ಈ ಕ್ರಿಕೆಟಿಗರ ಪಾಲಿಗೆ ವಿಲನ್ ಆದ್ರಾ ವಿರಾಟ್?: ಕನ್ನಡಿಗನೂ ಸೇರಿ 5 ಆಟಗಾರರ ಭವಿಷ್ಯಕ್ಕೆ ಕೊಹ್ಲಿ ಅಡ್ಡಿಯಾಗಿದ್ದು ಹೀಗೆ!

ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. ವೈಟ್ಬಾಲ್ ಮಾದರಿಯಲ್ಲಿಯೂ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಸಾಕಷ್ಟು ಪ್ರಮಾಣದಲ್ಲಿ ದ್ವಿಪಕ್ಷೀಯ ಸರಣಿಗಳನ್ನು ಗೆದ್ದುಕೊಂಡಿದೆ. ಆದರೆ ಭಾರತ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಯಾವುದೇ ಐಸಿಸಿ ಟೂರ್ನಿಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅದೇನೇ ಇದ್ದರೂ ವಿರಾಟ್ ಕೊಹ್ಲಿ ಭಾರತದ ಸ್ಪೂರ್ತಿದಾಯಕ ಹಾಗೂ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂಬುದನ್ನು ಅಂಕಿಅಂಶಗಳೇ ಹೇಳುತ್ತವೆ.
ಹಾಗಿದ್ದರೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕೆಲ ಪ್ರತಿಭಾವಂತ ಆಟಗಾರರಿಗೆ ನ್ಯಾಯ ದೊರೆತಿಲ್ಲ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಇನ್ನು ತಾಂತ್ರಿಕವಾಗಿ ಹಾಗೂ ತಂಡದ ಆಯ್ಕೆಯ ವಿಚಾರವಾಗಿ ವಿರಾಟ್ ಕೊಹ್ಲಿ ಅತ್ಯುತ್ತಮ ನಿರ್ಧಾರ ತೆಗೆದುಕೊಳ್ಳಲು ವಿಫಲವಾಗುತ್ತಿದ್ದರು. ಇನ್ನು ಯುವ ಹಾಗೂ ಅನನುಭವಿ ಆಟಗಾರರ ಮೇಲೆ ಹೆಚ್ಚು ಅಪನಂಬಿಕೆ ಹೊಂದಿದ್ದ ಕಾರಣಕ್ಕೆ ಕೊಹ್ಲಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು. ಈ ಆಟಗಾರರು ತಂಡದಲ್ಲಿ ಭದ್ರವಾಗಿ ನೆಲೆಯೂರಲು ಬೇಕಾದಷ್ಟು ಅವಕಾಶಗಳನ್ನು ಕೊಹ್ಲಿ ನೀಡಲಿಲ್ಲ ಎಂಬ ಅಪಾದನೆ ಕೂಡ ಇದೆ.
ವಿರಾಟ್ ಕೊಹ್ಲಿ ನಾಯಕನಾಗಿದ್ದ ಸಂದರ್ಭದಲ್ಲಿ ಹೆಚ್ಚಾಗಿ ಆಡುವ ಬಳಗದಲ್ಲಿ ಸ್ಥಾನ ಪಡೆಯದ ಕೆಲ ಪ್ರತಿಭಾವಂತ ಆಟಗಾರರ ಬಗೆಗಿನ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ
ನಂಬಲು ಕಷ್ಟವಾಗುವ ಸಂಗತಿಯೆಂದರೆ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಅಂತಿಮ ಏಕದಿನ ಪಂದ್ಯದಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆದುಕೊಂಡಿದ್ದರು ಕೂಡ ಮತ್ತೊಮ್ಮೆ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಅವರಿಗೆ ದೊರೆಯಲೇ ಇಲ್ಲ. ಹೌದು, 2016ರಲ್ಲಿ ಎಂ ಎಸ್ ಧೋನಿ ನಾಯಕತ್ವದಲ್ಲಿ ಆಡಿದ ಏಕದಿನ ಸರಣಿಯ ನಿರ್ಣಾಯಕ ಐದನೇ ಪಂದ್ಯದಲ್ಲಿ ಅಮಿತ್ ಮಿಶ್ರಾ ಐದು ವಿಕೆಟ್ಗಳ ಗೊಂಚಲು ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಅಲ್ಲದೆ ಸರಣಿಯಲ್ಲಿ ಒಟ್ಟು 15 ವಿಕೆಟ್ ಸಂಪಾದಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಆದರೆ 2017ರಲ್ಲಿ ಕೊಹ್ಲಿ ಸೀಮಿತ ಓವರ್ಗಳ ನಾಯಕತ್ವ ವಹಿಸಿಕೊಂಡ ಬಳಿಕ ಅಚ್ಚರಿ ಎಂಬಂತೆ ಅಮಿತ್ ಮಿಶ್ರಾ ಅವರನ್ನು ಬದಿಗೆ ತಳ್ಳಲಾಯಿತು. ಅವರಿಗೆ ಮತ್ತೆಂದೂ ಏಕದಿನ ಪಂದ್ಯವಾಡುವ ಅವಕಾಶವೇ ದೊರೆಯಲಿಲ್ಲ.ಐಪಿಎಲ್ನಲ್ಲಿಯೂ ಸಾಕಷ್ಟು ಉತ್ತಮ ಪ್ರದರ್ಶನ ನಿಡಿದರೂ ಅಮಿತ್ ಮಿಶ್ರಾಗೆ ಅವಕಾಶ ದೊರೆಯಲಿಲ್ಲ. ಇದು ವಿರಾಟ್ ಕೊಹ್ಲಿ ನಾಯಕತ್ವದ ಅತ್ಯಂತ ಅನ್ಯಾಯದ ನಿರ್ಧಾರಗಳಲ್ಲಿ ಒಂದಾಗಿದೆ.

ಕನ್ನಡಿಗ ಕರುಣ್ ನಾಯರ್
ಭಾರತದ ಪರವಾಗಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿ ಶತಕ ಸಿಡಿಸಿದ ಕೇವಲ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಕನ್ನಡಿಗ ಕರುಣ್ ನಾಯರ್ ಅವರದ್ದು. ವಿಶ್ವದಾಖಲೆಯ ಪ್ರದರ್ಶನ ನಿಡಿದ್ದರೂ ಕರುಣ್ ನಾಯರ್ ವಿಚಾರವಾಗಿ ಕೊಹ್ಲಿ ನ್ಯಾಯಯುತವಾಗಿ ನಡೆದುಕೊಂಡಂತೆ ಕಾಣಿಸುತ್ತಿಲ್ಲ. ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ಕ್ರಿಕೆಟ್ನ ಕೇವಲ ಮೂರನೇ ಪಂದ್ಯದಲ್ಲಿಯೇ ಕರುಣ್ ನಾಯರ್ 2016ರಲ್ಲಿ ಚೆನ್ನೈನಲ್ಲಿ ತ್ರಿಶತಕ ಸಿಡಿಸಿದ್ದರು. ಆದರೆ ಅದಾದ ಕೇವಲ ನಾಲ್ಕನೇ ಇನ್ನಿಂಗ್ಸ್ನ ಬಳಿಕ ಕರುಣ್ ನಾಯರ್ ಟೆಸ್ಟ್ ತಂಡದಿಂದ ಹೊರಬಿದ್ದರು. ಮತ್ತೆಂದೂ ಅವರಿಗೆ ಅವಕಾಶ ದೊರೆತಿಲ್ಲ.

ಯುವ ಆಟಗಾರ ಪೃಥ್ವಿ ಶಾ
ಯುವ ಆಟಗಾರ ಪೃಥ್ವಿ ಶಾ 2018ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಶತಕ ಸಿಡಿಸಿ ಮಿಂಚಿದ್ದರು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅರ್ಧ ಶತಕ ಸಿಡಿಸಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ ನಿರ್ಭೀತ ಆಟವನ್ನು ಪ್ರದರ್ಶಿಸುವ ಮೂಲಕ ಪೃಥ್ವಿ ಶಾ ಮಿಂಚಿದ್ದರು. ಅದ್ಭುತ ಪ್ರತಿಭೆಯಿದ್ದರೂ ಪೃಥ್ವಿ ಶಾಗೆ ನಾಯಕ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಅವರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಆಸ್ಟ್ರೇಲಿಯಾ ಪ್ರವಾಸದ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಮತ್ತೆ ಈ ಯುವ ಆಟಗಾರನಿಗೆ ಭಾರತ ತಂಡದಲ್ಲಿ ಅವಕಾಶ ದೊರೆತಿಲ್ಲ. ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನಿಡುತ್ತಿದ್ದರೂ ಪೃಥ್ವಿ ಶಾಗೆ ಸದ್ಯ ಭಾರತ ತಂಡದಲ್ಲಿ ಸ್ಥಾನವಿಲ್ಲದಂತಾಗಿದೆ.

