ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಿರ್ಣಾಯಕ ಘಟ್ಟವನ್ನು ತಲುಪುತ್ತಿದೆ. ಈ ಸಂದರ್ಭದಲ್ಲಿ ಭಾರತ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸಲು ಆರಂಭಿಸುವ ಸಿದ್ಧತೆಯಲ್ಲಿದೆ. ಇದರ ಮೊದಲ ಭಾಗವಾಗಿ ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಯ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನಾಡಲಿದ್ದು ಈ ಸರಣಿಗಾಗಿ ಇದೇ ವಾರ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ.
ಏಕದಿನ ವಿಶ್ವಕಪ್ ಆದ ತಕ್ಷಣವೇ ಭಾರತ ತಂಡ ಭಾರತದಲ್ಲಿಯೇ ಆಸ್ಟ್ರೇಲಿಯಾ ತಂಡದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಮೂಲಕ ಭಾರತ ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸಲಿದೆ. ಆದರೆ ಈ ಸರಣಿಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಅವರಂಥಾ ಪ್ರಮುಖ ಆಟಗಾರರು ಲಭ್ಯವಾಗುವ ಸಾಧ್ಯತೆಯಿಲ್ಲ. ಹೀಗಾಗಿ ಯುವ ಆಟಗಾರರಿಗೆ ಈ ಸರಣಿ ಅದ್ಭುತ ಅವಕಾಶ ಆಗಿರಲಿದೆ.

ಏಷ್ಯಕಪ್ನಲ್ಲಿ ಟೀಮ್ ಇಂಡಿಯಾಗೆ ಚಿಮ್ಮದ ಪದಕ ಗೆಲ್ಲಿಸಿಕೊಟ್ಟ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುವ ಸಂಜು ಸ್ಯಾಮ್ಸನ್ಗೆ ಈ ಸರಣಿ ಅದ್ಭುತ ಅವಕಾಶವಾಗಿರುವ ಸಾಧ್ಯತೆಯಿದೆ. ಈ ವಾರದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯ ಮುಕ್ತಾದ ಬಳಿಕ ತಂಡವನ್ನು ಘೋಷಣೆ ಮಾಡುವ ಸಾಧ್ಯತೆಯಿದೆ.
ಇನ್ನು ಯುವ ಆಟಗಾರಾದ ಋತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಈ ಸರಣಿಯಲ್ಲಿ ಭಾಗಿಯಾಗುವ ಸಾಧ್ಯತೆ ದಟ್ಟವಾಗಿದೆ. ಅದ್ಭುತ ಪ್ರದರ್ಶನ ನೀಡುತ್ತಿರುವ ಈ ಆಟಗಾರ ಮೇಲೆ ಆಐ್ಕೆ ಮಂಡಳಿ ಭರವಸೆಯಿಟ್ಟು ಈ ದೊಡ್ಡ ಸರಣಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಇನ್ನು ಸಂಜು ಸ್ಯಾಮ್ಸನ್ 2015ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಆಟಗಾರ. ಇವರಿಗೆ ಈ ಸರಣಿಯಲ್ಲಿ ಆಡುವ ಅವಕಾಶ ದೊರೆಯುವ ಜೊತೆಗೆ ತಂಡವನ್ನು ನಾಯಕನಾಗು ಮುನ್ನಡೆಸುವ ಅವಕಾಶ ದೊರೆತರೂ ಅಚ್ಚರಿಯಿಲ್ಲ.
ರಿಂಕು ಸಿಂಗ್ಗೆ ಅವಕಾಶ; ಭುವಿ ಕಮ್ಬ್ಯಾಕ್?
ಇನ್ನು ಮತ್ತೊಂದೆಡೆ ಚುಟುಕು ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆಯುತ್ತಿರುವ ರಿಂಕು ಸಿಂಗ್ಗೆ ಈ ಸರಣಿಯಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ. ಈ ಮೂಲಕ ಮುಂದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ತಾನು ಅರ್ಹ ಎಂದು ಸಾಬೀತುಪಡಿಸಲು ಅವಕಾಶ ದೊರೆತಂತಾಗಲಿದೆ. ಮತ್ತೊಂದೆಡೆ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್ ಈ ಸರಣಿಯಲ್ಲಿ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇತ್ತೀಚೆಗೆ ಭುವಿ ಪ್ರದರ್ಶನ ಪರಿಣಾಮಕಾರಿಯಾಗಿಲ್ಲದ ಕಾರಣ ತಂಡದಿಂದ ಹೊರಬಿದ್ದಿದ್ದರು.