
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಮಗುವಿಗೆ ತಂದೆಯಾಗಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಟ್ರೇಲಿಯಾದಿಂದ ಭಾರತಕ್ಕೆ ಪ್ರಯಾಣವನ್ನು ಬೆಳಸಿದ್ದಾರೆ. ಪಿತೃತ್ವದ ರಜೆ ಮಂಜೂರಾಗಿರುವ ಕಾರಣ ಕೊಹ್ಲಿ ಉಳಿದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತೊರೆಯುವ ಮುನ್ನ ನಾಯಕ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರರೊಂದಿಗೆ ಮಾತನಾಡಿದ್ದು ಸ್ಪೂರ್ತಿಯನ್ನು ತುಂಬಿದ್ದಾರೆ.
ಜನವರಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ದಂಪತಿ ಮೊದಲ ಮಗುವಿನ ಜನನದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ತವರಿಗೆ ವಾಪಾಸಾಗಲು ವಿಮಾನ ಹತ್ತು ಮುನ್ನ ವಿರಾಟ್ ಕೊಹ್ಲಿ ತಂಡದ ಆಟಗಾರರನ್ನು ಹುರಿದುಂಬಿಸಿದ್ದಾರೆ. ಸರಣಿಯಲ್ಲಿ ಉಳಿದಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ ಸಂಪೂರ್ಣ ಸಾಮರ್ಥ್ಯದ ಪ್ರದರ್ಶನ ನೀಡುವಂತೆ ಕೊಹ್ಲಿ ಸ್ಪೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ. ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರೀ ಸೋಲು ಕಂಡಿತ್ತು.
ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಉಳಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಅನುಭವ ಆಟಗಾರ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಆಸಿಸ್ ಪ್ರವಾಸ ಆರಂಬಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಪಿತೃತ್ವದ ರಜೆಗೆ ಮನವಿಯನ್ನು ಮಾಡಿದ್ದ ಕಾರಣ ಬಿಸಿಸಿಐ ಅಂತಿಮ ಮೂರು ಪಂದ್ಯಗಳಿಗೆ ಅಜಿಂಕ್ಯ ರಹಾನೆಯೇ ನಾಯಕ ಎಂದು ಮೊದಲೇ ಪ್ರಕಟಿಸಿತ್ತು.
ವಿರಾಟ್ ಕೊಹ್ಲಿ 2014ರಿಂದ ಟೀಮ್ ಇಂಡಿಯಾವನ್ನು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಮುನ್ನಡೆಸುತ್ತಿದ್ದು ಅಂಗಳದಲ್ಲಿ ಯಾವುದಕ್ಕೂ ಅಂಜದೆ ಮೈದಾನದಲ್ಲಿ ತಮ್ಮ ಉದ್ಧೇಶವನ್ನು ವ್ಯಕ್ತಪಡಿಸಬೇಕು ಎಂದು ಆಟಗಾರರಿಗೆ ಉತ್ತೇಜನವನ್ನು ನೀಡಿ ಭಾರತಕ್ಕೆ ಮರಳಿದ್ದಾರೆ.
ಇನ್ನು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇತ್ತ ಭಾರತಕ್ಕೆ ವಾಪಾಸಬೇಕಾದರೆ ಅತ್ತ ಸೀಮಿತ ಓವರ್ಗಳ ಉಪನಾಯಕನಾಗಿರುವ ರೋಹಿತ್ ಶರ್ಮಾ ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಸಿಡ್ನಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಮೂರನೇ ಟೆಸ್ಟ್ಗೆ ರೋಹಿತ್ ಶರ್ಮಾ ಅಲಭ್ಯರಾಗಲಿದ್ದಾರೆ.