ನವದೆಹಲಿ: ಟಿ20 ವಿಶ್ವಕಪ್ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಭಾರತ ಗುರುವಾರ ಕಣಕ್ಕೆ ಇಳಿಯಲಿದೆ. ಆಡಿದ ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದ ಭಾರತ, ನಮೀಬಿಯಾ ವಿರುದ್ಧ ಎರಡನೇ ಗೆಲುವಿನ ಹುಡುಕಾಟದಲ್ಲಿದೆ. ಆದರೆ ಸೂರ್ಯಕುಮಾರ್ ಯಾದವ್ ಪಡೆಗೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ.
ಹಾಲಿ ಚಾಂಪಿಯನ್ ಭಾರತ, ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಕಡೆಗೆ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ತಂಡದ ಪ್ರದರ್ಶನ ಸಹ ಸ್ಥಿರವಾಗಿರುವುದು ಅನಿವಾರ್ಯವಾಗಿದೆ. ಆಟಗಾರರು ಫಿಟ್ನೆಸ್ ಹಾಗೂ ಗಾಯದ ಸಮಸ್ಯೆ ತಂಡಕ್ಕೆ ದೊಡ್ಡ ಚಿಂತೆಯಾಗಿದೆ. ಈ ಸವಾಲನ್ನು ಮೆಟ್ಟಿನಿಲ್ಲುವದೇ ತಂಡದ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.

ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟರ್ ಆಗಿರುವ ಅಭಿಷೇಕ್ ಶರ್ಮಾ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರು ಚಿಕಿತ್ಸೆ ಪಡೆಯುತ್ತಿದ್ದು ಗುರುವಾರ ನಡೆಯಲಿರುವ ಪಂದ್ಯದಲ್ಲಿ ಇವರು ಮೈದಾನಕ್ಕೆ ಇಳಿಯುವುದು ಅನುಮಾನವಾಗಿದೆ. ಇವರ ಸ್ಥಾನದಲ್ಲಿ ಇನ್ನೋರ್ವ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ತಂಡವನ್ನು ಸೇರಿಕೊಳ್ಳಬಹುದಾಗಿದೆ.
ಸಂಜು ಸ್ಯಾಮ್ಸನ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ, ಇವರನ್ನು ಕೈ ಬಿಟ್ಟು ಇಶಾನ್ ಕಿಶನ್ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ಅಭಿಷೇಕ್ ಗಾಯಕ್ಕೆ ತುತ್ತಾಗಿದ್ದರಿಂದ ಸಂಜು ಸ್ಯಾಮ್ಸನ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬಹುದಾಗಿದೆ. ಇನ್ನು ಇಶಾನ್ ಕಿಶನ್ ಆರಂಭದಲ್ಲಿ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿ ಬಳಿಕ ಬಿಗ್ ಹಿಟ್ ಬಾರಿಸುವ ಅನಿವಾರ್ಯತೆ ಇದೆ. ಇನ್ನು ತಿಲಕ್ ವರ್ಮಾ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮೆಟ್ಟಿನಿಂತು ಆಟವನ್ನು ಆಡಬೇಕಿದೆ.
ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್ನಲ್ಲಿದ್ದು, ಇವರು ತಮ್ಮ ಸ್ಥಿರ ಬ್ಯಾಟಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಿಂಕು ಸಿಂಗ್ ತಂಡದ ಅಗತ್ಯಕ್ಕೆ ಅನುಸಾರವಾಗಿ ಆಟವನ್ನು ಆಡಬೇಕಿದೆ.
ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ಸಂಯೋಜನೆಯಲ್ಲಿ ಕಣಕ್ಕೆ ಇಳಿಯಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಪಾಕಿಸ್ತಾನ ವಿರುದ್ಧ ಭಾರತ ಫೆ.15 ರಂದು ಕೊಲಂಬೊದಲ್ಲಿ ಕಣಕ್ಕೆ ಇಳಿಯಲಿದ್ದು, ಈ ಪಿಚ್ ಸ್ಪಿನ್ ಬೌಲರ್ಗಳಿಗೆ ನೆರವು ನೀಡಲಿದೆ. ಇದನ್ನು ಗಮನಿಸಿ ಟೀಮ್ ಇಂಡಿಯಾ ನಮೀಬಿಯಾ ವಿರುದ್ಧವೂ ಇದೇ ತಂತ್ರಕ್ಕೆ ಮಣೆ ಹಾಕಬಹುದಾಗಿದೆ.

ವೇಗದ ಬೌಲರ್ಗಳ ರೂಪದಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕೆ ಇಳಿಯಲಿದ್ದಾರೆ. ಇವರು ಕಣಕ್ಕೆ ಇಳಿದಲ್ಲಿ ಮೊಹಮ್ಮದ್ ಸಿರಾಜ್ ಬೆಂಚ್ ಕಾಯಬೇಕಾಗುತ್ತದೆ. ಅರ್ಶದೀಪ್ ಸಿಂಗ್, ಬುಮ್ರಾಗೆ ಸಾಥ್ ನೀಡಲಿದ್ದಾರೆ. ವರುಣ್ ಚಕ್ರವರ್ತಿ ಅವರೊಂದಿಗೆ ಕುಲ್ದೀಪ್ಗೆ ಅವಕಾಶ ಸಿಗುತ್ತದಾ ಕಾದು ನೋಡಬೇಕಿದೆ.
ನಮೀಬಿಯಾ ಸಹ ಆಡಿದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಚುಟುಕು ಫಾರ್ಮೆಟ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕೆ ಇಳಿಯಲಿದ್ದು, ಸ್ಥಿರ ಪ್ರದರ್ಶನದ ಭರವಸೆ ಇಟ್ಟುಕೊಂಡಿದೆ.