ಕಳೆದ 8 ವರ್ಷಗಳಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ಸತತ 2 ಬಾರಿ ಈ ಟೆಸ್ಟ್ ಸರಣಿ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ. ಈಗ ಹ್ಯಾಟ್ರಿಕ್ ಗೆಲುವಿನ ಮೇಲೆ ಭಾರತ ತಂಡ ಕಣ್ಣಿಟ್ಟಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೀಮ್ ಇಂಡಿಯಾ ಅನುಭವಿ ಬ್ಯಾಟರ್ಗಳಾದ ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ಅವರನ್ನು ಹೊಂದಿತ್ತು. ಇದಲ್ಲದೆ, ವೇಗದ ಬೌಲಿಂಗ್ದಲ್ಲಿ ಇಶಾಂತ್ ಶರ್ಮಾ ಹಾಗು ಮೊಹಮ್ಮದ್ ಶಮಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಈ ಬಾರಿ 8 ಯುವ ಆಟಗಾರರನ್ನು ಒಳಗೊಂಡ ಭಾರತ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ (ಬಿಜಿಟಿ) ಟೆಸ್ಟ್ ಸರಣಿಯ ಮೊದಲ ಪಂದ್ಯ ನವೆಂಬರ್ 22 ರಿಂದ ಪರ್ತ್ನಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ಚಾಂಪಿಯನ್ ಶಿಪ್ (ಡಬ್ಲ್ಯೂಟಿಸಿ) ಫೈನಲ್ ತಲುಪಲು ಆಸ್ಟ್ರೇಲಿಯಾ ವಿರುದ್ದ ಭಾರತ ಟೆಸ್ಟ್ ಸರಣಿ ಗೆಲ್ಲಲ್ಲೇಬೇಕು. ಹೀಗಾಗಿ ಈ ಟೆಸ್ಟ್ ಸರಣಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಭಾರತ ವಿರುದ್ಧ ಗೆಲುವು ಸುಲಭವಿಲ್ಲ ಎಂಬುದು ಆಸ್ಟ್ರೇಲಿಯಾದ ಅರಿವಿಗೂ ಬಂದಿದೆ. ಆದರೆ ಈ ಬಾರಿಯ ಕಥೆಯೇ ಬೇರೆಯಾಗಿದ್ದು, ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಭಾರತದ 8 ಯುವ ಆಟಗಾರರು ಕಣಕ್ಕೀಳಿಯುವ ಸಾಧ್ಯತೆಯಿದೆ. ಭಾರತದ ಈ ಯುವ ಆಟಗಾರರು ಆಸೀಸ್ಗೆ ಪ್ರಬಲ ಸವಾಲು ನೀಡಬಲ್ಲರು.

ಇದುವರೆಗೂ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಆಟಗಾರರಿಗೆ ಅಲ್ಲಿನ ಸ್ಥಿತಿಗತಿಗಳ ಅರಿವಿತ್ತು. ಆದರೆ ಈ ಬಾರಿ ಭಾರತಕ್ಕೆ ಅನುಭವದ ಕೊರತೆ ಕಾಡಿಲಿದೆಯೇ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿತ್ತು. ಆಸ್ಟ್ರೇಲಿಯಾದ ಬೌನ್ಸಿ ಪಿಚ್ಗಳು ಯಾವಾಗಲೂ ಭಾರತದ ಬ್ಯಾಟರ್ಗಳಿಗೆ ಸವಾಲಾಗಿದೆ. ಆದರೆ, ಈ 8 ಯುವ ಆಟಗಾರರ ಪೈಕಿ ಕೆಲವರು ಈಗಾಗಲೇ ಟೀಮ್ ಇಂಡಿಯಾ ಪರ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಸರ್ಫರಾಜ್ ಖಾನ್, ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾ ಪರ ಆಡಿ ಮಿಂಚಿದ್ದಾರೆ. ಆದರೆ ಇನ್ನೂ 3 ಆಟಗಾರರು ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವ ತವಕದಲ್ಲಿದ್ದಾರೆ. ಅಭಿಮನ್ಯು ಈಶ್ವರನ್, ಹರ್ಷಿತ್ ರಾಣಾ, ನಿತೀಶ್ಕುಮಾರ್ ರೆಡ್ಡಿ ಹೆಸರು ಈ ಪಟ್ಟಿಯಲ್ಲಿದೆ.
ಈ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಕಟ್ಟುವಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಿಸ್ಕ್ ತೆಗೆದುಕೊಂಡಿದೆ ಎಂಬುದು ಅಭಿಮಾನಿಗಳ ವಾದವಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಪೈಕಿ ಇಬ್ಬರಿಗೆ ಈ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಕೊನೆಯ ಟೆಸ್ಟ್ ಸರಣಿ ಎಂದು ಹೇಳಲಾಗುತ್ತಿದೆ. ಹೀಗಾಗಿ ಅನುಭವಿಗಳ ಉಪಸ್ಥಿತಿಯಲ್ಲಿ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದರೊಂದಿಗೆ ಟೀಮ್ ಇಂಡಿಯಾ ಯುವ ಆಟಗಾರರು ಆಸ್ಟ್ರೇಲಿಯಾದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ.
ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕಳೆದ ವರ್ಷ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ಮೂಲ ವಿಶ್ವ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದ್ದರು. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ನಂತಹ ತಂಡಗಳ ವಿರುದ್ಧ ಜೈಸ್ವಾಲ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಚಿತ್ತ ಕದ್ದಿದ್ದರು. ಅಲ್ಲದೆ, ಪೂಜಾರ ಮತ್ತು ರಹಾನೆ ಅವರಂತೆಯೇ ಬ್ಯಾಟಿಂಗ್ ಮಾಡಬಲ್ಲ ಸರ್ಫರಾಜ್ ಮತ್ತು ಧ್ರುವ್ ಜುರೆಲ್ ಮೇಲೂ ಭಾರೀ ನಿರೀಕ್ಷೆಯಿದೆ. ಆಸ್ಟ್ರೇಲಿಯಾ ಎ ವಿರುದ್ಧ ಜವಾಬ್ದಾರಿಯುವ ಬ್ಯಾಟಿಂಗ್ ಮಾಡುವ ಮೂಲಕ ಜುರೆಲ್ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಹೀಗಾಗಿ ನವೆಂಬರ್ 22 ರಂದು ಆರಂಭಿವಾಗಲಿರುವ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಜುರೆಲ್ ಸ್ಥಾನ ಪಡೆಯುವ ಸಾಧ್ಯತೆಯಿದೆ. ಆಸ್ಟ್ರೇಲಿಯಾಕ್ಕೆ ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ನಡುಕ ಹುಟ್ಟಿಸಲಿದ್ದಾರೆ.