ಜುಲೈ 16 ಮಂಗಳವಾರ, ಟೀಮ್ ಇಂಡಿಯಾದ ನೂತನ ಟಿ20 ನಾಯಕನ ಹೆಸರು ಬಹುತೇಕ ನಿರ್ಧಾರವಾಗಿದೆ. ರೋಹಿತ್ ಶರ್ಮಾ ನಿವೃತ್ತಿಯ ನಂತರ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಎಂಬುದು ಪ್ರಶ್ನೆಯಾಗಿತ್ತು.
ಇದೀಗ ಈ ಪ್ರಶ್ನೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲವೊಂದು ಉತ್ತರ ನೀಡಿದೆ. ಜುಲೈ 27 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತದ ನೂತನ ನಾಯಕ ಕಾಣಿಸಿಕೊಳ್ಳಲಿದ್ದಾರೆ.

ಹಾರ್ದಿಕ್ ಪಾಂಡ್ಯ ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕರಾಗಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಮೂಲವೊಂದು ಪಿಟಿಐಗೆ ತಿಳಿಸಿದೆ . ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡದ ಉಪನಾಯಕರಾಗಿದ್ದರು.
ಇದೀಗ ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ ಆಗಿದ್ದಾರೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೂ ಲಭ್ಯವಿದ್ದು, ಹಾರ್ದಿಕ್ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಶ್ರೀಲಂಕಾದ ಟಿ20 ಸರಣಿಯ ನಂತರ ನಡೆಯಲಿರುವ ಏಕದಿನ ಸರಣಿಗೆ ಪಾಂಡ್ಯ ಲಭ್ಯವಿರುವುದಿಲ್ಲ. ವೈಯಕ್ತಿಕ ಕಾರಣಗಳಿಂದ ಪಾಂಡ್ಯ 3 ಪಂದ್ಯಗಳ ಏಕದಿನ ಸರಣಿಯನ್ನು ಆಡುವುದಿಲ್ಲ.
ಏಕದಿನ ಸರಣಿಗೆ ಸಂಬಂಧಿಸಿದಂತೆ, ಪಾಂಡ್ಯ ವೈಯಕ್ತಿಕ ಕಾರಣಗಳಿಂದ ವಿರಾಮ ಕೇಳಿದ್ದಾರೆ ಮತ್ತು ನಿಯಮಿತ ನಾಯಕ ರೋಹಿತ್ ಶರ್ಮಾ ಅವರಿಗೆ ಈ ಬಗ್ಗೆ ತಿಳಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ವೈಟ್ ಬಾಲ್ ಸರಣಗಾಗಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಉಪನಾಯಕನ ಹೆಸರನ್ನು ಇನ್ನೂ ನಿರ್ಧರಿಸಿಲ್ಲ.
ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಜುಲೈ 27 ರಿಂದ 30 ರವರೆಗೆ ಪಲ್ಲೆಕೆಲೆಯಲ್ಲಿ ನಡೆಯಲಿದೆ. ಇದಾದ ಬಳಿಕ ಆಗಸ್ಟ್ 2 ರಿಂದ 7 ರವರೆಗೆ ಕೊಲಂಬೊದಲ್ಲಿ ಏಕದಿನ ಸರಣಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ಮುಂಬರುವ ಶ್ರೀಲಂಕಾ ಟಿ20 ಸರಣಿಗೆ ಭಾರತದ ಉಪನಾಯಕ ಶುಭಮನ್ ಗಿಲ್ ಅಥವಾ ಸೂರ್ಯಕುಮಾರ್ ಯಾದವ್ ಎಂದು ಹೇಳಲಾಗುತ್ತಿದೆ.