ಕೋಲ್ಕತ್ತದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ಎರಡನೇ ಪಂದ್ಯತದಲ್ಲಿ ಗೆಲ್ಲಲೇ ಬೇಕಾದ ಒತ್ತಡ ಹೆಚ್ಚಿದೆ. ನಾಯಕ ಶುಭಮನ್ ಗಿಲ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಡೌಟ್ ಎನ್ನಲಾಗಿದೆ. ಹೀಗಾಗಿ ಭಾರತ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಕನಸು ಭಾರತ ತಂಡದ್ದಾಗಿದೆ.
ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮೆಟ್ಟಿನಿಲ್ಲುವ ಆಸೆ ಹೊಂದಿದೆ. ಬ್ಯಾಟರ್ಗಳು ಈ ಮೈದಾನದಲ್ಲಿ ಎಚ್ಚರಿಕೆಯ ಆಟವನ್ನು ಆಡಿದರೆ ಮಾತ್ರ ದೊಡ್ಡ ಇನಿಂಗ್ಸ್ ಕಟ್ಟುವ ಸಾಧ್ಯತೆ ಹೆಚ್ಚಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಎರಡೂ ತಂಡಗಳು ಬಲಿಷ್ಠವಾಗಿವೆ. ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರು ಪ್ರವಾಸಿ ತಂಡ ಜಯದ ವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ.

ಪಿಚ್ ವರದಿ: ಬಾರ್ಸಾಪರಾ ಕ್ರೀಡಾಂಗಣದ ಪಿಚ್ ಕೆಂಪು ಮಣ್ಣಿನಿಂದ ಕೂಡಿದೆ. ಈ ಪಿಚ್ ಸಾಮಾನ್ಯವಾಗಿ ಹೆಚ್ಚಿನ ವೇಗ, ಬೌನ್ಸ್ ಹೊಂದಿದೆ ಎಂದು ತಿಳಿದು ಬಂದಿದೆ. ಈ ಪಿಚ್ನಲ್ಲಿ ಮೊದಲೆರೆಡು ದಿನ ಬ್ಯಾಟರ್ಗಳಿಗೆ ನೆರವು ನೀಡಬಹುದು. ಅಲ್ಲದೆ ಮುಂದಿನ ಮೂರು ದಿನ ಸ್ಪಿನ್ ಬೌಲರ್ಗಳು ಅಬ್ಬರ ನಡೆಸಲಿದ್ದಾರೆ. ಆದರೆ ಈ ಪಿಚ್ ಮೇಲೆ ವೇಗದ ಬೌಲರ್ಗಳ ಕಡೆಗಣಿಸುವಂತಿಲ್ಲ.
ಭಾರತ ತಂಡದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲಾವಧಿಯಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಅವರ ಬದಲಿಗೆ ಮತ್ತೆ ಸಾಯಿ ಸುದರ್ಶನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿದ್ದರಿಂದ, ಈ ಸ್ಥಾನದಲ್ಲಿ ಆಡುವುದು ಯಾರು ಎಂಬ ಚಿಂತೆ ಆರಂಭವಾಗಿದೆ.

ಉಳಿದಂತೆ ರಿಷಭ್ ಪಂತ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ತಂಡದ ಪರ ಸ್ಥಿರ ಪ್ರದರ್ಶನ ನೀಡಬೇಕಾಗಿದೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಆರಂಭದಲ್ಲಿ ಎದುರಾಳಿಗಳನ್ನು ಕಾಡಬೇಕಿದೆ. ಅಲ್ಲದೆ ರನ್ಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಇದೆ. ಇನ್ನು ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸಹ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಬಹುದು.
ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬು ಬವುಮಾ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಕಾರ್ಬಿನ್ ಬಾಷ್, ಟೋನಿ ಡಿ ಜೋರ್ಜಿ, ಟ್ರಿಸ್ಟಾನ್ ಸ್ಟಬ್ಸ್ ತಂಡಕ್ಕೆ ಬ್ಯಾಟಿಂಗ್ ನಿಂದ ತಂಡಕ್ಕೆ ನೆರವಾಗಬೇಕಿದೆ. ಇನ್ನು ಬೌಲಿಂಗ್ನಲ್ಲಿ ಕಗಿಸೋ ರಬಾಡ ಗಾಯದಿಂದ ಬಳಲುತ್ತಿದ್ದು ಲುಂಗಿ ಎನ್ಗಿಡಿ ತಂಡಕ್ಕೆ ಸೇರಿದ್ದಾರೆ. ವೇಗಿ ಮಾರ್ಕೊ ಜಾನ್ಸನ್ ಭಾರತದ ಬ್ಯಾಟರ್ಗಳನ್ನು ಕಾಡಲಿದ್ದಾರೆ. ಇನ್ನು ಕೇಶವ್ ಮಹಾರಾಜ್ ಹಾಗೂ ಮೊದಲ ಪಂದ್ಯದಲ್ಲಿ ಪಿರ್ಕಿ ಕಮಾಲ್ ಮಾಡಿದ್ದ ಸೈಮನ್ ಹಾರ್ಮರ್ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗು ಪ್ಲ್ಯಾನ್ ಮಾಡಿಕೊಂಡಿದ್ದಾರೆ.