2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ತವರಿನಲ್ಲಿಯೇ ನಡೆಯುವುದರಿಂದ 12 ವರ್ಷಗಳ ನಂತರ ಭಾರತ ತಂಡ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲಿದೆ ಎಂದು ನಿರೀಕ್ಷಿಸಲಾಗಿದೆ.
ಆದರೆ, ಭಾರತ ತಂಡದ ನಾಯಕನ ಗ್ರಹಗತಿ ಚೆನ್ನಾಗಿಲ್ವಾ ಎಂಬ ಪ್ರಶ್ನೆ ಮೂಡತೊಡಗಿದೆ. ಇತ್ತೀಚಿಗೆ ರೋಹಿತ್ ಶರ್ಮಾ ಅವರ ಮರೆವಿನ ಅಭ್ಯಾಸ ಅತಿರೇಕವಾಗಿದೆ. 2023ರ ಏಷ್ಯಾಕಪ್ನ ಫೈನಲ್ ನಂತರ ತಮ್ಮ ಪಾಸ್ಪೋರ್ಟ್ ಅನ್ನು ಕೊಲಂಬೊದ ಹೋಟೆಲ್ನಲ್ಲಿಯೇ ಬಿಟ್ಟು ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ಇದೀಗ ಇತ್ತೀಚಿನ ಕೆಲವು ವರದಿ ಪ್ರಕಾರ, ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತನ್ನ ಐಫೋನ್ ಕಳೆದುಕೊಂಡಿದ್ದಾರೆ ಎಂಬುದು ಮುನ್ನೆಲೆಗೆ ಬಂದಿದೆ.

ಗಮನಾರ್ಹವೆಂದರೆ, ಅನುಭವಿ ಆರಂಭಿಕ ಬ್ಯಾಟ್ಸ್ಮನ್ ಮೂರನೇ ಏಕದಿನ ಪಂದ್ಯಕ್ಕಿಂತ ಮೊದಲು ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ಅವರ ಐಫೋನ್ ಕಾಣೆಯಾಗಿದೆ. ಮೈಖೇಲ್ ವರದಿ ಪ್ರಕಾರ, ರೋಹಿತ್ ಶರ್ಮಾ ಅವರ ಫೋನ್ ಕಾಣೆಯಾಗಿದೆ ಎಂಬ ಸುದ್ದಿ ಇಂಟರ್ನೆಟ್ನಲ್ಲಿ ತ್ವರಿತವಾಗಿ ವೈರಲ್ ಆಗಿದೆ.
ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಫೋನ್ ನಾಪತ್ತೆಯಾಗಿದ್ದು, ಈ ವಿಷಯದಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಭಾರತ ತಂಡದ ನಾಯಕನ ಫೋನ್ ಹುಡುಕಲು ಪ್ರಯತ್ನಿಸುತ್ತಿದ್ದಾರೆ.
ಆದಾಗ್ಯೂ, 36 ವರ್ಷದ ರೋಹಿತ್ ಶರ್ಮಾ ತಮ್ಮ ಮರೆವಿನಿಂದಾಗಿ ತನ್ನ ಪ್ರಮುಖ ವಸ್ತುಗಳನ್ನು ಬಿಟ್ಟುಬರುವುದು ಇದು ಹೊಸದೇನಲ್ಲ. ಟೀಮ್ ಇಂಡಿಯಾದ ಲಾಜಿಸ್ಟಿಕ್ಸ್ ಮ್ಯಾನೇಜರ್ಗಳು ತಂಡದ ಬಸ್ಗಳಲ್ಲಿ ವಿಮಾನ ನಿಲ್ದಾಣಗಳಿಗೆ ಹೊರಡಲು ಅನುಮತಿಸುವ ಮೊದಲು, ರೋಹಿತ್ ಶರ್ಮಾ ಅವರೊಂದಿಗೆ ಕ್ರಾಸ್ ಚೆಕ್ ಮಾಡುವುದನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಪ್ರಸಿದ್ಧ ಯೂಟ್ಯೂಬ್ನಲ್ಲಿ ಬ್ರೇಕ್ಫಾಸ್ಟ್ ವಿಥ್ ಚಾಂಪಿಯನ್ಸ್ ಟಾಕ್ಶೋನಲ್ಲಿ, ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರ ಮರೆವಿನ ವರ್ತನೆಯ ಬಗ್ಗೆ ಮಾತನಾಡಿದ್ದರು. ರೋಹಿತ್ ಶರ್ಮಾ ತಮ್ಮ ಐಪ್ಯಾಡ್, ವ್ಯಾಲೆಟ್, ಫೋನ್ ಮತ್ತು ಇತರ ವಸ್ತುಗಳನ್ನು ಬಿಟ್ಟು ಹೋಗುವುದನ್ನು ವಿರಾಟ್ ಕೊಹ್ಲಿ ನೋಡಿದ್ದು, ರೋಹಿತ್ ಒಮ್ಮೆ ತನ್ನ ಐಪ್ಯಾಡ್ ಅನ್ನು ವಿಮಾನದಲ್ಲಿ ಬಿಟ್ಟಿದ್ದನ್ನು ಅವರು ನೆನಪಿಸಿಕೊಂಡಿದ್ದರು.
ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಒಮ್ಮೆ ದೆಹಲಿಯಿಂದ ಇಂಗ್ಲೆಂಡ್ಗೆ ಪ್ರವಾಸಕ್ಕೆ ತೆರಳುವಾಗ ಪಾಸ್ಪೋರ್ಟ್ ತರಲು ಮರೆತಿದ್ದರು. ತಂಡವನ್ನು ದೆಹಲಿಯಲ್ಲಿ ಕೂಡಿಕೊಳ್ಳಲು ಹೇಳಲಾಗಿತ್ತು ಮತ್ತು ರೋಹಿತ್ ಶರ್ಮಾ ತನ್ನ ಪಾಸ್ಪೋರ್ಟ್ ಇಲ್ಲದೆ ಮುಂಬೈನಿಂದ ಬಂದಿದ್ದರು.
ಆದಾಗ್ಯೂ, ಈ ವಿಷಯಕ್ಕೆ ರೋಹಿತ್ ಶರ್ಮಾ ಹೆಚ್ಚು ತಲೆಕೆಡಿಸಿಕೊಳ್ಳುವಂತೆ ತೋರಲಿಲ್ಲ. ಏಕೆಂದರೆ ಅವರು ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ರೋಹಿತ್ ಶರ್ಮಾ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳನ್ನು ತಪ್ಪಿಸಿಕೊಂಡರು. ಆದರೆ ರಾಜ್ಕೋಟ್ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯಕ್ಕೆ ಮರಳಿದರು.
ಭಾರತ ಅಂತಿಮ ಪಂದ್ಯವನ್ನು ಸೋತರೂ, ವಿಶ್ವಕಪ್ಗೆ ಮುನ್ನ ರೋಹಿತ್ ಶರ್ಮಾ 57 ಎಸೆತಗಳಲ್ಲಿ 81 ರನ್ ಗಳಿಸುವ ಮೂಲಕ ತನ್ನ ಪ್ರಭಾವಶಾಲಿ ಪ್ರದರ್ಶನ ತೋರಿಸಿದರು. 353 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 286 ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 66 ರನ್ಗಳಿಂದ ಗೆಲುವು ಸಾಧಿಸಿತು.