
ನವದೆಹಲಿ: ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಮೈದಾನದಿಂದ ಹೊರಗೂ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸರಂದೀಪ್ ಸಿಂಗ್ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ತಂಡದ ಮಾಜಿ ಆಯ್ಕೆಗಾರರಾಗಿದ್ದ ಸರಂದೀಪ್, ಕೊಹ್ಲಿ ಒಬ್ಬ ಉತ್ತಮ ಕೇಳುಗನಾಗಿದ್ದು, ಅವರ ನಡೆ ಸಾರ್ವಜನಿಕರ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಸ್ಪೋರ್ಟ್ಸ್ಕೀಡಾದೊಂದಿಗೆ ಮಾತನಾಡಿದ ಸಿಂಗ್, ವಿರಾಟ್ ಮತ್ತು ಅವರ ಪತ್ನಿ, ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ ಅವರ ಮುಂಬೈ ಮನೆಯಲ್ಲಿ ಸೇವಕರೇ ಇಲ್ಲ ಎಂಬ ಸಂಗತಿ ಬಹಿರಂಗಪಡಿಸಿದರು. 'ಕೊಹ್ಲಿ ಮನೆಯಲ್ಲಿ ಸೇವಕರು ಇಲ್ಲ. ಕೊಹ್ಲಿ ಮತ್ತು ಅವರ ಹೆಂಡತಿ ಎಲ್ಲರಿಗೂ ಆಹಾರವನ್ನು ನೀಡುತ್ತಾರೆ,' ಎಂದಿದ್ದಾರೆ.
ಸಂದರ್ಶನದಲ್ಲಿ ಮಾತು ಮುಂದುವರೆಸಿದ ಸರಂದೀಪ್, 'ಕೊಹ್ಲಿಯ ಇಂಥ ಸರಳತೆಗಿಂತ ಬೇರೇನು ಬೇಕು ಹೇಳಿ? ಕೊಹ್ಲಿ ನಿಮ್ಮ ಜೊತೆ ಹರಟುತ್ತಾರೆ, ನಿಮ್ಮೊಂದಿಗೆ ಬೇಕಾದರೆ ಊಟಕ್ಕೆ ಬರುತ್ತಾರೆ, ಕೊಹ್ಲಿ ಯಾವಾಗ ಬೇಕಾದರೆ ನಿಮ್ಮ ಜೊತೆಗಿರುತ್ತಾರೆ. ಇದೇ ಕಾರಣಕ್ಕೆ ಉಳಿದ ಎಲ್ಲಾ ಆಟಗಾರರು ಕೊಹ್ಲಿಯನ್ನು ತುಂಬಾ ಗೌರವಿಸುತ್ತಾರೆ. ಆತನೊಬ್ಬ ತುಂಬಾ ಸರಳ, ವಿನಯವಂತ ಮತ್ತು ಗಟ್ಟಿ ಮನಸ್ಸಿರುವ ವ್ಯಕ್ತಿ' ಎಂದಿದ್ದಾರೆ.
ಕೊಹ್ಲಿ ಮೈದಾನದಲ್ಲಿ ಯಾಕೆ ಅಗ್ರೆಸಿವ್ ರೀತೀಲಿ ಇರುತ್ತಾರೆಂದರೆ; ಅವರು ತಂಡದ ನಾಯಕ. ಅವರು ಒತ್ತಡದ ಸಂದರ್ಭಗಳನ್ನು ನಿಭಾಯಿಸುತ್ತಿರುತ್ತಾರೆ. ಅಂಥ ಇಕ್ಕಟ್ಟಿನ ಸಮಯದಲ್ಲೂ ಕೊಹ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸರಂದೀಪ್ ವಿವರಿಸಿದ್ದಾರೆ. ಆಫ್ ಸ್ಪಿನ್ನರ್ ಆಗಿದ್ದ ಸರಂದೀಪ್ ಭಾರತ ಪರ 3 ಟೆಸ್ಟ್, 5 ಏಕದಿನ ಪಂದ್ಯಗಳಲ್ಲಿ ಆಡಿದ್ದರು.