ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ನವೆಂಬರ್ 22 ರಿಂದ 26 ರವರೆಗೆ ಪರ್ತ್ನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ನಾಯಕ ರೋಹಿತ್ ಶರ್ಮಾ ಮೊದಲೆರಡು ಪಂದ್ಯಗಳಿಂದ ದೂರ ಉಳಿಯುವುದು ಒಂದೆಡೆಯಾದರೆ, ಮತ್ತೊಂದೆಡೆ ಟೀಮ್ ಇಂಡಿಯಾ ಸ್ಟಾರ್ ಆಟಗಾರರು ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ ಭಾರತದ ಬಲಗೈ ಬ್ಯಾಟರ್ ಶುಭಮನ್ ಗಿಲ್ ಗಾಯಗೊಂಡಿರುವುದರಿಂದ ಆಸ್ಟ್ರೇಕಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾದಲ್ಲಿದ್ದಾರೆ. ಆದರೆ ಎರಡನೇ ಮಗುವಿನ ತಂದೆಯಾಗಿರುವ ನಾಯಕ ರೋಹಿತ್ ಶರ್ಮಾ ಇನ್ನೂ ಭಾರತದಲ್ಲಿದ್ದಾರೆ. ಹೀಗಾಗಿ ಅವರು ಮೊದಲ ಪಂದ್ಯವನ್ನೂ ಆಡುವ ಬಗ್ಗೆ ಅನುಮಾನವಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಗಾಯಗೊಂಡಿರುವುದು ಬೇಸರ ತಂದಿದೆ.

ಶುಭಮನ್ ಗಿಲ್ ಅಭ್ಯಾಸದ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಅವರ ಗಾಯದ ಬಗ್ಗೆ ಈಗಾಗಲೇ ಹೆಚ್ಚಿನ ನಿಗಾ ವಹಿಸಲಾಗಿದೆ. ಅವರು ಬೇಗ ಚೇತರಿಸಿಕೊಳ್ಳಬಹುದು. ಒಂದು ವೇಳೆ ಅವರು ಗಾಯದಿಂದ ಚೇತರಿಸಿಕೊಳ್ಳದಿದ್ದಾರೆ. ಪರ್ತ್ ಟೆಸ್ಟ್ನಲ್ಲಿ ಅವರು ಆಡುವ ಕುರಿತು ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು.
ಇತ್ತೀಚೆಗೆ ಶುಭಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ, ಭಾರತ 3-0 ಅಂತರದಲ್ಲಿ ಸರಣಿಯನ್ನು ಕಳೆದುಕೊಳ್ಳಬೇಕಾಯಿತು. ಈ ಸರಣಿಯಲ್ಲಿ ಗಿಲ್ 2 ಪಂದ್ಯಗಳ 4 ಇನ್ನಿಂಗ್ಸ್ಗಳಲ್ಲಿ 144 ರನ್ ಗಳಿಸಿದರು. 90 ರನ್ ಅವರ ಗರಿಷ್ಠ ಸ್ಕೋರ್ ಆಗಿತ್ತು. ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಟಾಪ್ ಬ್ಯಾಟರ್ಗಳು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಗಿಲ್ ಮಾತ್ರ ಜವಾಬ್ದಾರಿಯುತ ಆಟವಾಡುವ ಮೂಲಕ ಭಾರತದ ಪರ ಮಿಂಚಿದರು.
ಶುಭಮನ್ ಗಿಲ್ ಮಾತ್ರವಲ್ಲದೆ, ಈ ಇಬ್ಬರು ಆಟಗಾರರು ಕೂಡ ಗಾಯಗೊಂಡಿದ್ದಾರೆ. ಭಾರತ ತಂಡದ ಮತ್ತೊಬ್ಬ ಬಲಗೈ ಬ್ಯಾಟರ್ ಸರ್ಫರಾಜ್ ಖಾನ್ ಸಹಾ ಗಾಯಗೊಂಡಿದ್ದಾರೆ. ಇದರೊಂದಿಗೆ ತಂಡದ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಕೂಡ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದರು. ಅವರ ಗಾಯದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆಲುವು ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯೂಟಿಸಿ) ಫೈನಲ್ ತಲುಪಲು ಪ್ರಮುಖವಾಗಿದೆ. ಇಲ್ಲವಾದರೆ ಇತರೆ ತಂಡಗಳ ಫಲಿತಾಂಶದ ಮೇಲೆ ಭಾರತದ ಡಬ್ಲ್ಯೂಟಿಸಿ ಫೈನಲ್ ಭವಿಷ್ಯ ನಿರ್ಧಾರವಾಗಲಿದೆ.