ಭೀಕರ ಅಪಘಾತಕ್ಕೆ ತುತ್ತಾಗಿದ್ದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅದ್ಭುತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಗಾಯದ ಕಾರಣದಿಂದಾಗಿ ಈಗಾಗಲೇ ಐಪಿಎಲ್ 2023, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023ಯಂತಾ ಪ್ರಮುಖ ಟೂರ್ನಿಗಳನ್ನು ಕಳೆದುಕೊಂಡಿದ್ದು ವಿಶ್ವಕಪ್ ಟೂರ್ನಿಯನ್ನು ಕೂಡ ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಪಂತ್ ಚೇತರಿಕೆ ಕಾಣಿಸಿಕೊಳ್ಳುತ್ತಿರುವುದು ಸಮಾಧಾನಕರ ಸಂಗತಿ.
ಗಾಯಗಳಿಂದ ಚೇತರಿಸಿಕೊಂಡು ಎರಡನೇ ಮತ್ತೊಮ್ಮೆ ಮೈದಾನದಲ್ಲಿ ಅಬ್ಬರಿಸಲು ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ದೊಡ್ಡ ದುರ್ಘಟನೆಯಿಮದ ಪಾರಾಗಿರುವುದಕ್ಕೆ ರಿಷಭ್ ಪಂತ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಕೃತಜ್ಞತೆ ಸಲ್ಲಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯ 'ಬಯೋ'ದಲ್ಲಿ ಪಂತ್ "ಎರಡನೇ ಹುಟ್ಟಿದ ದಿನಾಂಕ 05/01/23' ಎಂದು ಬರೆದುಕೊಂಡಿದ್ದಾರೆ. ಅಪಘಾತದ ಬಳಿಕ ಆಸ್ಪತ್ರೆಗೆ ದಾಖಳಾಗಿದ್ದ ಪಂತ್ ಅವರಿಗೆ ಈ ದಿನಾಂಕದಂದು ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯನ್ನಯ ನಡೆಸಲಾಗಿತ್ತು. ಅದನ್ನು ತಮ್ಮ ಮರುಹುಟ್ಟು ಎಂದು ಉಲ್ಲೇಖಿಸಿದ್ದಾರೆ ಪಂತ್.

ರಿಷಭ್ ಪಂತ್ ಇತ್ತೀಚೆಗೆ ತಮ್ಮ ಅಭ್ಯಾಸದ ಕೆಲ ವಿಡಿಯೋಗಳನ್ನು ಹಂಚಿಕೊಂಡಿದ್ದು ಇದರಲ್ಲಿ ಅವರು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಊರುಗೋಲು ಬಿಟ್ಟು ಈಗ ಸರಾಗವಾಗಿ ನಡೆಯುತ್ತಿದ್ದರೂ ಮೊಣಕಾಲಿಗೆ ನೀಕ್ಯಾಪ್ ಧರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಾಧ್ಯವಾದಷ್ಟು ಬೇಗನೆ ಮತ್ತೆ ಮೈದಾನಕ್ಕಿಳಿಯುವ ಧಾವಂತದಲ್ಲಿದ್ದಾರೆ ಪಂತ್. ಸದ್ಯ ಬೆಂಗಳೂರಿನ ಎನ್ಸಿಎನಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ತಮ್ಮ ಇತ್ತೀಚಿನ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಪಂತ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಂಡದ ಸಹ ಆಟಗಾರರಾದ ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಯುಜ್ವೇಂದ್ರ ಚಹಾಲ್ ಜೊತೆಗೆ ಕಾಣಿಸಿಕೊಂಡಿದ್ದರು. ರಿಹ್ಯಾಬ್ನ ಭಾಗವಾಗಿ ಅವರು ಈಜು, ಆಕ್ವಾ-ಥೆರಪಿ ಮತ್ತು ಟೇಬಲ್ ಟೆನ್ನಿಸ್ನಂತಹ ದೈಹಿಕ ಚಟುವಟಿಕೆಗಳನ್ನು ಸಾಧ್ಯವಾದಷ್ಟು ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಅವರು ಯಾವಾಗ ತಂಡಕ್ಕೆ ಮರಳಲು ಸಾಧ್ಯವಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ.
ಡಿಸೆಂಬರ್ 30ರಂದು ಮುಂಜಾನೆ ತಮ್ಮ ಮನೆಗೆ ಒಬ್ಬಂಟಿಯಾಗಿ ಕಾರಿನಲ್ಲಿ ತೆರಳುತ್ತಿದ್ದ ರಿಷಭ್ ಪಂತ್ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು. ಅಪಘಾತದ ತೀವ್ರತೆಗೆ ರಿಷಭ್ ಪಂತ್ ಸಂಚರಿಸುತ್ತಿದ್ದ ಕಾರು ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಆದರೆ ಅದೃಷ್ಟವಶಾತ್ ಕಾರಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು.