
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದೆ. ಆದರೆ ಈ ಪಂದ್ಯ ಭಾವುಕ ಕ್ಷಣದೊಂದಿಗೆ ಆರಂಭವಾಯಿತು. ಪಂದ್ಯದ ಆರಂಭಕ್ಕೂ ಮುನ್ನ ನಡೆದ ರಾಷ್ಟ್ರಗೀತೆ ಹಾಡುವುದು ಸಂಪ್ರದಾಯ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದಾರೆ.
ಸಿಡ್ನಿ ಟೆಸ್ಟ್ನ ಆರಂಭಕ್ಕೂ ಮುನ್ನ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ದೇಶಗಳ ರಾಷ್ಟ್ರಗೀತೆಯನ್ನು ಹಾಡಲಾಯುತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಭಾವುಕತೆಯನ್ನು ನಿಯಂತ್ರಣ ಮಾಡುವಲ್ಲಿ ವಿಫಲರಾಗಿ ಕಣ್ಣೀರು ಹರಿಸಿದರು. ಈ ಬಗ್ಗೆ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಸಿರಾಜ್ "ಭಾರತೀಯ ಕ್ರಿಕೆಟ್ ತಂಡಕ್ಕೆ ಆಡುವುದನ್ನು ನೋಡಲು ತಂದೆ ಬಯಸಿದ್ದರು. ಅವರಿದ್ದರೆ ಈಗ ನಾನು ಆಡುವುದನ್ನು ನೋಡಬಹುದಾಗಿತ್ತು" ಎಂದು ತಾವು ಭಾವುರಾಗಿದ್ದಕ್ಕೆ ಕಾರಣವನ್ನು ಹೇಳಿದ್ದಾರೆ
ರಾಷ್ಟ್ರಗೀತೆಯ ಸಂದರ್ಭದಲ್ಲಿ ಸಿರಾಜ್ ಭಾವುಕರಾಗಿ ಕಣ್ತುಂಬಿಕೊಂಡಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಷ್ಟ್ರಗೀತೆ ಸಂಪೂರ್ಣವಾದ ಬಳಿಕ ಸಿರಾಜ್ ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯ ನೇರಪ್ರಸಾರದಲ್ಲಿ ಪ್ರಸಾರವಾಗಿದೆ. ಹೈದರಾಬಾದ್ನ ವೇಗದ ಬೌಲರ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ನ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆಯನ್ನು ಮಾಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಮೊಹಮ್ಮದ್ ಸಿರಾಜ್ಗೆ ಕಳೆದ ಕೆಲ ವಾರಗಳು ಅತ್ಯಂತ ಕಠಿಣವಾಗಿತ್ತು. ಟೆಸ್ಟ್ ಸರಣಿಯನ್ನಾಡುವ ಹಿನ್ನೆಲೆಯಲ್ಲಿ ಆಸಿಸ್ ನೆಲಕ್ಕೆ ಕಾಲಿಟ್ಟ ಸಿರಾಜ್ ಈ ಸಂದರ್ಭದಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ನವೆಂಬರ್ ತಿಂಗಳಲ್ಲಿ ಅಸೌಖ್ಯದಿಂದ ಸಿರಾಜ್ ತಂದೆ ಮೊಹಮ್ಮದ್ ಘೌಸ್ ನಿಧನರಾಗಿದ್ದರು. ಈ ಕಠಿಣ ಸಂದರ್ಭದಲ್ಲಿ ತವರಿಗೆ ಮರಳಲು ಅವಕಾಶ ನೀಡಿದರೂ ತಂಡದೊಂದಿಗೆ ಇದ್ದು ಟೆಸ್ಟ್ ತಂಡ ಸರಣಿಯಲ್ಲಿ ಭಾಗಿಯಾಗಲು ನಿರ್ಧರಿಸಿದ್ದರು. ಈ ಬಗ್ಗೆ ಬಳಿಕ ಪ್ರತಿಕ್ರಿಯಿಸಿದ್ದ ಸಿರಾಜ್ ತಂದೆಯ ಕನಸನ್ನು ನನಸು ಮಾಡಲು ತಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದಿದ್ದರು.