
ಶಿಮ್ರಾನ್ ಹೇಟ್ಮೇರ್ಗೆ ವಿಮಾನವೂ ತಪ್ಪಿತು ವಿಶ್ವಕಪ್ಪೂ ತಪ್ಪಿತು!
ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಆಟಗಾರ ಶಿಮ್ರಾನ್ ಹೇಟ್ಮೇಯರ್ ಸರಿಯಾದ ಸಮಯದಲ್ಲಿ ವಿಮಾನವನ್ನು ಹಿಡಿಯಲು ಸಾಧ್ಯವಾಗದೆ ಈ ಬಾರಿಯ ವಿಶ್ವಕಪ್ನಿಂದ ವಂಚಿತವಾಗಿದ್ದಾರೆ. ಕೌಟುಂಬಿಕ ಕಾರಣಗಳನ್ನು ನೀಡಿದ್ದ ಕಾರಣದಿಂದಾಗಿ ಶಮ್ರಾನ್ ಹೇಟ್ಮೇಯರ್ಗೆ ಪ್ರತ್ಯೇಕವಾಗಿ ಬದಲಿ ವಿಮಾನದ ಮೂಲಕ ಆಸ್ಟ್ರೇಲಿಯಾಗೆ ಪ್ರಯಾಣಿಸುವ ವ್ಯವಸ್ಥೆಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಾಡಿತ್ತು. ಆದರೆ ಹೇಟ್ಮೇಯರ್ ಆ ವಿಮಾನವನ್ನು ಕೂಡ ಸೂಕ್ತ ಸಮಯಕ್ಕೆ ತಲುಪದ ಕಾರಣ ಆಸ್ಟ್ರೇಲಿಯಾಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಂಡಿಸ್ ಮಂಡಳಿ ಕಠಿಣ ನಿಲುವನ್ನು ತೆಗೆದುಕೊಂಡಿದ್ದು ವಿಶ್ವಕಪ್ ಸ್ಕ್ವಾಡ್ನಿಂದಲೇ ಶಿಮ್ರಾನ್ ಹೇಟ್ಮೇಯರ್ ಅವರನ್ನು ಹೊರಹಾಕಿದೆ.

ಸಾಹಸ ಕ್ರೀಡೆ ಮಾಡಲು ಹೋಗಿ ಎಡವಿದ ರವೀಂದ್ರ ಜಡೇಜಾ
ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ನ ಸಂದರ್ಭದಲ್ಲಿ ಗಾಯಗೊಂಡ ಕಾರಣ ವಿಶ್ವಕಪ್ನಿಂದಲೂ ಹೊರಗುಳಿಯುವಂತಾಯಿತು. ಆದರೆ ಅವರ ಗಾಯ ಯಾವ ಕಾರಣಕ್ಕಾಯಿತು ಎಂಬುದು ತಿಳಿದರೆ ಮಾತ್ರ ವಿಪರ್ಯಾಸ ಎನಿಸದೆ ಇರಲಾರದು. ಏಷ್ಯಾಕಪ್ನ ಸಂದರ್ಭದಲ್ಲಿ ರವೀಂದ್ರ ಜಡೇಜಾ ಯುಎಇನ ಕಡೆಲ ಕಿನಾರೆಯಲ್ಲಿ ಸಾಹಸ ಕ್ರೀಡೆ ಮಾಡುವ ಸಂದರ್ಭದಲ್ಲಿ ಕಾಲಿಗೆ ತೀವ್ರ ಗಾಯಮಾಡಿಕೊಂಡಿದ್ದಾರೆ. ಹೀಗಾಗಿ ಹಲವು ತಿಂಗಳುಗಳ ವಿಶ್ರಾಂತಿಯ ಅನಿವಾರ್ಯತೆಗೆ ಸಿಲುಕಿದ್ದಾರೆ ಟೀಮ್ ಇಂಡಿಯಾದ ಅನುಭವಿ ಆಲ್ರೌಂಡರ್.

ಬ್ಯಾಟ್ಗೆ ಗುದ್ದಿ ಗಾಯಗೊಂಡ ಡೆವೋನ್ ಕಾನ್ವೆ
ಈ ಘಟನೆ ನಡೆದಿರುವುದು ಕಳೆದ ವರ್ಷ ಯುಎಇನಲ್ಲಿ ನಡೆದ ವಿಶ್ವಕಪ್ನ ಸಂದರ್ಭದಲ್ಲಿ. ನ್ಯೂಜಿಲೆಂಡ್ ತಂಡದ ಆರಂಬಿಕ ಆಟಗಾರ ಡೆವೋನ್ ಕಾನ್ವೆ ವಿಕೆಟ್ ಕಳೆದುಕೊಂಡ ಹತಾಶೆಯಲ್ಲಿ ಕೈಯಿಂದ ಬ್ಯಾಟ್ಗೆ ಬಲವಾಗಿ ಗುದ್ದಿದ್ದರು. ಇದರ ಪರಿಣಾಮವಾಗಿ ಅವರ ಬೆರಳಿನ ಮೂಳೆ ಮುರಿದಿತ್ತು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶದಿಂದ ಡೆವೋನ್ ಕಾನ್ವೆ ವಂಚಿತವಾದರು.

ಗಾಲ್ಫ್ ಆಡುತ್ತಾ ಗಾಯಕ್ಕೊಳಗಾದ ಜಾನಿ ಬೈರ್ಸ್ಟೋವ್
ಇಂಗ್ಲೆಂಡ್ ತಂಡದ ಆರಂಬಿಕ ಆಟಗಾರ ಜಾನಿ ಬೈರ್ಸ್ಟೋವ್ ಎಂಥಾ ವಿಧ್ವಂಸಕ ಆಟಗಾರ ಎಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ಇತ್ತೀಚೆಗಿನ ಅವರ ಫಾರ್ಮ್ ಅಮೋಘವಾಗಿತ್ತು. ಆದರೆ ವಿಶ್ವಕಪ್ಗೆ ಕೆಲವೇ ತಿಂಗಳುಗಳಿರುವಾಗ ದೊಡ್ಡ ಎಡವಟ್ಟೊಂದನ್ನು ಮಾಡಿದ್ದರು ಜಾನಿ ಬೈರ್ಸ್ಟೋವ್. ಗಾಲ್ಫ್ ಆಡುತ್ತಿದ್ದ ಸಂದರ್ಭದಲ್ಲಿ ಜಾನಿ ಬೈರ್ಸ್ಟೋವ್ ತೀವ್ರಗಾಯಕ್ಕೆ ತುತ್ತಾದರು. ಹೀಗಾಗಿ ಅವರಿಗೂ ಕೆಲ ತಿಂಗಳುಗಳ ವಿಶ್ರಾಂತಿಯ ಅಗತ್ಯವಿದ್ದು ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ.

ಮೀನಿನ ಟ್ಯಾಂಕ್ನಿಂದಾಗಿ ಗಾಯಗೊಂಡ ಜೋಫ್ರಾ ಆರ್ಚರ್
ಇಂಗ್ಲೆಂಡ್ ತಂಡದ ಪ್ರತಿಭಾವಂತ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ವಿಚಿತ್ರ ರೀತಿಯಲ್ಲಿ ಗಾಯಗೊಂಡು ಸುದೀರ್ಘ ಕಾಲದಿಂದ ಕ್ರಿಕೆಟ್ನಿಮದಲೇ ದೂರವುಳಿಯುವ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ಗೂ ಮುನ್ನವೇ ಈ ಘಟನೆ ನಡೆದಿತ್ತು. ಹೀಗಾಗಿ ಕಳೆದ ವರ್ಷದ ಟಿ20 ವಿಶ್ವಕಪ್ ತಂಡದಲ್ಲಿಯೂ ಜೋಫ್ರಾ ಆರ್ಚರ್ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ತಮ್ಮ ಮನೆಯ ಮೀನಿನ ಟ್ಯಾಂಕ್ಅನ್ನು ಸ್ವಚ್ಚಗೊಳಿಸುತ್ತಿದ್ದ ಸಂದರ್ಭದಲ್ಲಿ ಜೋಫ್ರಾ ಆರ್ಚರ್ ಗಾಯಗೊಂಡಿದ್ದಾರೆ. ಅದಾದ ಬಳಿಕ ಆರ್ಚರ್ಗೆ ಮೊಣಕೈ ಸಮಸ್ಯೆ ಕಾಡಲಾರಂಭಿಸಿದೆ. ಹೀಗಾಗಿ ಸದ್ಯ ಜೋಫ್ರಾ ಆರ್ಚರ್ ಕ್ರಿಕೆಟ್ ಚಟುವಟಿಕೆಗಳಿಂದ ದೂರವುಳಿದಿದ್ದಾರೆ.


Click it and Unblock the Notifications












