ಕೋಲ್ಕೊತಾ, ಮೇ 06: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯುದ್ದಕ್ಕೂ ಕೋಲ್ಕೊತಾ ನೈಟ್ ರೈಡರ್ಸ್ ತಂಡದಲ್ಲಿಆತಂಕ ಮನೆ ಮಾಡಿತ್ತು ಎಂದು ಕೆಕೆಆರ್ ತಂಡದ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್ ಹೇಳಿದ್ದಾರೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ ಸನಿಹ ಭಾರತ ತಂಡಕ್ಕೆ ಎದುರಾದ ಶಾಕ್!
ಪ್ಲೇ ಅಫ್ಸ್ ತಲುಪಲು ನೈಟ್ ರೈಡರ್ಸ್ ತಂಡಕ್ಕೆ ಮುಂಬಯಿ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಕೇವಲ ಗೆಲುವು ದಾಖಲಿಸಿದರೆ ಸಾಕಿತ್ತು. ಆದರೆ, ನಿರಾಶಾದಾಯಕ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ಸ್ ಕೆಕೆಆರ್ 9 ವಿಕೆಟ್ಗಳ ಹೀನಾಯ ಸೋಲುಂಡು ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ತನ್ನ ಅಭಿಯಾನ ಅಂತ್ಯಗೊಳಿಸಿತು.
ಅಂದಹಾಗೆ ಈ ಬಾರಿಯ ಐಪಿಎಲ್ನಲ್ಲಿ ಕೆಕೆಆರ್ ಸ್ಫೋಟಕ ಆರಂಭವನ್ನೇ ಪಡೆದಿತ್ತು. ಆರಂಭದಲ್ಲಿ ಆಡಿದ ಐದು ಪಂದ್ಯಗಳಲ್ಲಿ 3ರಲ್ಲಿ ಭರ್ಜರಿ ಜಯ ದಾಖಲಿಸಿ ಪ್ಲೇ ಆಫ್ಸ್ ಕಡೆಗೆ ದಾಪುಗಾಲಿಟ್ಟಿತ್ತು. ಆದರೆ, ಯಾರೂ ಅಂದಾಜಿಸಲೂ ಸಾಧ್ಯವಿರದ ರೀತಿಯಲ್ಲಿ ರೈಡರ್ಸ್ ತಂಡ ಸತತ 6 ಪಂದ್ಯಗಳಲ್ಲಿ ಮುಗ್ಗರಿಸಿ ಪ್ಲೇಆಪ್ಸ್ ತಲುಪಲು ಪರದಾಟ ನಡೆಸುವ ಸ್ಥಿತಿಗೆ ಬಂದು ನಿಂತಿತು.
ರಾಹುಲ್ ಬ್ಯಾಟಿಂಗ್ ಬಗ್ಗೆ ಕ್ರಿಸ್ ಗೇಲ್ ಈ ರೀತಿ ಹೇಳಿದ್ದಾರೆ
ತಂಡದ ಈ ಸೋಲಿನ ಸರಮಾಲೆ ವೇಳೆ ರೈಡರ್ಸ್ನ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್, ತಮ್ಮ ಬ್ಯಾಟಿಂಗ್ ಕ್ರಮಾಂಕ ಮತ್ತು ತಂಡದಲ್ಲಿನ ನಾಯಕತ್ವದ ಪ್ರಭಾವ ಕುರಿತಾಗಿ ಮಾಧ್ಯಮ ಎದುರು ಮಾತನಾಡಿದ್ದರು. ಇದು ತಂಡದಲ್ಲಿ ಇರುವ ಗೊಂದಲಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಇನ್ನು ಮುಂಬಯಿ ವಿರುದ್ಧದ ಅಂತಿಮ ಪಂದ್ಯದ ಬಳಿಕ ಮಾತನಾಡಿದ ಸಹಾಯಕ ಕೋಚ್ ಕ್ಯಾಟಿಚ್, ಸತತ ಆರು ಪಂದ್ಯಗಳನ್ನು ಸೋತ ಬಳಿಕ ತಂಡದಲ್ಲಿನ ವಾತಾವರಣವೇ ಬದಲಾಗಿತ್ತು ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ಗೆ ಎದುರಾಯ್ತು ಅಚ್ಚರಿ!
"ತಂಡದಲ್ಲಿ ಆತಂಕ ಮನೆ ಮಾಡಿತ್ತು ಎಂಬ ಸತ್ಯದಿಂದ ದೂರವಾಗಲು ಸಾಧ್ಯವಿಲ್ಲ. ಸತತ ಆರು ಪಂದ್ಯಗಳನ್ನು ಸೋತ ಬಳಿಕ ತಂಡದ ವಾತಾವರಣ ಬದಲಾಯಿತು. ಇದನ್ನು ಒಂದು ತಂಡವಾಗಿ ಸರಿಪಡಿಸಿಕೊಳ್ಳಬೇಕು. ಐಪಿಎಲ್ ವೈವಿದ್ಯಮಯ ಟೂರ್ನಿ. ಇಲ್ಲಿ ಎಲ್ಲವೂ ಕ್ಷಣಮಾತ್ರದಲ್ಲಿ ಬದಲಾಗುತ್ತದೆ. ಹೀಗಿರುವಾಗ ಒಂದು ತಂಡವಾಗಿ ಒಗ್ಗಟ್ಟಿನಿಂದ ಯಾವುದೇ ಗೊಂದಲಗಳನ್ನು ಸರಿಪಡಿಸಿಕೊಳ್ಳಬೇಕು,'' ಎಂದು ಕ್ಯಾಟಿಚ್ ಹೇಳಿದರು.