ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು ದೇವಿಯ ದರ್ಶನ ಪಡೆದಿದ್ದಾರೆ. ದೇವಿಯ ದರ್ಶನದ ವೇಳೆ ರಾಹುಲ್ಗೆ ಪತ್ನಿ ವಿಜೇತಾ ಸಾಥ್ ನೀಡಿದ್ದಾರೆ.
ಭಾರತ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಲಿದೆ. ಈ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ದೇವಸ್ಥಾನಕ್ಕೆ ಭೇಟಿ ನೀಡಿ, ಚಾಂಮುಂಡೇಶ್ವರಿಯ ಆರ್ಶಿವಾದ ಪಡೆದರು. ಈ ವೇಳೆ ದೇವಸ್ಥಾನದ ಮಂಡಳಿ ರಾಹುಲ್ ದ್ರಾವಿಡ್ ಅವರಿಗೆ ಸನ್ಮಾನಿಸಿತು.

ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಸದ್ಯ ರಜೆಯ ಮೂಡ್ನಲ್ಲಿದ್ದಾರೆ. ಸದ್ಯ ಅವರು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಗಂಣದಲ್ಲಿ ಮೈಸೂರ ವಲಯ ಆಯೋಜಿಸಿದ್ದ ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಗ ಸುಮೀತ್ ದ್ರಾವಿಡ್ ಆಟವನ್ನು ಕಣ್ಣು ತುಂಬಿಕೊಳ್ಳಲು ಆಗಮಿಸಿದ್ದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡೆಸಿದ್ದ ಕೀಕ್ರೆಟ್ ಪಂದ್ಯಾವಳಿಯನ್ನು ವೀಕ್ಷಣೆ ಮಾಡಲು ಅವರು ಮೈಸೂರಿಗೆ ಆಗಮಿಸಿದ್ದರು. ಇದೇ ಸಮಯದಲ್ಲಿ ಮೈಸೂರಿನಲ್ಲಿ ತಂಗಿದ್ದ ಕಾರಣ ಅವರು ಚಾಮುಂಡಿ ದೇವಿಯ ದರ್ಶನವನ್ನೂ ಪಡೆದಿದ್ದಾರೆ.
ಮೈಸೂರಿನ ಹೊರ ಒಲಯದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಕರ್ನಾಟಕ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ. ಮಗ ಸಮಿತ್ ಆಟ ನೋಡಲು ರಾಹುಲ್ ದ್ರಾವಿಡ್ ಪತ್ನಿ ವಿಜೇತಾ ಅವರೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ರಾಹುಲ್ ದ್ರಾವಿಡ್ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ವರೆಗೂ ತಲುಪಿತ್ತು. ಅಲ್ಲದೆ ಸತತ 10 ಪಂದ್ಯಗಳನ್ನು ಗೆದ್ದು ಬೀಗಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಟೀಮ್ ಇಂಡಿಯಾಕ್ಕೆ ನಿರಾಸೆ ಕಾದಿತ್ತು. ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೋಚಿಂಗ್ ಅಧಿಕಾರಾವಧಿ ಮುಗಿದಿತ್ತು.
ಎರಡನೇ ಅವಧಿಗೆ ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ ಆಗುತ್ತಾರೆ ಎಂಬ ಪ್ರಶ್ನೆಗಳು ಎದ್ದಿದ್ದವು. ಈ ಎಲ್ಲ ಊಹಾಪೋಹಗಳಿಗೂ ಬಿಸಿಸಿಐ ತೆರೆ ಎಳೆದಿದೆ. ಅಲ್ಲದೆ ರಾಹುಲ್ ದ್ರಾವಿಡ್ ಅವರ ಒಪ್ಪಂದವನ್ನು ಮುಂದುವರೆಸಲು ನಿರ್ಧರಿಸಿದೆ.
ಟೀಮ್ ಇಂಡಿಯಾ ಇದೇ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ತಂಡವನ್ನು ರಾಹುಲ್ ದ್ರಾವಿಡ್ ಮುನ್ನಡೆಸಲಿದ್ದಾರೆ. ಪ್ರವಾಸದಲ್ಲಿ ಟೀಮ್ ಇಂಡಿಯಾ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಆಡಲಿದೆ. ಮೂರು ಫಾರ್ಮೆಟ್ಗೂ ಬೇರೆ ಬೇರೆ ನಾಯಕರಿದ್ದಾರೆ. ಹೊಸ ನಾಯಕರೊಂದಿಗೆ ತಂಡವನ್ನು ಮುನ್ನಡೆಸುವ ಸವಾಲು ಟೀಮ್ ಇಂಡಿಯಾ ಕೋಚ್ ಹೆಗಲೇರಿದೆ.
ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ ತಂಡವನ್ನು ಮುನ್ನಡೆಸುತ್ತಿದ್ದಾರೆ. ಲಕ್ಷ್ಮಣ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ತವರಿನಲ್ಲಿ ಆಸೀಸ್ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ.