
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಡಿಆರ್ಎಸ್ ವಿಚಾರವಾಗಿ ಗೊಂದಲವುಂಟಾಗಿತ್ತು. ಪರದೆಯಲ್ಲಿ ರಿಪ್ಲೇ ಪ್ರಸಾರವಾದ ಬಳಿಕ ಟೀಮ್ ಇಂಡಿಯಾ ಡಿಆರ್ಎಸ್ ಮನವಿ ಮಾಡಿದೆ ಎಂದು ಅಂತಿಮ ಕ್ಷಣದಲ್ಲಿ ಡಿಆರ್ಎಸ್ ಅನ್ನು ನಿರಾಕರಿಸಲಾಗಿತ್ತು. ಈ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಡಿಆರ್ಎಸ್ ಗೊಂದಲದ ಘಟನೆಗೆ ವಿರಾಟ್ ಕೊಹ್ಲಿ ಪಂದ್ಯದ ಅಧಿಕಾರಿಗಳನ್ನು ಹೊಣೆ ಮಾಡಿದ್ದಾರೆ. ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ನಲ್ಲಿ ಈ ರೀತಿಯ ಗೊಂದಲಗಳು ಆಗಬಾರದು ಎಂದು ಕೊಹ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಡಿಆರ್ಎಸ್ ಮನವಿ ಮಾಡಲು ತಂಡಕ್ಕೆ 15 ಸೆಕೆಂಡ್ಗಳ ಕಾಲಾವಕಾಶವಿರುತ್ತದೆ. ಆದರೆ ಮ್ಯಾಥ್ಯೂ ವೇಡ್ ಅವರ ಎಲ್ಬಿಡಬ್ಲ್ಯೂ ಡಿಆರ್ಎಸ್ ಪಡೆಯಲು ಆಟಗಾರರ ಜೊತೆಗೆ ಚರ್ಚಿಸುತ್ತಿದ್ದಾಗ ಹದಿನೈದು ಸೆಕೆಂಡ್ಗಳು ಆಗುವ ಮುನ್ನವೇ ಪರದೆಯಲ್ಲಿ ರಿಪ್ಲೇ ಪ್ರಸಾರವಾಗಿತ್ತು. ಈ ಕಾರಣದಿಂದಾಗಿ ಡಿಆರ್ಎಸ್ ನಿರಾಕರಿಸಲಾಯಿತು ಎಂದು ವಿರಾಟ್ ಕೊಹ್ಲಿ ವಿವರಿಸಿದ್ದಾರೆ.
ವರ್ಚುವಲ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕೊಹ್ಲಿ "ಆ ಎಲ್ಬಿಡಬ್ಲ್ಯು ನಿಜಕ್ಕೂ ವಿಪರ್ಯಾಸದ ಸಂಗತಿ. ಯಾಕೆಂದರೆ ಎಲ್ಬಿಡಬ್ಲ್ಯು ಬಗ್ಗೆ ಆಟಗಾರರ ಜೊತೆಗೆ ಆಗಿನ್ನೂ ನಾವು ಚರ್ಚಿಸುತ್ತಿದ್ದೆವು. ಆದರೆ 15 ಸೆಕೆಂಡ್ ಆಗುವ ಮುನ್ನವೇ ಪರದೆಯಲ್ಲಿ ರಿಪ್ಲೇ ಪ್ರಸಾರವಾಗಿತ್ತು" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
"ನಾವು ಡಿಆರ್ಎಸ್ಗೆ ಹೋಗಲು ನಿರ್ಧರಿಸಿದ್ದೆವು. ಆದರೆ ಅಂಪಾಯರ್ಗಳು ಅದಕ್ಕೆ ನಿರಾಕರಿಸಿದರು. ಇಂತಾ ತಪ್ಪುಗಳು ಅತ್ಯುನ್ನತ ಸಂದರ್ಭಗಳಲ್ಲಿ ನಡೆಯಬಾರದು. ನಿರ್ಣಾಯಕ ಪಂದ್ಯಗಳಲ್ಲಿ ಇಂತಾ ತಪ್ಪುಗಳು ದೊಡ್ಡ ಪರಿಣಾಮವನ್ನುಂಡು ಮಾಡುತ್ತದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.