
ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸರಣಿಗೆ ಸೋಮವಾರ ಟೀಮ್ ಇಂಡಿಯಾದ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ ಈ ಮೂರು ಮಾದರಿಯ ಸರಣಿಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸದ್ಯ ಐಪಿಎಲ್ನಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಶರ್ಮಾ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿಲ್ಲ.
ಆದರೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡದಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಅಭ್ಯಾಸ ಶಿಬಿರದ ಸಂದರ್ಭದಲ್ಲಿ ರೋಹಿತ್ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡ ಫೋಟೋ ಹಾಗೂ ವಿಡಿಯೋ ಹಂಚಿಕೊಂಡ ಬಳಿಕ ಈ ಬಗ್ಗೆ ಚರ್ಚೆಗಳು ತೀವ್ರವಾಗಿದೆ. ಆಯ್ಕೆಗಾರರ ಆಯ್ಕೆ ಕ್ರಮದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ದೀಪ್ದಾಸ್ ಗುಪ್ತ ಪ್ರತಿಕ್ರಿಯೆ ನೀಡಿದ್ದಾರೆ.
ರೋಹಿತ್ ಶರ್ಮಾ ಕಳೆದ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿಲ್ಲ ನಿಜ. ಆದರೆ ನನಗನಿಸುತ್ತೆ ಮುಂಬೈ ಇಂಡಿಯನ್ಸ್ ಪರವಾಗಿ ಅವರು ಕಣಕ್ಕಿಳಿಯಲು ಸದೃಢರಾಗಿದ್ದಾರೆ ಹಾಗೂ ಮುಂದೆ ಅವರು ಟೀಮ್ ಇಂಡಿಯಾ ತಂಡದ ಭಾಗವಾಗಲಿದ್ದಾರೆ. ಆದರೆ ನನಗೆ ಈಗ ತಿಳಿದಿರುವುದೇನೆಂದರೆ ಅವರಿನ್ನೂ 50:50 ಸಾಧ್ಯತೆಯಲ್ಲಿದ್ದಾರೆ. ಈ ಮಧ್ಯೆಯೂ ಅವರು ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ಗುಪ್ತ ಹೇಳಿದ್ದಾರೆ.
"ನನಗನಿಸುತ್ತೆ ಎದು ಕೇವಲ ಸಮಯದ ಸಂಗತಿಯಾಗಿದೆ. ಆದಷ್ಟು ಶೀಘ್ರದಲ್ಲಿ ಅವರು ಆಡಲು ಕಣಕ್ಕಿಳಿಯಲಿದ್ದಾರೆ. ಇದು ಮಂಡಿರಜ್ಜು ಸಂಗತಿಯಾಗಿದ್ದು ಆಟಗಾರ 100ಶೇಕಡಾ ಸಿದ್ದರಾಗದೆ ಕಣಕ್ಕಿಳಿಸಲು ಸಾಧ್ಯವಿಲ್ಲ" ಎಂದು ದೀಪ್ದಾಸ್ ಗುಪ್ತ ಹೇಳಿದ್ದಾರೆ.
ರೋಹಿತ್ ಶರ್ಮಾ ಫಿಟ್ ಆಗಿದ್ದರೆ ಅವರು ಖಂಡಿತಾ ತಂಡದಲ್ಲಿರಲೇಬೇಕು. ಬಹುಶಃ ಮಯಾಂಕ್ ಅಗರ್ವಾಲ್ ಗಾಯ ಅಷ್ಟು ಗಂಭೀರವಾಗಿಲ್ಲದಿರಬಹುದು. ಹಾಗಾಗಿ ಅವರನ್ನು ತಂಡದಲ್ಲಿ ಸೇರಿಸಿಕೊಂಡಿಬಹುದು. ಆದರೆ ಉಪನಾಯಕನಾಗಿ ಕೆಎಲ್ ರಾಹುಲ್ ಅವರ ಆಯ್ಕೆಯನ್ನು ತಡೆಹಿಡಿಯಬಹುದಾಗಿತ್ತು. ರೋಹಿತ್ ಶರ್ಮಾ ಗಾಯದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಂಡು ಒಂದು ವಾರಗಳಷ್ಟು ಕಾದ ಬಳಿಕ ಉಪನಾಯಕನನ್ನಾಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಬಹುದಾಗಿತ್ತು ಎಂದು ದೀಪ್ದಾಸ್ ಗುಪ್ತ ಹೇಳಿದ್ದಾರೆ.