ಇತ್ತೀಚಿಗೆ 2024ರ ಐಸಿಸಿ ಟಿ20 ವಿಶ್ವಕಪ್ ವಿಜೇತ ವಿಶ್ವ ಚಾಂಪಿಯನ್ ಭಾರತ ಕ್ರಿಕೆಟ್ ತಂಡವು ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್ನಲ್ಲಿ ವಿಶೇಷ ಕೇಕ್ ಕತ್ತರಿಸುವ ಸಮಾರಂಭವನ್ನು ನಡೆಸಿತು.
ಟೀಮ್ ಇಂಡಿಯಾ ಆಟಗಾರರು ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಲು ತೆರಳುತ್ತಿದ್ದಾಗ ಕಸ್ಟಮ್ ನಿರ್ಮಿತ 'ಇಂಡಿಯಾ ಚಾಂಪಿಯನ್ಸ್' ಜೆರ್ಸಿಗಳನ್ನು ಧರಿಸಿದ್ದರು.

ಐಟಿಸಿ ಮೌರ್ಯ ಹೋಟೆಲ್ನ ಬಾಣಸಿಗರು ತಯಾರಿಸಿದ ವಿಶೇಷ ಕೇಕ್ ಮೂರು ಹಂತದ ರಚನೆಯನ್ನು ಹೊಂದಿದ್ದು, ಇದು ಕಿತ್ತಳೆ, ನೀಲಿ ಮತ್ತು ಬಿಳಿ ಬಣ್ಣಗಳನ್ನು ಹೊಂದಿದ್ದು, ಭಾರತದ ಟಿ20 ಜೆರ್ಸಿಯ ಬಣ್ಣಗಳನ್ನು ಪ್ರತಿನಿಧಿಸುತ್ತದೆ.
ಭಾರತ ಗೆದ್ದ ಐಸಿಸಿ ಬೆಳ್ಳಿ ಟ್ರೋಫಿಯ ಪ್ರತಿಕೃತಿಯು ಕೇಕ್ನ ಅಗ್ರಸ್ಥಾನದಲ್ಲಿದೆ ಮತ್ತು ಭಾರತ ತಂಡವು ಟ್ರೋಫಿಯನ್ನು ಎತ್ತುವ ಫೋಟೋಗಳನ್ನು ಹೊಂದಿತ್ತು.
ವಿಶ್ವಕಪ್ ವಿಜೇತ ಭಾರತ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೇಕ್ ಕತ್ತರಿಸುವ ಸಮಾರಂಭದ ನೇತೃತ್ವವನ್ನು ವಹಿಸುತ್ತಿದ್ದಂತೆ, ಹೋಟೆಲ್ ಸಿಬ್ಬಂದಿಗಳು ಹಾಜರಿದ್ದು ವಿಶ್ವಕಪ್ ಹೀರೋಗಳನ್ನು ಹುರಿದುಂಬಿಸಿದರು.
ಇನ್ನು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇಕ್ ಕತ್ತರಿಸಲು ಆಗಮಿಸುತ್ತಿದ್ದಂತೆ ಹೋಟೆಲ್ ಸಿಬ್ಬಂದಿಯಿಂದ ಅದ್ಧೂರಿ ಸ್ವಾಗತ ಪಡೆದರು. ಟೀಮ್ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಇತರ ಆಟಗಾರರು ತಂಡದ ಬಸ್ಗೆ ತೆರಳುತ್ತಿದ್ದಂತೆಯೇ ಅವರನ್ನು ಹಿಂಬಾಲಿಸಿದರು. ಭಾರತ ತಂಡ ದೆಹಲಿಯಲ್ಲಿರುವ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಭೇಟಿಯಾಗಲಿದೆ.

ನೂತನ ಟಿ20 ವಿಶ್ವ ಚಾಂಪಿಯನ್ ಭಾರತ ತಂಡವು ಗುರುವಾರ, ಜುಲೈ 4ರ ಮುಂಜಾನೆ ಏರ್ ಇಂಡಿಯಾ ಚಾರ್ಟರ್ಡ್ ವಿಮಾನದ ಮೂಲಕ ಬಾರ್ಬಡೋಸ್ನಿಂದ ನವದೆಹಲಿಗೆ ಬಂದಿಳಿತು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡು ವಿಮಾನ ನಿಲ್ದಾಣದಿಂದ ಹೊರನಡೆದರು. ನೂರಾರು ಅಭಿಮಾನಿಗಳು ತಂಡವನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಜಮಾಯಿಸುತ್ತಿದ್ದಂತೆ "ವಿರಾಟ್ ಕೊಹ್ಲಿ' ಘೋಷಣೆಗಳು ಜೋರಾಗಿ ಮೊಳಗಿದವು.
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ತಂಡದ ಹೋಟೆಲ್ ಹೊರಗೆ ಡೋಲಿನ ಸದ್ದಿಗೆ ಭರ್ಜರಿ ನೃತ್ಯ ಮಾಡಿದರು. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ, ಭಾರತ ತಂಡವು ವಿಮಾನ ನಿಲ್ದಾಣಕ್ಕೆ ತೆರಳಲಿದೆ.
ನಂತರ ದೆಹಲಿಯಿಂದ ಮುಂಬೈಗೆ ಹಾರಲಿರುವ ಟೀಮ್ ಇಂಡಿಯಾ ಗುರುವಾರ ಸಂಜೆ ಮರೈನ್ ಡ್ರೈವ್ ಮತ್ತು ವಾಂಖೆಡೆ ಸ್ಟೇಡಿಯಂ ಬಳಿ ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಬಿಸಿಸಿಐ ಗಣ್ಯರೊಂದಿಗೆ ವಾಂಖೆಡೆ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಸಮಾರಂಭದೊಂದಿಗೆ ದಿನವು ಮುಕ್ತಾಯಗೊಳ್ಳಲಿದೆ.