
ಟೀಮ್ ಇಂಡಿಯಾದಲ್ಲಿ ಬ್ಯಾಟಿಂಗ್ ಲೈನ್ಅಪ್ ತುಂಬಾ ಬಲಿಷ್ಠವಾಗಿದೆ. ಆದರೆ ಕಳೆದ ಕೆಲ ವರ್ಷಗಳಲ್ಲಿ ನಾಲ್ಕನೇ ಕ್ರಮಾಂಕದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿತ್ತು. ಆದರೆ ಅದಕ್ಕೂ ಈಗ ಅದ್ಭುತ ಪ್ರದರ್ಶನದ ಮೂಲಕ ಶ್ರೇಯಸ್ ಅಯ್ಯರ್ ಉತ್ತರವನ್ನು ನೀಡುತ್ತಿದ್ದಾರೆ. ಈ ಮಧ್ಯೆ ಮುಂದೆ ಈ ರೀತಿಯ ಪ್ರಶ್ನೆ ಬರಬಾರದು ಎಂದು ಅವರು ಅಪೇಕ್ಷಿಸಿದ್ದಾರೆ.
ಕಳೆದ ವಿಶ್ವಕಪ್ಗೂ ಮುನ್ನ ನಾಲ್ಕನೇ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಅವರನ್ನು ಆಡಿಸುವ ಪ್ರಯತ್ನಗಳಾಗಿತ್ತು. ಆದರೆ ಅದರಲ್ಲಿ ವಿಫಲರಾದ ನಂತರ ಆ ಸ್ಥಾನಕ್ಕೆ ವಿಶ್ವಕಪ್ ಟೂರ್ನಿಗೆ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದು ಕ್ರಿಕೆಟ್ ಅಭಿಮಾನಿಗಳ ಮತ್ತು ಕ್ರಿಕೆಟ್ ಪಂಡಿತರ ವಲಯದಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿತ್ತು.
ಆದರೆ ಇದರಲ್ಲಿ ಶಂಕರ್ ವಿಫಲರಾದರು. ವಿಶ್ವಕಪ್ ಸೆಮಿ ಫೈನಲ್ನಲ್ಲಿ ಟಾಪ್ ಬ್ಯಾಟ್ಮನ್ಗಳು ವಿಫಲರಾದ ಸಂದರ್ಭದಲ್ಲೂ ವಿಜಯ್ ಶಂಕರ್ ತಂಡಕ್ಕೆ ನೆರವಾಗಲು ಸಾಧ್ಯವಾಗಲಿಲ್ಲ. ಸೆಮಿ ಫೈನಲ್ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡದ ವಿರುದ್ಧ ಸೋತು ಆಘಾತಕಾರಿಯಾಗಿ ಹೊರಬಿದ್ದಿತ್ತು. ಬಳಿಕ ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಲು ಆರಂಭಿಸಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ಅಯ್ಯರ್ ತಂಡದ ಇನ್ಸ್ಟಾಗ್ರಾಮ್ ಲೈವ್ ಸೆಶನ್ನಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅಯ್ಯರ್ ತಾನು ನಾಲ್ಕನೇ ಕ್ರಮಾಂಕದಲ್ಲಿ ಸಾಕಷ್ಟು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದೇನೆ. ಹೀಗಾಗಿ ಏಕದಿನ ಮಾದರಿಯಲ್ಲಿ ಇನ್ನು ಮುಂದೆ ನಾಲ್ಕನೇ ಕ್ರಮಾಂಕದ ಕುರಿತಾಗಿ ಪ್ರಶ್ನೆಯನ್ನು ಕೇಳಲು ನಾನು ಬಯಸುವುದಿಲ್ಲ ಎಂದಿದ್ದಾರೆ.
ನಾನು ಈಗಾಗಲೇ ಹಲವಾರು ಸಂದರ್ಶನಗಳಲ್ಲಿ ಹೇಳಿದ್ದೇನೆ. ಇನ್ನು ಮುಂದೆ ನಾಲ್ಕನೇ ಕ್ರಮಾಂಕದ ಬಗ್ಗೆ ಪ್ರಶ್ನೆಗಳನ್ನು ಕೇಳಬಾರದು ಎಂದು. ಯಾರಾದರೂ ಒಂದು ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದರೆ ವರ್ಷಗಳ ಕಾಲ ಉತ್ತಮ ಪ್ರದರ್ಶನವನ್ನು ನಿಡುತ್ತಿದ್ದರೆ ಆ ಸ್ಥಾನವನ್ನು ಆ ಭದ್ರಪಡಿಸಿಕೊಂಡಿದ್ದಾನೆ ಎಂದು ಅರ್ಥ. ನಾಲ್ಕನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿರುವುದಕ್ಕೆ ನಾನು ಸಂತಸಗೊಂಡಿದ್ದೇನೆ ಎಂದು ಐಯ್ಯರ್ ಹೇಳಿದ್ದಾರೆ.