ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು: ಕೊಹ್ಲಿ ನಾಯಕತ್ವ ಕಿತ್ತುಕೊಂಡವರ ಪ್ಲಾನ್ ಫ್ಲಾಪ್ ಎಂದ ಮಾಜಿ ಕ್ರಿಕೆಟಿಗ!

ಕಳೆದ ವರ್ಷ ಯುಎಇಯಲ್ಲಿ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ಘೋಷಣೆಯನ್ನು ಮಾಡಿದ ದಿನದಂದು ಶುರುವಾದ ನಾಯಕತ್ವದ ಕುರಿತಾದ ವಿವಾದ ಇಂದು ಟೀಮ್ ಇಂಡಿಯಾಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮೊದಲಿಗೆ ಟಿಟ್ವೆಂಟಿ ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿದ ವಿರಾಟ್ ಕೊಹ್ಲಿ ಅವರನ್ನು ನಂತರದ ದಿನಗಳಲ್ಲಿ ಬಿಸಿಸಿಐ ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ತೆಗೆದುಹಾಕಿತು. ವೈಟ್ ಬಾಲ್ ಕ್ರಿಕೆಟ್ ಮಾದರಿಗೆ ಓರ್ವನೇ ನಾಯಕನಿರಬೇಕು ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಬಿಸಿಸಿಐ ಹೇಳಿಕೆಯನ್ನು ನೀಡಿತ್ತು. ಹೀಗೆ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ಕಳೆದುಕೊಂಡ ಕೊಹ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ಕೂಡಾ ರಾಜೀನಾಮೆ ಸಲ್ಲಿಸಿದರು.
ಹೀಗೆ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ನಾಯಕತ್ವವನ್ನು ಕೂಡಾ ಕಳೆದುಕೊಂಡಿದ್ದು ಸದ್ಯ ಓರ್ವ ಆಟಗಾರನಾಗಿ ಮಾತ್ರ ಟೀಮ್ ಇಂಡಿಯಾದಲ್ಲಿ ಉಳಿದುಕೊಂಡಿದ್ದಾರೆ. ಇನ್ನು ಕೊಹ್ಲಿ ನಂತರ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದರು. ಆದರೆ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಗಾಯಕ್ಕೊಳಗಾದ ಕಾರಣ ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕನಾಗಿ ಮುನ್ನಡೆಸಿದರು. ಆದರೆ ದುರದೃಷ್ಟವಶಾತ್ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಲ್ಲಿ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದೆ. ಹೌದು, ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಕೆಎಲ್ ರಾಹುಲ್ ನಾಯಕತ್ವದ ಟೀಮ್ ಇಂಡಿಯಾವನ್ನು 3-0 ಅಂತರದಲ್ಲಿ ಸೋಲಿಸಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡು ವೈಟ್ ವಾಶ್ ಬಳಿದಿದೆ. ಹೀಗೆ ಟೀಮ್ ಇಂಡಿಯಾ ಹೀನಾಯ ಸೋಲನ್ನು ಕಂಡ ಬೆನ್ನಲ್ಲೇ ಈ ಸೋಲಿಗೆ ಕಾರಣವೇನು ಎಂಬ ಚರ್ಚೆಗಳು ಆರಂಭವಾಗಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಮಾತನಾಡಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲಲು ಕಾರಣವೇನೆಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ..

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದೇ ಸೋಲಿಗೆ ಕಾರಣ
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಹೀನಾಯ ಸೋಲಿನ ಕುರಿತು ಮಾತನಾಡಿರುವ ರಶೀದ್ ಲತೀಫ್ ವಿರಾಟ್ ಕೊಹ್ಲಿ ಅವರನ್ನು ಭಾರತ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಿದ್ದೇ ಈ ಹೀನಾಯ ಸೋಲಿಗೆ ಕಾರಣ ಎಂದಿದ್ದಾರೆ. ಏಳೆಂಟು ವರ್ಷಗಳ ಕಾಲ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿಯನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿದ್ದು ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ ಎಂದು ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದವರ ಯೋಜನೆ ಫ್ಲಾಪ್
ಇನ್ನೂ ಮುಂದುವರಿದು ಮಾತನಾಡಿರುವ ರಶೀದ್ ಲತೀಫ್ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದವರು ಯಾರೇ ಆಗಿರಲಿ ಅವರ ಯೋಜನೆ ನೆಲಕಚ್ಚಿದೆ ಎಂದಿದ್ದಾರೆ. ಹಲವಾರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಅವರ ಯೋಜನೆಗಳ ಬೇರು ಟೀಮ್ ಇಂಡಿಯಾದಲ್ಲಿ ನೆಲೆಯೂರಿದೆ ಹೀಗಾಗಿ ಕೊಹ್ಲಿ ನಾಯಕತ್ವವಿಲ್ಲದ ಟೀಮ್ ಇಂಡಿಯಾ ಇತರೆ ಆಟಗಾರನ ನಾಯಕತ್ವದಲ್ಲಿ ಅಷ್ಟೇ ಮಟ್ಟದ ಪ್ರದರ್ಶನವನ್ನು ನೀಡುವುದು ಅಸಾಧ್ಯ, ಇದೊಂದು ಅವನತಿಯಾಗುತ್ತಿದೆ ಎಂದು ರಶೀದ್ ಲತೀಫ್ ಬೇಸರ ವ್ಯಕ್ತಪಡಿಸಿದ್ದಾರೆ.

ಪರೋಕ್ಷವಾಗಿ ಸೌರವ್ ಗಂಗೂಲಿಗೆ ಕುಟುಕಿದ್ರಾ ರಶೀದ್ ಲತೀಫ್?
ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕೆಟ್ಟ ಯೋಜನೆ ಎಂದು ತೆಗಳಿರುವ ರಶೀದ್ ಲತೀಫ್ ಪರೋಕ್ಷವಾಗಿ ಸೌರವ್ ಗಂಗೂಲಿಗೆ ಟಾಂಗ್ ನೀಡಿದ್ರಾ ಎಂಬ ಅನುಮಾನವನ್ನು ಮೂಡಿಸಿದೆ. ಏಕೆಂದರೆ ವಿರಾಟ್ ಕೊಹ್ಲಿ ನಾಯಕತ್ವದ ವಿಚಾರದಲ್ಲಿ ಸೌರವ್ ಗಂಗೂಲಿ ಹೆಸರು ಯಾವಾಗಲೂ ತಳುಕು ಹಾಕಿಕೊಳ್ಳುತ್ತಿದ್ದು, ಕೊಹ್ಲಿ ಅಭಿಮಾನಿಗಳು ಕೊಹ್ಲಿ ನಾಯಕತ್ವವನ್ನು ಕಸಿದುಕೊಂಡದ್ದು ಗಂಗೂಲಿಯೇ ಎಂದು ಕಿಡಿ ಕಾರುತ್ತಲೇ ಇದ್ದಾರೆ. ಹೀಗಾಗಿ ರಶೀದ್ ಲತೀಫ್ ನೀಡಿರುವ ಈ ಹೇಳಿಕೆ ಸೌರವ್ ಗಂಗೂಲಿ ಅವರಿಗೆ ಅನ್ವಯಿಸುತ್ತಾ ಎಂಬ ಅನುಮಾನ ಮೂಡಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications