ಫೆಬ್ರವರಿಯಲ್ಲಿ ಸರಣಿ ಬಗ್ಗೆ ಚರ್ಚೆ
ಈ ಪ್ರವಾಸ ಈಗಾಗಲೇ ನಿರ್ಧರಿಸಿರುವ ಪ್ರವಾಸದ ಪಟ್ಟಿಯ ಭಾಗವಾಗಿಲ್ಲ. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ನ ನಿರ್ದೇಶಕರಾಗಿರುವ ಗ್ರೇಮ್ ಸ್ಮಿತ್ ತಮ್ಮ ಅಧಿಕೃತ ಪ್ರವಾಸದ ಸಂದರ್ಭದಲ್ಲಿ ಈ ಸರಣಿಯ ಬಗ್ಗೆ ಚರ್ಚೆಯನ್ನು ನಡೆಸಿದ್ದರು. ಇದರ ಬಗ್ಗೆ ಎರಡೂ ಮಂಡಳಿಗಳು ಮಾತುಕತೆಯನ್ನು ನಡೆಸಿದ್ದು ಅಂತಿಮ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಒಪ್ಪಿಗೆ ನೀಡಿದೆ ಎರಡೂ ಮಂಡಳಿಗಳು?
ಬುಧವಾರ ದೂರವಾಣಿ ಕಾನ್ಫರೆನ್ಸ್ ಮೂಲಕ ಈ ಸರಣಿಯ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಮೂರು ಪಂದ್ಯಗಳ ಚುಟುಕು ಸರಣಿಗಾಗಿ ಎರಡೂ ಮಂಡಳಿಗಳು ಒಪ್ಪಿಗೆಯನ್ನು ನೀಡಿದೆ. ಅದರೆ ಸರ್ಕಾರದ ನಿರ್ಧಾರನ್ನು ಬಿಸಿಸಿಐ ಎದುರು ನೋಡುತ್ತಿದೆ ಎಂದು ಮಾಹಿತಿಗಳು ಲಭ್ಯವಾಗುತ್ತಿದೆ.
ಕೊರೊನಾ ವೈರಸ್ ಬಳಿಕ ಮೊದಲ ಸರಣಿ?
ಈ ವರದಿಗಳು ನಿಜವೇ ಆಗಿದ್ದರೆ ಕೊರೊನಾ ವೈರಸ್ನಿಂದಾಗಿ ಕ್ರಿಕೆಟ್ ನಿಂತ ಬಳಿಕ ಭಾರತದ ಮೊದಲ ಪ್ರವಾಸವಾಗಿರಲಿದೆ. ಆದರೆ ಈ ಬಗ್ಗೆ ಬಿಸಿಸಿಐ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಸರ್ಕಾರ ಕ್ರೀಡೆಗಳ ಆಯೋಜಿಸುವ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿ ಹಸಿರು ನಿಶಾನೆ ತೋರಿದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮಾರ್ಚ್ನಲ್ಲಿ ಸರಣಿಗಾಗಿ ಬಂದು ವಾಪಾಸಾಗಿದ್ದ ಆಫ್ರಿಕಾ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಮಾರ್ಚ್ನಲ್ಲಿ ಭಾರತಕ್ಕೆ ಏಕದಿನ ಸರಣಿಯನ್ನಾಡಲು ಆಗಮಿಸಿತ್ತು. ಧರ್ಮಶಾಲಾದಲ್ಲಿ ಆಯೋಜನೆಯಾಗಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೆ ಲಕ್ನೋ ಮತ್ತು ಕೊಲ್ಕತ್ತಾದಲ್ಲಿ ನಡೆಯಬೇಕಾಗಿದ್ದ ಎರಡು ಪಂದ್ಯಗಳು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣ ಪ್ರವಾಸವನ್ನು ಮೊಟಕುಗೊಳಿಸುವ ತೀರ್ಮಾನಕ್ಕೆ ಬರಲಾಯಿತು.