ಕೋಲ್ಕತಾ, ಮಾರ್ಚ್ 8: ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತವು ಮೊದಲು ಬ್ಯಾಟ್ ಮಾಡಿದರೆ ಉತ್ತಮ ಎಂದು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಟೆಸ್ಟ್ ಪಂದ್ಯವನ್ನು ಭಾರತ ಗೆದ್ದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ''ಕಳೆದೆರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದವರೇ ಗೆಲವು ಸಾಧಿಸಿರುವುದು ಗಮನಾರ್ಹ. ಇಲ್ಲಿ ಟಾಸ್ ಎನ್ನುವುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಆಸೀಸ್ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ ಭಾರತ ಮೊದಲು ಟಾಸ್ ಗೆದ್ದರೆ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ'' ಎಂದು ತಿಳಿಸಿದರು.

ಅಲ್ಲದೆ, ಪುಣೆ ಹಾಗೂ ಬೆಂಗಳೂರು ಟೆಸ್ಟ್ ಪಂದ್ಯಗಳು ನಡೆದ ಪಿಚ್ ಗಳು ಸ್ಪಿನ್ನರ್ ಗಳಿಗೆ ಹೆಚ್ಚು ಸಹಕಾರಿಯಾಗಿದ್ದವು. ಮುಂದಿನ ಪಂದ್ಯಗಳು ನಡೆಯುವ ಪಿಚ್ ಗಳು ಅದೇ ರೀತಿಯವಾಗಿದ್ದರೆ, ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದು ಸೂಕ್ತ ಎಂಬುದು ಅವರ ಮಾತಿನ ಇಂಗಿತವಾಗಿತ್ತು.
ಪುಣೆಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು ಹೀನಾಯವಾಗಿ ಸೋಲಿಸಿತ್ತು. ಆದರೆ, 2ನೇ ಪಂದ್ಯವಾದ ಬೆಂಗಳೂರು ಟೆಸ್ಟ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಪಂದ್ಯದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.