ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಮೇಲೆ ಹಲವು ಪ್ರಶ್ನೆಗಳು ಮೊದಲಿನಿಂದಲೂ ಇದ್ದವು. ಇವರ ಕ್ಯಾಪ್ಟನ್ಸಿಯಲ್ಲಿ ಟೀಮ್ ಇಂಡಿಯಾ ಯಾವುದೇ ದೊಡ್ಡ ಟೂರ್ನಿಯ ಪ್ರಶಸ್ತಿಯನ್ನು ಗೆದ್ದಿಲ್ಲ. ಇವರನ್ನು ಟೀಮ್ ಇಂಡಿಯಾದ ನಾಯಕರನ್ನಾಗಿ ಮುಂದುವರೆಸಬೇಕಾ ಎಂಬ ಪ್ರಶ್ನೆಗಳು ಇದ್ದವು. ಈ ಎಲ್ಲ ಪ್ರಶ್ನೆಗಳಿಗೆ ಸಿರಾಜ್ ದ್ವೀಪ ರಾಷ್ಟ್ರದಿಂದಲೇ ಉತ್ತರ ನೀಡಿದ್ದಾರೆ.
ಏಷ್ಯಾ ಕಪ್ ಗೆ ಟೀಮ್ ಇಂಡಿಯಾ ತೆರಳುವ ಮುನ್ನ, ಈ ತಂಡ ಫೈನಲ್ ವರೆಗೂ ಹೋಗುತ್ತದೆ. ಆದರೆ ಕಪ್ ಗೆಲ್ಲುತ್ತದೋ ಇಲ್ಲವೋ ತಿಳಿಯದು ಎಂದೇ ಹೇಳಿದ್ದರು. ಆದರೆ ರೋಹಿತ್ ಶರ್ಮಾ ತಮ್ಮಲ್ಲಿ ನಾಯಕತ್ವ ಗುಣಗಳು ತುಂಬಿವೆ ಎಂಬುದನ್ನು ಸಾಬೀತು ಮಾಡಿದರು.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬಾಂಗ್ಲಾ ವಿರುದ್ಧ ಸೂಪರ್ 4 ಪಂದ್ಯದಲ್ಲಿ ಸೋತಿದ್ದನ್ನು ಬಿಟ್ಟರೆ ಉಳಿದ ಎಲ್ಲಾ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಈ ಎಲ್ಲ ಪಂದ್ಯಗಳನ್ನು ಒಮ್ಮೆ ಮೆಲಕು ಹಾಕಿದಾಗ ರೋಹಿತ್ ಶರ್ಮಾ ಮಾಡಿರುವ ಬದಲಾವಣೆಯಿಂದಲೇ ಟೀಮ್ ಇಂಡಿಯಾ ಈ ಹಂತಕ್ಕೆ ಬಂದು ನಿಂತಿದೆ ಎಂದು ಹೇಳ ಬಹುದು.

ನಿಜಕ್ಕೂ ಟೀಮ್ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಒಳ್ಳೆಯ ಪ್ಲೇಯರ್ ಎನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಅವರೊಬ್ಬ ಒಳ್ಳೆಯ ಕ್ಯಾಪ್ಟನ್ ಎಂದು ಹೇಳಲು ಸಾಧ್ಯವಿರಲಿಲ್ಲ. ಆದರೆ, ಭಾನುವಾರ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನದಿಂದ ರೋಹಿತ್ ಶರ್ಮಾ ಅವರ ಮೇಲೆ ಇದ್ದ ಟೀಕೆಗಳೆಲ್ಲಾ ಕೊಂಚ ಸೈಲೆಂಟ್ ಆದಂತೆ ಆಗಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಮುಂಬೈ ಇಂಡಿಯನ್ಸ್ ದಾಖಲೆಯ ಬಾರಿಗೆ ಪ್ರಶಸ್ತಿ ಜಯಸಿದೆ. ಆದರೆ, ಇವರ ರೆಕಾರ್ಡ್ ಬುಕ್ ನಲ್ಲಿ ಐಸಿಸಿ ಹಾಗೂ ಬಿಗ್ ಟೂರ್ನಿಗಳ ಹೆಸರುಗಳು ಇರಲಿಲ್ಲ, ಈಗ ಒಂದು ದಾಖಲಾಗಿದೆ.

ಟೀಮ್ ಇಂಡಿಯಾ ಟಾಸ್ ಸೋತರೂ ಸಹ ಪರಿಸ್ಥಿತಿಯ ಲಾಭವನ್ನು ಪಡೆಯಿತು. ಮಳೆಯಾಗಿ ಒದ್ದೆಯಾಗಿದ್ದ ಪಿಚ್ ನಲ್ಲಿ ಟೀಮ್ ಇಂಡಿಯಾ ತನ್ನ ಭರವಸೆಯ ಬೌಲರ್ ಗಳೊಂದಿಗೆ ಅಖಾಡಕ್ಕೆ ಇಳಿದಿದ್ದೇ ಪ್ಲಸ್ ಪಾಯಿಂಟ್.. ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ವೇಗಿಗಳು ಫೈನಲ್ ಪಂದ್ಯದಲ್ಲಿ ಅಬ್ಬರಿಸಿದರು. ಇನ್ನು ಸರಿಯಾದ ಸಮಯದಲ್ಲಿ ಬೌಲಿಂಗ್ ಚೇಂಜ್ ಮಾಡಿಯೂ ರೋಹಿತ್ ಮಿಂಚಿದರು.
ಒಂದು ಹಂತದಲ್ಲಿ ಬುಮ್ರಾ ಹಾಗೂ ಸಿರಾಜ್ ಅಕರ್ಷಕ ಸ್ಪೆಲ್ ಮಾಡುತ್ತಿದ್ದರು. ಆದರೆ 11ನೇ ಓವರ್ ನಲ್ಲಿ ಬೌಲಿಂಗ್ ಚೇಂಜ್ ಮಾಡಿ ಸೈ ಎನಿಸಿಕೊಂಡರು. ಒಂದು ಬದಿಯಲ್ಲಿ ವಿಕೆಟ್ ಬೀಳುತ್ತಿದ್ದಾಗ ಪರಿಸ್ಥಿತಿಯ ಲಾಭ ಪಡೆದ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರು.
ಇನ್ನು ಟೀಮ್ ಇಂಡಿಯಾ ಸ್ಪಿನ್ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಕುಲ್ದೀಪ್ ಯಾದವ್ ಅವರ ಮೇಲೆ ಭರವಸೆಯನ್ನು ಇಟ್ಟು ಆಡಿಸಿದರು. ಪರಿಣಾಮ ಟೀಮ್ ಇಂಡಿಯಾ ಏಷ್ಯಾ ಕಪ್ ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ನೆರವಾಯಿತು.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೂ ಮುನ್ನ ರೋಹಿತ್ ಶರ್ಮಾ ಪಡೆ ಸಾಧಿಸಿರುವ ಗೆಲುವು ನಿಜಕ್ಕೂ ವಿಶ್ವದ ಬೇರೆ ಬೇರೆ ತಂಡಗಳಿಗೆ ಅಪಾಯದ ಗಂಟೆ ಬಾರಿಸಿದಂತೆ ಕಾಣುತ್ತಿದೆ. ಏಷ್ಯಾ ಗೆದ್ದಾಯಿತು. ಇನ್ನು ವಿಶ್ವವನ್ನೇ ಗೆಲ್ಲುವುದೇ ಬಾಕಿ ಇದೆ.