ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಹೈದರಾಬಾದ್ ಸಿದ್ಧಗೊಂಡಿದೆ. 5 ಪಂದ್ಯಗಳ ಟೆಸ್ಟ್ ಸರಣಿಯು ಜನವರಿ 25 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡದ ಮುಖ್ಯ ಕೋಚ್ ಆಡುವ 11ರ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಮುಂಬರುವ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಆಡುವುದಿಲ್ಲ ಎಂದು ರಾಹುಲ್ ದ್ರಾವಿಡ್ ಮಂಗಳವಾರ ಖಚಿತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈಗ ತಂಡದಲ್ಲಿರುವ ಇಬ್ಬರು ಯುವ ಆಟಗಾರರಲ್ಲಿ ಒಬ್ಬರಿಗೆ ಅವಕಾಶ ಸಿಗುವುದು ಖಚಿತವಾಗಿದೆ.
ರಾಹುಲ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಈಗ ಆಡುವ ಹನ್ನೊಂದರ ಬಳಗದಲ್ಲಿ ಹೊಸ ವಿಕೆಟ್ ಕೀಪರ್ ಅವಕಾಶ ಪಡೆಯುವುದು ಖಚಿತವಾಗಿದೆ. ತಂಡದಲ್ಲಿ ಈ ಸ್ಥಾನಕ್ಕೆ ಇಬ್ಬರು ಸ್ಪರ್ಧಿಗಳಿದ್ದಾರೆ. ಈ ರೇಸ್ನಲ್ಲಿ ಯುವ ಆಟಗಾರರು ಧ್ರುವ್ ಜುರೆಲ್ ಮತ್ತು ಕೆಎಸ್ ಭರತ್ ಇದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ಈ ಇಬ್ಬರು ಆಟಗಾರರಲ್ಲಿ ಒಬ್ಬರಿಗೆ ಮಾತ್ರ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗುವುದು ಎಂದು ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.

22ರ ಹರೆಯದ ಧ್ರುವ್ ಜುರೆಲ್ ಇದುವರೆಗೆ ಟೀಂ ಇಂಡಿಯಾ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಧ್ರುವ್ ಉತ್ತರ ಪ್ರದೇಶ ಪರ ಅಂಡರ್-14 ಮತ್ತು ಅಂಡರ್-16 ವಯೋಮಿತಿಯ ಕ್ರಿಕೆಟ್ ಆಡಿದ್ದಾರೆ. ನಂತರ ಅವರು 2020 ರಲ್ಲಿ ವಿಶ್ವಕಪ್ಗಾಗಿ ಭಾರತದ ಅಂಡರ್-19 ತಂಡಕ್ಕೆ ಆಯ್ಕೆಯಾದರು. ಧ್ರುವ್ 2022 ರಲ್ಲಿ ವಿದರ್ಭ ವಿರುದ್ಧ ಉತ್ತರ ಪ್ರದೇಶದ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು ಮತ್ತು ಇಲ್ಲಿಯವರೆಗೆ ಅವರು 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 790 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಸೇರಿಸಿದ್ದಾರೆ. ಧ್ರುವ್ 10 ಲಿಸ್ಟ್-ಎ ಮತ್ತು 23 ಟಿ-20 ಪಂದ್ಯಗಳನ್ನೂ ಆಡಿದ್ದಾರೆ. ಯುವ ಆಟಗಾರ 2023 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಐಪಿಎಲ್ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು.
ಸದ್ಯಕ್ಕೆ ಕೆಎಸ್ ಭರತ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಕೆಎಸ್ ಭರತ್ ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಶತಕ ಬಾರಿಸಿದ್ದರು. ಇವರ ಭರ್ಜರಿ ಫಾರ್ಮ್ ನೋಡಿದರೆ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಖಚಿತ ಎಂದೇ ಅಂದು ಕೊಳ್ಳಲಾಗಿದೆ. ಕೆಎಸ್ ಭರತ್ ಇದುವರೆಗೆ ಟೀಂ ಇಂಡಿಯಾ ಪರ 5 ಟೆಸ್ಟ್ ಪಂದ್ಯಗಳ 8 ಇನ್ನಿಂಗ್ಸ್ ಗಳಲ್ಲಿ 129 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಭರತ್ ಕಳೆದ ವರ್ಷ ಜೂನ್ನಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಟೆಸ್ಟ್ ಆಡಿದ್ದರು. ಅವರು ಬಹಳ ಸಮಯದ ನಂತರ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.

ಭಾರತದಲ್ಲಿನ ಪಿಚ್ ಸ್ಪಿನ್ ಬೌಲರ್ಗಳಿಗೆ ನೆರವಾಗಲಿದ್ದು, ಈ ಪರಿಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಮಾಡುವುದು ಸುಲಭವಲ್ಲ. ಹೀಗಾಗಿ ನುರಿತ ವಿಕೆಟ್ ಕೀಪರ್ನನ್ನು ಸೇರಿಸಿಕೊಳ್ಳಲು ತಂಡ ಬಯಸಿದೆ.