ಟೀಮ್ ಇಂಡಿಯಾ ಗುರುವಾರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕೆ ಇಳಿಯಲಿದೆ. "ಬಿ" ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಎಲ್ಲರ ಗಮನ ಸೆಳೆದಿದೆ. ಆದರೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸುದ್ದಿ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಪುಷ್ಠಿಯನ್ನು ನೀಡುತ್ತದೆ. ದೊಡ್ಡ ಟೂರ್ನಿ ಆರಂಭಕ್ಕೂ ಮುನ್ನವೇ ಅಸಮಾಧಾನದ ಹೊಗೆ ಭುಗಿಲೆದ್ದಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡುವ ಕನಸು ಭಾರತ ತಂಡದ್ದಾಗಿದೆ. ಆದರೆ ಈ ವೇಳೆ ಡ್ರೆಸ್ಸಿಂಗ್ ರೂಮ್ನಲ್ಲಿ ಎಲವೂ ಸರಿಯಿಲ್ಲ ಎಂಬ ಅಂಶ ಹೊರ ಬಿದ್ದಿದೆ. ಟೀಮ್ ಇಂಡಿಯಾ ಕೋಚ್ ಗೌಂತಮ್ ಗಂಭೀರ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ನಡುವೆ ಶೀತಲ ಸಮರ ನಡೆಯುತ್ತಿದೆ. ಈ ಸಮರ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಗೌತಮ್ ಗಂಭೀರ್ ತಮ್ಮ ಆಯ್ಕೆಯ ಮೊದಲ ವಿಕೆಟ್ ಕೀಪರ್ನನ್ನು ಆಯ್ಕೆ ಮಾಡಿದ್ದಾರೆ. ಈ ವೇಳೆ ಅವರು ಕನ್ನಡಿಗ ರಾಹುಲ್ ಅವರಿಗೆ ಮಣೆ ಹಾಕಿದ್ದಾರೆ. ಈ ಸುದ್ದಿ ಬರುತಲೆ ರಿಷಭ್ ಸಿಟ್ಟಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವ ರಿಷಭ್ ಆಸೆಗೆ ಪೆಟ್ಟು ಬಿದ್ದಂತೆ ಆಗಿದೆ. ಗಂಭೀರ್ ಅವರ ಹೇಳಿಕೆಯನ್ನು ಗಮನಿಸುವುದಾದರೆ ಪ್ರತಿಷ್ಠಿತ ಟೂರ್ನಿಯ ಎಲ್ಲ ಪಂದ್ಯಗಳನ್ನು ರಾಹುಲ್ ಆಡುತ್ತಾರೆ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಸುದ್ದಿ ರಿಷಭ್ಗೆ ನುಂಗಲಾರದ ತುತ್ತಾಗಿದೆ.
ರಿಷಭ್ ಒಬ್ಬ ಒಳ್ಳೆಯ ವಿಕೆಟ್ ಕೀಪರ್ ಬ್ಯಾಟರ್. ಆದರೆ ಏಕದಿನ ಹಾಗೂ ಟಿ20 ಫಾರ್ಮೆಟ್ನಲ್ಲಿ ಅವರ ಅಂಕಿ ಅಂಶಗಳು ಕೊಂಚ ಸಪ್ಪೆಯಾಗಿವೆ. ಇವರು ಭಾರತದ ಹಲವು ವಿಕೆಟ್ ಕೀಪರ್ ಬ್ಯಾಟರ್ಗಳಿಗಿಂತ ನೀರಸ ಪ್ರದರ್ಶನ ನೀಡಿದ್ದಾರೆ. ಆದರೂ ಇವರಿಗೆ ತಂಡದಲ್ಲಿ ಸ್ಥಾನವನ್ನು ನೀಡಲಾಗುತ್ತಿದೆ. ಇದಕ್ಕೆ ಕಾರಣ ರಿಷಭ್ ಪಂತ್ ಹಾಗೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಡುವೆ ಉತ್ತಮ ಸಂಬಂಧ ಹೊಂದಿದ್ದಾರೆ. ಇದರ ಲಾಭವನ್ನೇ ಪಡೆದು ಪಂತ್ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಎಂಬ ಮಾತುಗಳ ಸಹ ಇವೆ.

ಚಾಂಪಿಯನ್ಸ್ ಟ್ರೋಫೀ ತಂಡದಲ್ಲಿ ಸ್ಥಾನ ಪಡೆಯಲು ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಸಹ ಬೆವರು ಹರಿಸಿದ್ದರು. ಆದರೆ ಇವರಿಬ್ಬರ ಬದಲಿಗೆ ರಿಷಭ್ ಪಂತ್ಗೆ ಅವಕಾಶ ಸಿಕ್ಕಾಗ ಇಂತಹ ಮಾತುಗಳು ಕೇಳಲು ಆರಂಭಿಸಿವೆ. ಸದ್ಯ ರಿಷಭ್ ಪಂತ್ ಹಾಗೂ ಕೋಚ್ ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ರಿಷಭ್ ಪಂತ್ ಕೋಚ್ ಜೊತೆ ಮಾತನಾಡುತ್ತಿಲ್ಲ ಎಂಬ ಸುದ್ದಿ ಹೊರ ಬಿದ್ದಿದೆ. ಆದರೆ ಈ ಎಲ್ಲ ಬೆಳವಣಿಗೆಗಳು ತಂಡದ ಪ್ರದರ್ಶನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.