾಗಿದ್ದು, ಕೆಲಹೊತ್ತು ಮಾತುಕತೆಯ ನಂತರ ಹೋಟೆಲ್ಗೆ ಹಿಂತಿರುಗಲಿದೆ.

ಬಳಿಕ ಭಾರತ ತಂಡವು ಗುರುವಾರ ಸಂಜೆ 4 ಗಂಟೆಗೆ ಮುಂಬೈಗೆ ತೆರಳುವ ನಿರೀಕ್ಷೆಯಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರೆದ ಬಸ್ ರೋಡ್ ಶೋನಲ್ಲಿ ಭಾಗವಹಿಸಲಿದೆ.
ಭಾರತಕ್ಕೆ ಬಂದಿಳಿದ ನಂತರ, ಟೀಮ್ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಲಿದ್ದಾರೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೂಡ ಪ್ರಧಾನಿ ಮೋದಿಯವರೊಂದಿಗೆ ಉಪಹಾರ ಸೇವಿಸಲಿದ್ದಾರೆ.
ನಂತರ ಇಡೀ ಭಾರತ ತಂಡವು ಮತ್ತೊಂದು ಚಾರ್ಟರ್ಡ್ ವಿಮಾನದ ಮೂಲಕ ಮುಂಬೈಗೆ ಹೊರಡಲಿದೆ. ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ನಾರಿಮನ್ ಪಾಯಿಂಟ್ನಿಂದ ವಾಂಖೆಡೆ ಸ್ಟೇಡಿಯಂವರೆಗೆ ತೆರೆದ ಬಸ್ನಲ್ಲಿ ಮೆರವಣಿಗೆ ನಡೆಯಲಿದೆ.
"ನಾವು ನಿಮ್ಮೆಲ್ಲರೊಂದಿಗೆ ಈ ವಿಶೇಷ ಕ್ಷಣವನ್ನು ಆನಂದಿಸಲು ಬಯಸುತ್ತೇವೆ. ಆದ್ದರಿಂದ ಜುಲೈ 4ರಂದು ಸಂಜೆ 5ರಿಂದ ಮರೈನ್ ಡ್ರೈವ್ ಮತ್ತು ವಾಂಖೆಡೆಯಲ್ಲಿ ವಿಜಯೋತ್ಸವದ ಮೆರವಣಿಗೆಯೊಂದಿಗೆ ಈ ವಿಜಯವನ್ನು ಆಚರಿಸೋಣ. ವಿಶ್ವಕಪ್ ತವರಿಗೆ ಬರುತ್ತಿದೆ," ಎಂದು ರೋಹಿತ್ ಶರ್ಮಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಗಮನಾರ್ಹ ವಿಜಯೋತ್ಸವ ಆಚರಿಸುತ್ತಿರುವ ಅಭಿಮಾನಿಗಳಿಗೆ ತಂಡವನ್ನು ಕೂಡಿಕೊಳ್ಳಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಆಹ್ವಾನ ನೀಡಿದ್ದಾರೆ.
"ಟೀಮ್ ಇಂಡಿಯಾದ ವಿಶ್ವಕಪ್ ಗೆಲುವಿನ ವಿಕ್ಟರಿ ಪೆರೇಡ್ಗಾಗಿ ನಮ್ಮೊಂದಿಗೆ ಸೇರಿ! ಜುಲೈ 4ರಂದು ಸಂಜೆ 5ರಿಂದ ಮರೈನ್ ಡ್ರೈವ್ ಮತ್ತು ವಾಂಖೆಡೆ ಸ್ಟೇಡಿಯಂಗೆ ನಮ್ಮೊಂದಿಗೆ ಆಚರಿಸಲು ಬನ್ನಿ," ಎಂದು ಜಯ್ ಶಾ ತಿಳಿಸಿದ್ದಾರೆ.