ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಬಳಿಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 4 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನವೆಂಬರ್ 8 ರಿಂದ ಟಿ20 ಸರಣಿ ಆರಂಭವಾಗಲಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಆದರೆ ಭಾರತ ತಂಡದೊಂದಿಗೆ ಹೆಡ್ಕೋಚ್ ಗೌತಮ್ ಗಂಭೀರ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗುತ್ತಿಲ್ಲ.

ಸೂರ್ಯಕುಮಾರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲು ಸಜ್ಜಾಗಿದೆ. ಸೂರ್ಯಕುಮಾರ್ ತಮ್ಮ ನಾಯಕತ್ವದಲ್ಲಿ ಹ್ಯಾಟ್ರಿಕ್ ಟಿ20 ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಮಧ್ಯೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಹೆಡ್ಕೋಚ್ ಬದಲಾವಣೆ ಆಗಿದ್ದಾರೆ. ಹರಿಣಗಳ ವಿರುದ್ಧ ಟಿ20ಗೆ ಗೌತಮ್ ಗಂಭೀರ್ ತೆರಳದೆ ಇರುವುದಕ್ಕೆ ಪ್ರಮುಖ ಕಾರಣವಿದೆ.
ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಗಂಭೀರ್ ಟೀಮ್ ಇಂಡಿಯಾ ಜೊತೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದಾರೆ. ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನವೆಂಬರ್ 22 ರಿಂದ ಐದು ಟೆಸ್ಟ್ಗಳ ಸರಣಿಯನ್ನು ಶುರುವಾಗಲಿದೆ. ಕಾಂಗೂರು ನೆಲದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಗೌತಮ್ ಗಂಭೀರ್ ಅವಶ್ಯಕತೆ ಟೀಮ್ ಇಂಡಿಯಾಕ್ಕೆ ಇದೆ. ಹೀಗಾಗಿ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಜೊತೆ ಹೋಗಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಗೌತಮ್ ಗಂಭೀರ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐ ಜವಾಬ್ದಾರಿ ವಹಿಸಿದೆ.
ನವೆಂಬರ್ 8 ರಂದು ದಕ್ಷಿಣ ಆಫ್ರಿಕಾದಲ್ಲಿ ಟಿ20 ಸರಣಿ ಆರಂಭವಾಗಲಿದೆ. ಇದಾದ ನಂತರ ಮುಂದಿನ ಮೂರು ಪಂದ್ಯಗಳು ಕ್ರಮವಾಗಿ ನವೆಂಬರ್ 10, 13 ಮತ್ತು 15 ರಂದು ಗ್ಕೆಬರ್ಹಾ, ಸೆಂಚುರಿಯನ್ ಮತ್ತು ಜೋಹಾನ್ಸ್ಬರ್ಗ್ನಲ್ಲಿ ನಡೆಯಲಿವೆ. ವರದಿಗಳ ಪ್ರಕಾರ, ಲಕ್ಷ್ಮಣ್ ಅವರನ್ನು ತಂಡದೊಂದಿಗೆ ಕಳುಹಿಸಲು ಬಿಸಿಸಿಐ ಸಿದ್ಧವಾಗಿದೆ. ಸಾಯಿರಾಜ್ ಬಹುತುಲೆ, ಹೃಷಿಕೇಶ್ ಕಾನಿಟ್ಕರ್ ಮತ್ತು ಸುಭದೀಪ್ ಘೋಷ್ ಅವರು ದಕ್ಷಿಣ ಆಫ್ರಿಕಾ ಸರಣಿಗಾಗಿ ಲಕ್ಷ್ಮಣ್ ಅವರ ಕೋಚಿಂಗ್ ಸಿಬ್ಬಂದಿಯ ಭಾಗವಾಗಿರಲಿದ್ದಾರೆ.
ಲಕ್ಷ್ಮಣ್ ಅವರು ಅನೇಕ ಪ್ರವಾಸಗಳಲ್ಲಿ ಭಾರತ ತಂಡಕ್ಕೆ ಕೋಚ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಜೂನ್ 2022 ರಲ್ಲಿ ಐರ್ಲೆಂಡ್ ಮತ್ತು ಜುಲೈ 2024 ರಲ್ಲಿ ಜಿಂಬಾಬ್ವೆ ಪ್ರವಾಸಗಳಲ್ಲಿ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ಈ ಎರಡು ಸಂದರ್ಭಗಳಲ್ಲಿ ಟೀಮ್ ಇಂಡಿಯಾ ಸರಣಿ ಗೆದ್ದು ಬೀಗಿದೆ.
ಅಕ್ಟೋಬರ್ 25 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. 2024ರ ಟಿ20 ವಿಶ್ವಕಪ್ ಚಾಂಪಿಯನ್ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ ಮತ್ತು ರಿಂಕು ಸಿಂಗ್ ಅವರಂತಹ ಸ್ಟಾರ್ ಆಟಗಾರರೂ ತಂಡದಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯಕುಮಾರ್ ವೈಶಾಖ್, ಅವೇಶ್ ಖಾನ್ , ಯಶ್ ದಯಾಳ್.