ಸೌತ್ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆಯಲಿದೆ ನಾಯಕತ್ವದ ಚರ್ಚೆ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದೆ. ಆದರೆ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾವೈರಸ್ ಹೆಚ್ಚಳವಾಗುತ್ತಿರುವುದರಿಂದ ಟೀಮ್ ಇಂಡಿಯಾಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿದೆ. ಒಂದುವೇಳೆ ಸರ್ಕಾರ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದರೆ, ಚೇತನ್ ಶರ್ಮಾ ಮುಂದಾಳತ್ವದ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ ಅವರನ್ನೇ ಭಾರತ ಏಕದಿನ ತಂಡದ ನಾಯಕನಾಗಿ ಮುಂದುವರೆಸಬೇಕೇ ಅಥವಾ ನೂತನ ನಾಯಕನ ಅಗತ್ಯವಿದೆಯಾ ಎಂಬುದರ ಕುರಿತು ಚರ್ಚೆ ನಡೆಸಲಿದೆ ಎನ್ನಲಾಗುತ್ತಿದೆ.
ಭಾರತ ಏಕದಿನ ನಾಯಕತ್ವ ಬದಲಾವಣೆ ವಿಚಾರ ಬಂದಿದ್ದೇಕೆ?
ಮೂಲಗಳು ತಿಳಿಸಿರುವ ಪ್ರಕಾರ ಬಿಸಿಸಿಐ ಏಕದಿನ ಮತ್ತು ಟಿ ಟ್ವೆಂಟಿ ಎರಡೂ ತಂಡಗಳಿಗೂ ಪ್ರತ್ಯೇಕ ನಾಯಕರನ್ನು ಮುಂದುವರಿಸಲು ಇಚ್ಛಿಸುತ್ತಿಲ್ಲವಂತೆ. ಹೀಗಾಗಿ ಭಾರತ ಏಕದಿನ ಮತ್ತು ಟಿ ಟ್ವೆಂಟಿ ಎರಡೂ ತಂಡಗಳಿಗೂ ಓರ್ವ ನಾಯಕನನ್ನೇ ನೇಮಿಸುವ ಉದ್ದೇಶವನ್ನು ಬಿಸಿಸಿಐ ಹೊಂದಿದೆ ಎನ್ನಲಾಗುತ್ತಿದೆ.
ಭಾರತ ಏಕದಿನ ನಾಯಕತ್ವ ಬದಲಾವಣೆಯನ್ನು ನಿರ್ಧರಿಸಲಿದ್ದಾರೆ ಈ ಇಬ್ಬರು
ಸದ್ಯ ಭಾರತ ಏಕದಿನ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡುವ ವಿಚಾರದ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಭಾರತ ಏಕದಿನ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡುವ ನಿರ್ಧಾರವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಕೈಗೊಳ್ಳಲಿದ್ದಾರೆ. ಈ ಇಬ್ಬರೂ ನಾಯಕನ ಬದಲಾವಣೆ ಸರಿಯಾದ ನಿರ್ಧಾರ ಎಂದು ಸಮ್ಮತಿ ಸೂಚಿಸಿದರೆ ಆದಷ್ಟು ಬೇಗ ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದು ಹೊಸ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗುವುದು ಖಚಿತ.