ಕರ್ಣ್ ಶರ್ಮಾ
ಕರ್ಣ್ ಶರ್ಮಾ ಮೇಲೆ ಸ್ವತಃ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಭಾರೀ ನಂಬಿಕೆಯಿಟ್ಟು ದೊಡ್ಡ ಮಟ್ಟದ ಜವಾಬ್ಧಾರಿಯನ್ನು ಹೊರಿಸಿದ್ದರು. 2014ರಲ್ಲಿ ಅಡಿಲೇಡ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರನ್ನು ಹೊರಗಿಟ್ಟು ಕರ್ಣ್ ಶರ್ಮಾಗೆ ಅವಕಾಶ ನೀಡಲಾಗಿತ್ತು. ಆದರೆ ಈ ಮೊದಲ ಪಂದ್ಯದಲ್ಲಿಯೇ ಕರ್ಣ್ ಶರ್ಮಾ ಇಂಥಾ ದೊಡ್ಡ ಜವಾಬ್ಧಾರಿ ಹೋರಲು ಸಿದ್ಧವಾಗಿರಲಿಲ್ಲ. ಹೀಗಾಗಿ ಆ ಪಂದ್ಯದಲ್ಲಿ 4/238 ರನ್ಗಳನ್ನು ನೀಡುವ ಮೂಲಕ ಹಿನ್ನಡೆಗೆ ಕಾರಣವಾಗಿದ್ದರು. ಅದಾದ ಬಳಿಕ ಕರ್ಣ್ ಯಾವುದೇ ಮಾದರಿಯಲ್ಲಿಯೂ ಭಾರತ ತಂಡಕ್ಕೆ ಆಯ್ಕೆಯಾಗಲೇ ಇಲ್ಲ. ಈ ಹಂತದಲ್ಲಿ ಒಂದಷ್ಟು ಬೆಂಬಲ ದೊರೆತಿದ್ದರೆ ತನ್ನ ಸಾಮರ್ಥ್ಯವನ್ನು ತೋರಿಸುವ ಅವಕಾಶ ಸಿಗುತ್ತಿತ್ತು. ಆದರೆ ಅದು ಭಾರತೀಯ ತಂಡದ ನಾಯಕನಿಂದ ಆಗಲೇ ಇಲ್ಲ.

ವೇಗದ ಬೌಲರ್ ಮೋಹಿತ್ ಶರ್ಮಾ
ವೇಗಿ ಮೋಹಿತ್ ಶರ್ಮಾ 34 ವೈಟ್ಬಾಲ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 32 ಪಂದ್ಯಗಲೂ ಎಂಎಸ್ ಧೋನಿ ನಾಯಕತ್ವದಲ್ಲಿ ಮೋಹಿತ್ ಶರ್ಮಾ ಆಡಿದ್ದಾರೆ. 2015ರ ವಿಶ್ವಕಪ್ನ ತಂಡದಲ್ಲಿಯೂ ಭಾರತ ತಂಡದ ಪ್ರಮುಖ ಆಟಗಾರನಾಗಿ ಕಣಕ್ಕಿಳಿದಿದ್ದರು ಮೋಹಿತ್. ಈ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಅಜೇಯವಾಗುಳಿದಿತ್ತು. ಆದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಮೋಹಿತ್ ಶರ್ಮಾ ಅವಕಾಶ ಪಡೆದುಕೊಂಡರು. ಅದು ಕೂಡ ಜಿಂಬಾಬ್ವೆ ತಂಡದ ವಿರುದ್ಧ. ಅದಾದ ಬಳಿಕ ಮೋಹಿತ್ ಶರ್ಮಾ ದೇಶೀಯ ಕ್ರಿಕೆಟ್ನಲ್ಲಿ ಹಾಗೂ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ವಿರಾಟ್ ಕೊಹ್ಲಿ ಮೋಹಿತ್ ಶರ್ಮಾ ಮೇಲೆ ನಂಬಿಕೆಯನ್ನು ತೋರಿಸಲೇ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications