ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್ಕೆ ಪ್ರಸಾದ್ ಅವರು ವಿರಾಟ್ ಕೊಹ್ಲಿ ಅವರನ್ನು ಮತ್ತೆ ಟೆಸ್ಟ್ ತಂಡದ ನಾಯಕತ್ವಕ್ಕೆ ಪರಿಗಣಿಸದಿರುವುದಕ್ಕೆ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ 2022ರ ಜನವರಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ, ರೋಹಿತ್ ಶರ್ಮಾ ಪ್ರಸ್ತುತ ಭಾರತ ತಂಡವನ್ನು ಟೆಸ್ಟ್ ಸ್ವರೂಪದಲ್ಲಿಯೂ ಮುನ್ನಡೆಸುತ್ತಿದ್ದಾರೆ.

ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ನಂತರ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಲಾಯಿತು ಎಂಬುದನ್ನು ಗಮನಿಸಬೇಕು.
ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡದ ವೈಟ್ ಬಾಲ್ ನಾಯಕರಾಗುತ್ತಾರೆಯೇ ಹಾಗೂ ರೋಹಿತ್ ಶರ್ಮಾ ಟೆಸ್ಟ್ ತಂಡವನ್ನು ಮಾತ್ರ ಮುನ್ನಡೆಸುತ್ತಾರೆಯೇ ಎಂದು ಕೇಳಿದಾಗ, ಮಾಜಿ ಮುಖ್ಯ ಆಯ್ಕೆಗಾರ ಎಂಎಸ್ಕೆ ಪ್ರಸಾದ್ ಅನುಮಾನದಿಂದ ಉತ್ತರಿಸಿದರು.
ಮಾಜಿ ಮುಖ್ಯ ಆಯ್ಕೆಗಾರನ ಪ್ರಕಾರ, ಆಯ್ಕೆದಾರರ ಮನಸ್ಥಿತಿಯು ಹೊಸ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25 ಚಕ್ರದೊಂದಿಗೆ ಇರುತ್ತದೆ. ಗಮನಾರ್ಹವೆಂದರೆ, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿದ್ದರೆ, ಏಕದಿನ ತಂಡಕ್ಕೆ ಉಪನಾಯಕನಾಗಿ ನೇಮಕಗೊಂಡಿದ್ದಾರೆ.
"ನಾನು ಈ ಪ್ರಶ್ನೆಗೆ ಉತ್ತರಿಸಬೇಕೆ ಎಂದು ನನಗೆ ತಿಳಿದಿಲ್ಲ. ಆಯ್ಕೆಗಾರರ ಮನಸ್ಥಿತಿ ನನಗೆ ಗೊತ್ತಿಲ್ಲ. ಸಾಮಾನ್ಯವಾಗಿ ಆಯ್ಕೆದಾರರ ಮನಸ್ಥಿತಿಯು ಈಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಚಕ್ರದೊಂದಿಗೆ ಇರಬೇಕು, ಅದು ಸ್ಪಷ್ಟ ಚಕ್ರವಾಗಿರಬೇಕು," ಎಂದು ಖೇಲ್ ನೌ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಎಂಎಸ್ಕೆ ಪ್ರಸಾದ್ ತಿಳಿಸಿದರು.
ವಿರಾಟ್ ಕೊಹ್ಲಿ ಕೂಡ ಟೆಸ್ಟ್ ತಂಡದ ನಾಯಕನಾಗಬಹುದು: ಎಂಎಸ್ಕೆ ಪ್ರಸಾದ್
ಅನುಭವಿ ವಿರಾಟ್ ಕೊಹ್ಲಿಯನ್ನು ಮತ್ತೆ ಟೆಸ್ಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲು ಏಕೆ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯ ಆಯ್ಕೆಗಾರ ಎಂಎಸ್ಕೆ ಪ್ರಸಾದ್ ಹೇಳಿದರು.
ಅಜಿಂಕ್ಯ ರಹಾನೆ ಅವರು ಅದ್ಭುತ ಪುನರಾಗಮನ ಮಾಡಿ ಟೆಸ್ಟ್ ತಂಡದ ಉಪನಾಯಕನಾದ ಉದಾಹರಣೆ ನೀಡಿದ ಅವರು, ಯುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸುವ ಸಾಧ್ಯತೆಗಳ ಬಗ್ಗೆ ಕೇಳಿದಾಗ, ಆಯ್ಕೆಗಾರರು ರೋಹಿತ್ ಶರ್ಮಾರನ್ನು ಮೀರಿ ನೋಡುತ್ತಿದ್ದರೆ ವಿರಾಟ್ ಕೊಹ್ಲಿ ಫೇವರಿಟ್ ಆಗಿರುತ್ತಾರೆ ಎಂದು ಹೇಳಿದರು.
"ವಿರಾಟ್ ಕೊಹ್ಲಿ ಯಾಕೆ ಮತ್ತೆ ಭಾರತ ಟೆಸ್ಟ್ ತಂಡದ ನಾಯಕ ಆಗಬಾರದು? ಸದ್ಯಕ್ಕೆ ನಾಯಕತ್ವದ ಬಗ್ಗೆ ವಿರಾಟ್ ಕೊಹ್ಲಿ ಮನಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಆಯ್ಕೆಗಾರರು ರೋಹಿತ್ ಶರ್ಮಾ ಬದಲಿ ಯೋಚಿಸುತ್ತಿದ್ದರೆ ಅಥವಾ ಯೋಚಿಸುತ್ತಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಒಂದು ವೇಳೆ ಯೋಚಿಸುತ್ತಿದ್ದರೆ, ವಿರಾಟ್ ಕೊಹ್ಲಿ ಕೂಡ ಆಯ್ಕೆಯಲ್ಲಿರಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಮಾಜಿ ಕ್ರಿಕೆಟಿಗನೂ ಆಗಿರುವ ಎಂಎಸ್ಕೆ ಪ್ರಸಾದ್ ತಿಳಿಸಿದರು.
ವಿರಾಟ್ ಕೊಹ್ಲಿ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡದ ಬಹು-ಮಾದರಿಯ ಸರಣಿಯಲ್ಲಿ ಆಡುತ್ತಿದ್ದಾರೆ. ಟೆಸ್ಟ್ ಮತ್ತು ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಆದರೆ ಟಿ20 ಸರಣಿಗೆ ಅವರನ್ನು ಕೈಬಿಡಲಾಗಿದೆ ಅಥವಾ ವಿಶ್ರಾಂತಿ ನೀಡಲಾಗಿದೆ.
ಡೊಮಿನಿಕಾ ಮತ್ತು ಟ್ರಿನಿಡಾಡ್ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಭಾರತ ತಂಡದ ಪ್ರವಾಸವು ಆರಂಭವಾಗಲಿದೆ. ತನ್ನ ಕ್ರಿಕೆಟ್ ಕೌಶಲ್ಯ ಮತ್ತು ಸಮರ್ಪಣಾ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಮಾಜಿ ಭಾರತ ನಾಯಕ ವಿರಾಟ್ ಕೊಹ್ಲಿ ಮುಂಬರುವ ಸರಣಿಯಲ್ಲಿ ಗಣನೀಯ ಪಾತ್ರವನ್ನು ವಹಿಸುವ ಸಾಧ್ಯತೆ ಇದೆ.