ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐಪಿಎಲ್ ಟ್ರೋಫಿಯನ್ನು ಉಳಿಸಿಕೊಳ್ಳುವ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಆರ್ಸಿಬಿ ಸ್ಫೋಟಕ ಆಟವನ್ನು ಆಡಿ 2 ಅಂಕವನ್ನು ಕಲೆ ಹಾಕಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಪಂದ್ಯದಲ್ಲಿ ಆರ್ಸಿಬಿ ತಂಡದ ಸಂಘಟಿತ ಆಟ ಎದ್ದು ಕಂಡಿತು. ಆದರೆ ಪಂದ್ಯಕ್ಕೆ ತಿರುವು ನೀಡಿದ್ದು ಆ ಒಬ್ಬ ಬ್ಯಾಟರ್.
ಆರ್ಸಿಬಿ ಈ ಲೀಗ್ನಲ್ಲಿ 200ಕ್ಕೂ ಹೆಚ್ಚು ರನ್ಗಳನ್ನು ಎರಡನೇ ಬಾರಿ ಕಲೆ ಹಾಕಿತು. ಈ ಗೆಲುವು ನಿಶ್ಚಿತವಾಗಿ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿ ಗೊಳಿಸಿರುತ್ತದೆ. ಚೆನ್ನೈ ವಿರುದ್ಧ 43 ರನ್ಗಳ ಗೆಲುವು ಆರ್ಸಿಬಿ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆಯುವಂತೆ ಮಾಡಿದೆ. ರಾಜಸ್ಥಾನ ರಾಯಲ್ಸ್ (2.233) ರನ್ ರೇಟ್ಗಿಂತಲೂ ಆರ್ಸಿಬಿ ರನ್ ರೇಟ್ (2.501) ಹೆಚ್ಚಿದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ಆರ್ಸಿಬಿ ತಂಡ ಈ ಪಂದ್ಯವನ್ನು 43 ರನ್ಗಳಿಂದ ಗೆಲ್ಲಲು ಆ ಜೋಡಿ ಮಾಡಿದ ಕಮಾಲ್ ಬ್ಯಾಟಿಂಗ್ ಪ್ರಮುಖ ಕಾರಣ. ಒಂದು ಹಂತದಲ್ಲಿ ಆರ್ಸಿಬಿ 15 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಕಲೆ ಹಾಕಿತ್ತು. ಡೆತ್ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ 200 ಪ್ಲಸ್ ರನ್ ಕಲೆ ಹಾಕುವ ಲೆಕ್ಕಾಚಾರವನ್ನು ಎಲ್ಲರೂ ಹಾಕಿಕೊಂಡಿದ್ದರು. ಆದರೆ ಇಲ್ಲಿಂದ ಆರ್ಸಿಬಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಕೊನೆಯ ಐದು ಓವರ್ಗಳಲ್ಲಿ ಆರ್ಸಿಬಿ 97 ರನ್ ಕಲೆ ಹಾಕಿ ಪಂದ್ಯದ ಚಿತ್ರಣವನ್ನೇ ಬುಡಮೇಲು ಮಾಡಿತು.
ರಜತ್ ಪಾಟಿದಾರ್ ಹಾಗೂ ಟೀಮ್ ಡೇವಿಡ್ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಚೆನ್ನೈ ಬೌಲರ್ಗಳು ವಿಫಲರಾದರು. ಟೀಮ್ ಡೇವಿಡ್ ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿ ಅಬ್ಬರಿಸಿದರು. ಇವರು ಜೇಮಿ ಓವರ್ಟನ್ ಅವರ ಒಂದೇ ಓವರ್ನಲ್ಲಿ 30 ರನ್ ಸಿಡಿಸಿದರು. ರಜತ್ ಹಾಗೂ ಟೀಮ್ ಡೇವಿಡ್ ಜೋಡಿ 36 ಎಸೆತಗಳಲ್ಲಿ 99 ರನ್ ಜೊತೆಯಾಟದ ಕಾಣಿಕೆ ನೀಡಿತು.

ಟೀಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್ ಸಿಡಿಸಿ ಅಜೇಯ 70 ರನ್ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 280 ಆಗಿತ್ತು. ಆರ್ಸಿಬಿ ತಂಡ ಅಂತಿಮವಾಗಿ 20 ಓವರ್ಗಳಲ್ಲಿ 3 ವಿಕೆಟ್ಗೆ 250 ರನ್ ಸೇರಿಸಿತು. ಇದೇ ಪಂದ್ಯಕ್ಕೆ ತಿರುವು ನೀಡಿದ ಅಂಶವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ಗಳಲ್ಲಿ 207 ರನ್ ಸೇರಿಸಿ ಸೋಲು ಕಂಡಿತು. ಚೆನ್ನೈ ಪರ ಸರ್ಫರಾಜ್ ಖಾನ್ ಅರ್ಧಶತಕ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.