ಮುಂಬೈ, ನ.10: ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಸೋಮವಾರ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದೆ. ಉತ್ತಮ ಫಾರ್ಮ್ ನಲ್ಲಿರುವ ಕರ್ನಾಟಕದ ಯುವ ಆಟಗಾರ ಕೆ.ಎಲ್. ರಾಹುಲ್ ಭಾರತದ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಕೇಂದ್ರ ವಲಯದ ವಿರುದ್ಧದ ದುಲೀಪ್ ಟ್ರೋಫಿ ಫೈನಲ್ನಲ್ಲಿ ಎರಡು ಶತಕ (185 ಹಾಗೂ 130 ರನ್) ಸಿಡಿಸಿದ್ದ 23ರ ಹರೆಯದ ಬೆಂಗಳೂರಿನ ಬ್ಯಾಟ್ಸ್ಮನ್ ರಾಹುಲ್ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ ನಲ್ಲಿ ಡಿಸೆಂಬರ್ 4 ರಿಂದ ಟೆಸ್ಟ್ ಸರಣಿ ಅರಂಭಗೊಳ್ಳಲಿದೆ.
ಟೀಂ ಇಂಡಿಯಾ ನಾಯಕ ಗಾಯಾಳುವಾಗಿರುವುದರಿಂದ ಎಂಎಸ್ ಧೋನಿ ಅವರು ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನವೆಂಬರ್ 21ರಂದು ಭಾರತ ಬಿಟ್ಟು ಬ್ರಿಸ್ಬೇನ್ ಗೆ ತೆರಳಲಿದೆ.ಉಳಿದ ಪಂದ್ಯಕ್ಕೆ ಧೋನಿ ಅವರು ನಾಯಕರಾಗಿ ಮುಂದುವರೆಯಲಿದ್ದಾರೆ. [ದ್ರಾವಿಡ್ ಜೊತೆ ಹೋಲಿಕೆ ಉತ್ಸಾಹ ಹೆಚ್ಚಿಸುತ್ತದೆ]
ಟೀಂ ಇಂಡಿಯಾದ ಮೂರನೇ ಸ್ಪಿನ್ನರ್ ಆಗಿ ಕರಣ್ ಶರ್ಮ ಹಾಗೂ ಕರ್ನಾಟಕದ ಯುವ ಸ್ಪಿನ್ನರ್ ಶ್ರೇಯಸ್ ಗೋಪಾಲ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಈ ಪೈಕಿ ಕರಣ್ ಶರ್ಮ ಆಯ್ಕೆಯಾದರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ರಾಹುಲ್ ಅವರಂತೆ ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡಲು ತಂಡಕ್ಕೆ ಆಯ್ಕೆಯಾಗಿದ್ದಾರೆ.
ರಾಹುಲ್ ತಂದೆ ಪ್ರತಿಕ್ರಿಯೆ: ಕೆಎಲ್ ರಾಹುಲ್ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರ ತಂದೆ ಲೋಕೇಶ್, ಅವನ ಆಯ್ಕೆ ನಿರೀಕ್ಷಿತವಾಗಿತ್ತು, ಈ ಋತುವಿನಲ್ಲಿ ಅವನು ಉತ್ತಮ ಫಾರ್ಮ್ ನಲ್ಲಿದ್ದಾನೆ. ದೇಶದ ಪರ ಆಡಲು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಚಿಕ್ಕಂದಿನಿಂದಲೂ ಕ್ರಿಕೆಟ್ ಬಗ್ಗೆ ತುಂಬಾ ಆಸಕ್ತಿಯಿಂದ ಕಲಿಯುತ್ತಿದ್ದ. ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಜೊತೆ ಹೋಲಿಕೆ ಮಾಡುವುದು ಈ ಸಮಯಕ್ಕೆ ಸರಿಯಿಲ್ಲ, ಅವರಂತೆ ಹೆಚ್ಚು ಕಾಲ ಭಾರತದ ಪರ ಆಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ವಿಜಯ್ ಭಾರದ್ವಾಜ್ : ಮಾಜಿ ಕ್ರಿಕೆಟರ್ ವಿಜಯ್ ಭಾರದ್ವಾಜ್ ಅವರು ಖಾಸಗಿ ಸುದ್ದಿವಾಹಿನಿ ಜೊತೆಗೆ ಮಾತನಾಡುತ್ತಾ, ಕೆಎಲ್ ರಾಹುಲ್ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಒಂದು ಸರಣಿಗೆ ಸೀಮಿತವಾಗಬಾರದು, ಅನೇಕ ವರ್ಷ ಟೀಂ ಇಂಡಿಯಾದಲ್ಲಿ ರಾಹುಲ್ ಆಡಲಿ ಎಂದು ಶುಭ ಹಾರೈಸಿದರು.
ಟೀಂ ಇಂಡಿಯಾ ಇಂತಿದೆ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶಿಖರ್ ಧವನ್, ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಸುರೇಶ್ ರೈನಾ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ನಮನ್ ಓಜಾ(ವಿಕೆಟ್ ಕೀಪರ್), ಆರ್ ಅಶ್ವಿನ್, ಕರಣ್ ಶರ್ಮ, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಮಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ವರುಣ್ ಅರೋನ್.