ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಸಿದ್ಧತೆಯನ್ನು ನಡೆಸುತ್ತಿದೆ. ಈಗಾಗಲೇ ಐಸಿಸಿ ವೇಳಾಪಟ್ಟಿಯನ್ನು ಘೋಷಣೆ ಮಾಡುವ ಮೂಲಕ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು ಎಲ್ಲಾ ತಂಡಗಳು ಕೂಡ ಭರದ ಪೂರ್ವಸಿದ್ಧತೆಯನ್ನು ನಡೆಸುತ್ತಿದೆ. ಆದರೆ ಈ ಬಾರಿಯ ವಿಶ್ವಕಪ್ ಭಾರತದಲ್ಲಿಯೇ ಆಯೋಜನೆಯಾಗುತ್ತಿದ್ದರೂ ತಂಡಕ್ಕೆ ಎದುರಾಗಿರುವ ಗಾಯದ ಸಮಸ್ಯೆ ಬಹಳ ಕಾಡುತ್ತಿದೆ.
ಟೀಮ್ ಇಂಡಿಯಾದ ಮೊದಲ ಆಯ್ಕೆಯ ಐದರಿಂದ ಆರು ಆಟಗಾರರು ಗಾಯಕ್ಕೆ ತುತ್ತಾಗಿದ್ದು ಸದ್ಯಕ್ಕೆ ಆಡಲು ಅಸಮರ್ಥರಾಗಿದ್ದಾರೆ. ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಇನ್ನೂ ಮೂರು ತಿಂಗಳುಗಳ ಸಮಯ ಇರುವ ಕಾರಣ ಕೆಲ ಆಟಗಾರರು ಆ ವೇಳೆಗೆ ಚೇತರಿಕೆ ಕಾಣುವ ಭರವಸೆ ಮೂಡಿಸಿದ್ದಾರೆ. ಹಾಗಿದ್ದರೂ ಕೆಲ ಆಟಗಾರರು ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿಯೂ ಆಡಲು ಫಿಟ್ ಆಗುವುದು ಅನುಮಾನವಾಗಿದೆ. ಸದ್ಯ ಗಾಯಾಳುವಾಗಿದ್ದು ವಿಶ್ವಕಪ್ ಟೂರ್ನಿಯನ್ನು ಕೂಡ ತಪ್ಪಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿರುವ ಮೂವರು ಕ್ರಿಕೆಟಿಗರ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಕಳೆದ ವರ್ಷಾಂತ್ಯದಲ್ಲಿ ಭೀಕರ ಅಪಘಾತಕ್ಕೆ ಒಳಗಾಗಿದ್ದ ರಿಷಭ್ ಪಂತ್ ಸದ್ಯ ಅದ್ಭುತವಾಗಿ ಚೇತರಿಕೆ ಕಾಣುತ್ತಿದ್ದು ಎನ್ಸಿಎನಲ್ಲಿ ರಿಹ್ಯಾಬ್ ನಡೆಸುತ್ತಿದ್ದಾರೆ. ಪಂತ್ ಬಹುತೇಕ ಚೇತರಿಕೆ ಕಂಡಿದ್ದು ಏಕದಿನ ವಿಶ್ವಕಪ್ ವೇಳೆಗೆ ಅವರು ಆಡಲು ಸಮರ್ಥವಾಗುವ ನಿಟ್ಟಿನಲ್ಲಿ ಬಿಸಿಸಿಐ ತನ್ನ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೆಲ ವರದಿಗಳು ಹೇಳುತ್ತಿದೆ. ಆದರೆ ಪಂತ್ ಇತ್ತೀಚೆಗಷ್ಟೇ ವಾಕರ್ ಸಹಾಯವಿಲ್ಲದೆ ನಡೆಯಲು ಆರಂಭಿಸಿದ್ದು ಅವರುಸ ಂಪೂರ್ಣವಾಗಿ ಫಿಟ್ ಆಗಲು ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುವ ಸಾಧ್ಯತೆಯಿದೆ. ಎನ್ಸಿಎನಲ್ಲಿ ಪಂತ್ ಫಿಟ್ನೆಸ್ ಗಳಿಸುವಲ್ಲಿ ಕಾರ್ಯನಿರತವಾಗಿದ್ದು ಮೆಗಾ ಟೂರ್ನಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಬಹಳ ಕಡಿಮೆಯಿದೆ.
ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ಕೂಡ ಸದ್ಯ ಗಾಯಗೊಂಡಿರುವ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರು. ಈ ಆಟಗಾರ ಕೂಡ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತ. ಈ ಪ್ರತಿಭಾವಂತ ವೇಗಿ ಫಿಟ್ ಆಗಿದ್ದರೆ ಭಾರತೀಯ ಏಕದಿನ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುತ್ತಿದ್ದರಿ. ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಸಿದ್ಧ್ ಕೃಷ್ಣ ಚೇತರಿಕೆಯ ವಿಚಾರವಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಈ ಕನ್ನಡಿದ ಆಡಲು ಸಮರ್ಥವಾಗಲು ಇನ್ನೂ ಕೆಲ ತಿಂಗಳುಗಳು ಬೇಕಾಗಬಹುದು ಎನ್ನಲಾಗಿದೆ.
ಬೆನ್ನು ನೋವಿಗೆ ತುತ್ತಾಗಿರುವ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ವೇಳೆಗೆ ಫಿಟ್ ಆಗಲು 2023 ಐಪಿಎಲ್ ಟೂರ್ನಿಯಿಂದ ಹೊರಗುಳಿದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಐಯ್ಯರ್ 2023ರ ವಿಶ್ವಕಪ್ ವೇಳೆಗೆ ಫಿಟ್ ಆಗಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಶ್ರೇಯಸ್ ಐಯ್ಯರ್ ಚೇತರಿಕೆ ಬಗ್ಗೆ ಇತ್ತೀಚೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಐಯ್ಯರ್ ಈ ಹಿಂದೆಯೂ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಇನ್ನು ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬೂಮ್ರಾ ಏಷ್ಯಾಕಪ್ಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈವರೆಗೆ ಶ್ರೇಯಸ್ ಅಯ್ಯರ್ ಬಗ್ಗೆ ಯಾವುದೇ ಸುದ್ದಿ ಇಲ್ಲ. ಹೀಗಾಗಿ ಐಯ್ಯರ್ ವಿಶ್ವಕಪ್ಗೂ ಲಭ್ಯವಾಗುವುದು ಬಹುತೇಕ ನಿಶ್ಚಿತ.