ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ನಂತರ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಫೈನಲ್ ತಲುಪುವ ದೃಷ್ಟಿಯಿಂದ ಗಂಭೀರ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಬೆಂಗಳೂರು ಮತ್ತು ಪುಣೆ ಟೆಸ್ಟ್ ಪಂದ್ಯಗಳ ಸೋಲಿನ ನಂತರ ಇದೀಗ ರೋಹಿತ್ ಶರ್ಮಾ ಪಡೆ ಮುಂಬೈನಲ್ಲಿ ಕಮ್ ಬ್ಯಾಕ್ ಮಾಡಲು ತಯಾರಿ ನಡೆಸಿದೆ. ತಂಡವು ವೈಟ್ವಾಶ್ ತಪ್ಪಿಸಲು ಮುಂಬೈ ಟೆಸ್ಟ್ ಪಂದ್ಯವನ್ನು ಗೆಲ್ಲೆಲ್ಲೇಬೇಕಾಗಿದೆ. ಟೀಮ್ ಇಂಡಿಯಾ ಮೊದಲು ಸೀಮಿಂಗ್ ಮತ್ತು ನಂತರ ಸ್ಪಿನ್ನಿಂಗ್ ಪಿಚ್ನಲ್ಲಿ ಸೋತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದರ ಬೆನ್ನಲ್ಲೇ ಗಂಭೀರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಕಳೆದ 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಸೋತಿರುವ ಬೆನ್ನಲ್ಲೇ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎಲ್ಲಾ ಆಟಗಾರರಿಗೆ ವಿಶೇಷ ಸಂದೇಶ ನೀಡಿದೆ. ಮೂರನೇ ಟೆಸ್ಟ್ಗೂ ಮುನ್ನ ಮುಂಬೈನಲ್ಲಿ ಐಚ್ಛಿಕ ತರಬೇತಿ ಇರುವುದಿಲ್ಲ ಎಂದು ಮ್ಯಾನೇಜ್ಮೆಂಟ್ ಆಟಗಾರರಿಗೆ ತಿಳಿಸಿದೆ. ಇದರರ್ಥ ಆಟಗಾರನು ತರಬೇತಿ ಅವಧಿಯನ್ನು ತಪ್ಪಿಸುವಂತಿಲ್ಲ. ಆಟಗಾರರು ತರಬೇತಿ ಅವಧಿಯಲ್ಲಿ ಖಡ್ಡಾಯವಾಗಿ ಅಭ್ಯಾಸ ಮಾಡಬೇಕು.
ವರದಿಗಳ ಪ್ರಕಾರ, ನವೆಂಬರ್ 1 ರಂದು ಪ್ರಾರಂಭವಾಗುವ ಮೂರನೇ ಟೆಸ್ಟ್ಗೆ ಮೊದಲು ಎರಡು ಅಭ್ಯಾಸ ಅವಧಿಗಳಲ್ಲಿ ಭಾಗವಹಿಸಲು ಎಲ್ಲಾ ಆಟಗಾರರಿಗೆ ಸೂಚನೆ ನೀಡಲಾಗಿದೆ. ಅಕ್ಟೋಬರ್ 30 ಮತ್ತು 31 ರಂದು ಎರಡು ದಿನಗಳ ಅಭ್ಯಾಸವನ್ನು ನಿಗದಿಪಡಿಸಲಾಗಿದೆ. ಎಲ್ಲರೂ ಇದರಲ್ಲಿ ಭಾಗವಹಿಸಬೇಕು. ಇದು ಕಡ್ಡಾಯವಾಗಿದ್ದು, ಈ ಎರಡು ದಿನಗಳು ಆಟಗಾರರು ಅಭ್ಯಾಸ ಅವಧಿಯನ್ನು ತಪ್ಪಿಸುವಂತಿಲ್ಲ. ಭಾರತವು ಈ ಹಿಂದೆ ಆಟಗಾರರಿಗೆ ಒಂದು ದಿನ ಮುಂಚಿತವಾಗಿ ನೆಟ್ಗಳನ್ನು ತೊರೆಯಲು ಅವಕಾಶ ನೀಡಿತ್ತು. ಇದರಿಂದಾಗಿ ಅವರು ಐದು ದಿನಗಳ ಆಟಕ್ಕೆ ಮೊದಲು ಫ್ರೆಶ್ ಆಗಬಹುದಾಗಿತ್ತು. ಆದರೆ, ಈಗ ಟೆಸ್ಟ್ ಸರಣಿ ಸೋಲುತ್ತಿರುವುದು ಮ್ಯಾನೇಜ್ಮೆಂಟ್ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡ 2012 ರಿಂದ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ನವೆಂಬರ್ 2012 ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿಗೆ ಭಾರತ ಟೆಸ್ಟ್ ಸರಣಿ ಸೋತಿತ್ತು. ಆ ಬಳಿಕ ಭಾರತ 2013ರಲ್ಲಿ ವೆಸ್ಟ್ ಇಂಡೀಸ್, 2016ರಲ್ಲಿ ಇಂಗ್ಲೆಂಡ್ ಹಾಗೂ 2021ರಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಇದೀಗ ಇಲ್ಲಿ ಕಿವೀಸ್ ಪಡೆಯನ್ನು ಸತತ ಎರಡನೇ ಬಾರಿ ಸೋಲಿಸಲು ಸಜ್ಜಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ 26 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ 12ರಲ್ಲಿ ಗೆಲುವು, 7ರಲ್ಲಿ ಸೋಲು ಕಂಡಿವೆ. 7 ಪಂದ್ಯಗಳು ಡ್ರಾ ಆಗಿವೆ.